Monday, May 16, 2011

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.

Monday, May 9, 2011

ಒಸಾಮ ಸತ್ತರೆ ನಾವ್ಯಾಕೆ ಕುಣಿಯಬೇಕು?

ಮನುಷ್ಯನ ರೋಷಕ್ಕೆ ಬೆಂಕಿಯ ಶಕ್ತಿ ಇದ್ದಿದ್ದರೆ ಕಳೆದ ಒಂದು ವಾರದ ಅವಧಿಯಲ್ಲಿ ಪಾಕಿಸ್ತಾನ ಸುಟ್ಟು ಬೂದಿಯಾಗಿ ಹೋಗಬೇಕಾಗಿತ್ತು. ಪಾಕಿಸ್ತಾನದಲ್ಲಿದ್ದ ಪಾತಕಿ ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕದ ‘ಸೀಲ್’ಗಳು ಹೊಡೆದುರುಳಿಸಿದ ಮರುಕ್ಷಣದಲ್ಲಿಯೇ ನಮ್ಮಲ್ಲಿನ ‘ದೇಶಪ್ರೇಮಿ’ಗಳ ರೋಮರೋಮಗಳು ನಿಮಿರಿ ನಿಂತುಬಿಟ್ಟಿವೆ.

‘ಯುದ್ಧ ಘೋಷಿಸಿ’ ‘ಬಾಂಬು ಹಾಕಿ’, ‘ತಲೆ ಕಡಿದು ತನ್ನಿ’ ಎಂದೆಲ್ಲಾ ವೀರಾವೇಶದ ಚೀತ್ಕಾರಗಳು ಪ್ರತಿದಿನ ಕೇಳುತ್ತಲೇ ಇವೆ. ಆಶ್ಚರ್ಯವೆಂದರೆ ಈ ರೀತಿಯ ವೀರಾವೇಶದ ಸಲಹೆಗಳನ್ನು ನೀಡುವವರಲ್ಲಿ ‘ಭಯೋತ್ಪಾದಕರ ಕೈಹಿಡಿದು ಕರೆದುಕೊಂಡು ಹೋಗಿ ತಾಲಿಬಾನಿಗಳಿಗೆ ಒಪ್ಪಿಸಿದ’ ಪಕ್ಷದ ‘ದೇಶಪ್ರೇಮಿ’ಗಳೂ ಇದ್ದಾರೆ. ನಮ್ಮಲ್ಲಿ ಮಾತ್ರವಲ್ಲ, ಅಮೆರಿಕದ ಜನತೆಗೂ ‘ದೇಶಪ್ರೇಮ’ದ ಸಮೂಹ ಸನ್ನಿ ಹಿಡಿದುಬಿಟ್ಟಿದೆ. ಆ ದೇಶದ ಅಧ್ಯಕ್ಷ ಬರಾಕ್ ಒಬಾಮ ಈಗ ಎಲ್ಲರ ಕೊಂಡಾಟದ ನಾಯಕ.
ಒಸಾಮ ಬಿನ್ ಲಾಡೆನ್ ಸಾವಿನಿಂದ ವಿಶ್ವಕ್ಕೆ ಆಗಲಿರುವ ಲಾಭ-ನಷ್ಟಗಳೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು, ಆದರೆ ಆತನ ಸಾವಿನಿಂದಾಗಿ ತಕ್ಷಣಕ್ಕೆ ವಿಶ್ವದ ಇಬ್ಬರು ನಾಯಕರಿಗೆ ಲಾಭವಾಗಿದೆ. ಒಬ್ಬರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಇನ್ನೊಬ್ಬರು ಭಾರತದ ಪ್ರಧಾನಿ ಮನಮೋಹನ್ ಸಿಂಗ್. ದೀರ್ಘಾವಧಿಯ ಸಾಲದ ಬಾಧೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಅಮೆರಿಕನರು ಭ್ರಮನಿರಸನದತ್ತ ಸಾಗುತ್ತಿದ್ದಾಗಲೇ ಒಬಾಮ ಅವರಿಗೆ ಒಸಾಮ ಸಾವು ಜೀವದಾನ ಮಾಡಿದೆ.
ಅಮೆರಿಕದ ಪತ್ರಿಕೆಗಳು ಆಗಲೇ ಪೈಪೋಟಿಗೆ ಬಿದ್ದು ಒಬಾಮ ಅವರನ್ನು ಹಾಡಿ ಹೊಗಳತೊಡಗುತ್ತಿವೆ. ಭಾರತದಲ್ಲಿ ಭ್ರಷ್ಟಾಚಾರದ ಹಗರಣಗಳ ಭೂತ ಪ್ರಧಾನಿ ಕಾರ್ಯಾಲಯದ ಬಾಗಿಲನ್ನು ಬಡಿಯುತ್ತಿದ್ದಾಗಲೇ ಸ್ಫೋಟಗೊಂಡ ಒಸಾಮ ಸಾವಿನ ಸುದ್ದಿ ಜನರ ದೇಶಪ್ರೇಮವನ್ನು ಬಡಿದೆಬ್ಬಿಸಿದೆ. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಒಂದಷ್ಟು ದಿನ ನಿಶ್ಚಿಂತೆಯಾಗಿರಬಹುದು. ಇಷ್ಟೇನಾ ಒಸಾಮ ಸಾವಿನ ಪರಿಣಾಮ?
ಹೌದು, ಸದ್ಯಕ್ಕೆ ಕಾಣುವುದಿಷ್ಟೆ. ಒಸಾಮನನ್ನು ಸಾಯಿಸುವುದೇನು ಬಂತು? ಅಲ್‌ಖೈದಾ ಸಂಘಟನೆಯ ಪಾಲಿಗೆ ಒಸಾಮ ಸತ್ತು ಬಹಳ ದಿನಗಳಾಗಿ ಹೋಗಿತ್ತು ಎನ್ನುವ ಸುದ್ದಿ ನಿಧಾನವಾಗಿ ಸೋರಿ ಹೊರಬರುತ್ತಿದೆ. ಅಲ್‌ಖೈದಾ ಸಂಘಟನೆಯೊಳಗೆ ಭುಗಿಲೆದ್ದಿರುವ ಅಧಿಕಾರದ ಸಂಘರ್ಷ ಲಾಡೆನ್‌ನನ್ನು ಅಪ್ರಸ್ತುತ ಮಾಡಿತ್ತು.
ಇನ್ನಷ್ಟು ದಿನಗಳು ಕಳೆದಿದ್ದರೆ ಸಂಗಾತಿಗಳೇ ಆತನನ್ನು ಮುಗಿಸಿಬಿಡುತ್ತಿದ್ದರೇನೋ? ಈ ಹಿನ್ನೆಲೆಯಿಂದಾಗಿಯೇ ಒಸಾಮ ಸುಳಿವನ್ನು ಅಮೆರಿಕನರಿಗೆ ಸಂಘಟನೆಯೊಳಗಿನ ನಾಯಕರೇ ನೀಡಿರಬಹುದೆಂಬ ಗುಮಾನಿ ಹುಟ್ಟಿಕೊಂಡಿರುವುದು. ಒಸಾಮ ಇನ್ನಷ್ಟು ದಿನ ಬದುಕಿದ್ದರೂ ಆತನಿಂದಾಗಿ ಮುಸ್ಲಿಂ ಭಯೋತ್ಪಾದನೆ ಆಕಾಶದೆತ್ತರಕ್ಕೆ ಬೆಳೆಯುತ್ತಿರಲಿಲ್ಲ, ಆತನ ಸಾವಿನಿಂದ ಅದು ಪಾತಾಳಕ್ಕೆ ಇಳಿದು ಸಮಾಧಿಯಾಗುವುದೂ ಇಲ್ಲ.
ಈಗ 34ಕ್ಕೂ ಹೆಚ್ಚು ದೇಶಗಳಲ್ಲಿ ಅಲ್‌ಖೈದಾ ನೆಲೆಗಳಿವೆ. ನೇರವಾಗಿ ಪ್ರವೇಶಿಸಲು ಸಾಧ್ಯ ಇಲ್ಲದ ದೇಶಗಳಲ್ಲಿನ ಸ್ಥಳೀಯ ಇಸ್ಲಾಂ ಭಯೋತ್ಪಾದಕ ಸಂಘಟನೆಗಳ ಜತೆ ಅದು ಸಂಬಂಧ ಸ್ಥಾಪಿಸಿಕೊಂಡಿದೆ. ಈಗ ಅಲ್‌ಖೈದಾಕ್ಕೆ ಒಸಾಮನ ಹೆಸರಷ್ಟೇ ಬೇಕು. ಈ ನಡುವೆ ಸಂಘಟನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೈಪೋಟಿಗೆ ಇಳಿದಿರುವ ಅಲ್‌ಖೈದಾದ ಎರಡನೇ ಸಾಲಿನ ನಾಯಕರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಭಯೋತ್ಪಾದನೆಯನ್ನು ತೀವ್ರಗೊಳಿಸುವ ಅಪಾಯವೂ ಇದೆ.
ಒಸಾಮ ಜೀವಂತವಾಗಿದ್ದುಕೊಂಡು ಏನೆಲ್ಲ ಮಾಡಲು ಸಾಧ್ಯ ಇತ್ತೋ, ಅವುಗಳನ್ನೆಲ್ಲ ಅಲ್‌ಖೈದಾ ಅಸ್ತಿತ್ವಕ್ಕೆ ಬಂದ 23 ವರ್ಷಗಳಲ್ಲಿ ಆತ ಮಾಡಿ ಬಿಟ್ಟಿದ್ದಾನೆ. ಆತ ಅಮೆರಿಕದ ಬೆನ್ನು ಹತ್ತಿಯೇ ಹದಿನೆಂಟು ವರ್ಷಗಳು ಕಳೆದಿವೆ. 9/11 ದಾಳಿಯ ಎಂಟು ವರ್ಷ ಮೊದಲು 1993ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರ ಮೊದಲ ದಾಳಿ ನಡೆದಿತ್ತು.
ಈಗ ಅಮೆರಿಕದ ಪೊಲೀಸರ ವಶದಲ್ಲಿರುವ ಆ ದಾಳಿಯ ರೂವಾರಿ ರಮ್ಜಿ ಯುಸೂಫ್ ಕೂಡಾ ಒಸಾಮ ಬಿನ್ ಲಾಡೆನ್ ಶಿಷ್ಯ. ಕೈಸನ್ನೆಯಿಂದಲೇ ಒಂದು ದೇಶವನ್ನು ನೆಲಸಮ ಮಾಡಿಬಿಡಬಲ್ಲಂತಹ ದೈತ್ಯ ಶಕ್ತಿಯ, ಇದಕ್ಕಾಗಿ ಎಂದೂ ಮುಗಿಯದ ಅಕ್ಷಯ ಸ್ವರೂಪಿ ಸಂಪನ್ಮೂಲವನ್ನು ವ್ಯಯಿಸಬಲ್ಲ ಶ್ರೀಮಂತಿಕೆಯ, ಬೆರಳತುದಿಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹಿಡಿದುಕೊಂಡಿರುವ, ಮನಸ್ಸುಮಾಡಿದರೆ ನಮ್ಮ ಮಲಗುವ ಕೋಣೆಯೊಳಗೂ ಇಣುಕಬಲ್ಲ ಗುಪ್ತಚರ ಸಾಮರ್ಥ್ಯ ಹೊಂದಿರುವ ದೇಶಕ್ಕೆ ಒಬ್ಬ ಭಯೋತ್ಪಾದಕನನ್ನು ಕೊಂದು ಹಾಕಲು ಹದಿನೆಂಟು ವರ್ಷಗಳು ಬೇಕಾಯಿತೇ?
ಈ ಹದಿನೆಂಟು ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಅದರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಯಾರು ಹೊಣೆ? ಅಮೆರಿಕ ಅಲ್ಲವೇ? ಅಮೆರಿಕದ ವೀರಗಾಥೆಯನ್ನು ಇತಿಹಾಸದ ಪುಟಗಳಲ್ಲಿ ವರ್ಣರಂಜಿತವಾಗಿ ದಾಖಲಿಸಲು ಹೊರಟವರು ಅದೇ ಇತಿಹಾಸ ಕೇಳುವ ಈ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.
ಅಮೆರಿಕದ ಈ ವೈಫಲ್ಯ ಮತ್ತು ಸ್ವಭಾವ ಸಹಜ ಧೂರ್ತತನದಿಂದಾಗಿ ಉಳಿದ ಎಲ್ಲ ದೇಶಗಳಿಗಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸಿದ್ದು ಭಾರತ ಎನ್ನುವುದನ್ನು ಹೇಗೆ ಮರೆಯಲು ಸಾಧ್ಯ? ಆಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ನಡೆಸಿದ ದುಸ್ಸಾಹಸ ಸೋಲಿನಲ್ಲಿ ಕೊನೆಗೊಂಡ ನಂತರದ ಅವಧಿಯ ವಿದ್ಯಮಾನಗಳನ್ನು ನೋಡುತ್ತಾ ಬಂದರೆ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರುವಾಗಿ ಅಮೆರಿಕವೇ ನಮಗೆ ಕಾಣಿಸುತ್ತದೆ.
ಮೊದಲನೆಯದಾಗಿ, ಸೋವಿಯತ್ ರಷ್ಯಾವನ್ನು ಸೋಲಿಸುವ ಮೂಲಕ ಭಾರತ ಬಹುವಾಗಿ ನೆಚ್ಚಿಕೊಂಡಿದ್ದ ಮಿತ್ರರಾಷ್ಟ್ರವನ್ನು ಅಮೆರಿಕ ಕಿತ್ತುಕೊಂಡಿತು. ಇದರಿಂದಾಗಿ ಭಾರತೀಯ ಉಪಖಂಡದಲ್ಲಿ ಅಮೆರಿಕದ ಅಟ್ಟಹಾಸಕ್ಕೆ ಇದಿರಾಡುವವರೇ ಇಲ್ಲದಂತಾಯಿತು. ಎರಡನೆಯದಾಗಿ, ಭಾರತದ ನೆಲದಲ್ಲಿ ರಕ್ತದೋಕುಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಸೃಷ್ಟಿಸಿದ್ದು ಕೂಡಾ ಅಮೆರಿಕವೇ.
ಸೋವಿಯತ್ ರಷ್ಯಾವನ್ನು ಮಣಿಸುವ ಉದ್ದೇಶ ಸಾಧಿಸಿದ ನಂತರ ಅಮೆರಿಕ ಆಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿತು. ಇದರಿಂದಾಗಿ ಬಾಡಿಗೆ ಬಂಟರಾಗಿದ್ದ ಮುಜಾಹಿದ್‌ಗಳು ಒಮ್ಮಿಂದೊಮ್ಮೆಲೇ ನಿರುದ್ಯೋಗಿಗಳಾಗಿ ಹೋದರು.
ಕೊಲೆಗಡುಕರನ್ನು ಸೃಷ್ಟಿಸಿ ಕೆಲಸ ಮುಗಿದ ಮೇಲೆ ಅವರು ಸಾಮಾನ್ಯ ಮನುಷ್ಯರಂತೆ ಜೀವನ ಸಾಗಿಸಬೇಕೆಂದು ನಿರೀಕ್ಷಿಸುವುದು ಮೂರ್ಖತನ.
ಈ ನಿರುದ್ಯೋಗಿ ಮುಜಾಹಿದ್‌ಗಳಲ್ಲಿ ಒಂದಷ್ಟು ಮಂದಿ ತಾಲಿಬಾನ್ ಕಟ್ಟಲು ತೊಡಗಿಕೊಂಡರೆ ಉಳಿದವರಿಗೆ ಪಾಕಿಸ್ತಾನ ಕಾಶ್ಮೀರದಲ್ಲಿ ‘ಸ್ವಾತಂತ್ರ್ಯ ಹೋರಾಟ’ದ ಉದ್ಯೋಗ ಕಲ್ಪಿಸಿಕೊಟ್ಟಿತು. ಇದರ ಪರಿಣಾಮವಾಗಿಯೇ 1989ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಉಲ್ಬಣಗೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ತರಬೇತಿ ಶಿಬಿರಗಳು ತಲೆ ಎತ್ತಿದ್ದು ಮತ್ತು ಗಡಿ ನುಸುಳುವಿಕೆಯ ಪ್ರಮಾಣ ಹೆಚ್ಚಿದ್ದು. ಇದು ಅಮೆರಿಕದ ಆಗಿನ ಅಧ್ಯಕ್ಷ ರೋನಾಲ್ಡ್ ರೇಗನ್ ಭಾರತಕ್ಕೆ ನೀಡಿದ ‘ಕೊಡುಗೆ’.
9/11 ದಾಳಿಯ ನಂತರ ಅಮೆರಿಕದ ಪ್ರೇರಣೆಯಿಂದ ವಿಶ್ವಸಂಸ್ಥೆ ‘ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರ’ ಘೋಷಿಸಿದಾಗ ಉಳಿದೆಲ್ಲ ದೇಶಗಳಿಗಿಂತ ಹೆಚ್ಚಿನ ನಿರೀಕ್ಷೆ ಇದ್ದದ್ದು ಭಾರತಕ್ಕೆ. ‘ಭಯೋತ್ಪಾದಕರನ್ನು ಮಾತ್ರವಲ್ಲ, ಅವರ ಆಶ್ರಯದಾತರನ್ನೂ ನಾಶಮಾಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷರು ಗುಡುಗಿದಾಗ ಸಹಜವಾಗಿಯೇ ಭಾರತಕ್ಕೆ ಖುಷಿಯಾಗಿತ್ತು. ಪಾಕಿಸ್ತಾನವನ್ನು ಬಗ್ಗಿಸಲು ಇದೇ ಸುವರ್ಣಾವಕಾಶ ಎಂಬ ನಿರೀಕ್ಷೆ ಗರಿ ಕೆದರಿತ್ತು. ಆದರೆ ನಂತರ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆದು ಹೋದವು.
ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಭಾರತ ಅಲ್ಲ, ಪಾಕಿಸ್ತಾನ ಅಮೆರಿಕದ ಸಂಗಾತಿಯಾಗಿ ಹೋಯಿತು. ಆ ಎರಡೂ ದೇಶಗಳಿಗೆ ಅವುಗಳದ್ದೇ ಆಗಿರುವ ಸ್ವಾರ್ಥಪರ ಉದ್ದೇಶಗಳಿದ್ದವು. ಇವುಗಳ ನಡುವೆ ಒಂಟಿಯಾಗಿದ್ದು ಭಾರತ. ಅಮೆರಿಕದ ಸಮರಕ್ಕೆ ಭಾರತ ಘೋಷಿಸಿದ್ದು ಬೇಷರತ್ ಬೆಂಬಲ. ಆದರೆ ಪಾಕಿಸ್ತಾನದ್ದು ಷರತ್ತುಬದ್ದ ಬೆಂಬಲ.
ಈ ಸಮರದಲ್ಲಿ ಭಾರತ ಮತ್ತು ಇಸ್ರೇಲ್‌ಗಳನ್ನು ಸೇರಿಸಿಕೊಳ್ಳಬಾರದೆಂಬುದು ಅವುಗಳಲ್ಲೊಂದು ಷರತ್ತು. ಅಮೆರಿಕ ಅದಕ್ಕೆ ಒಪ್ಪಿಕೊಳ್ಳುವುದರ ಜತೆಗೆ ಆ ದೇಶಕ್ಕೆ ಭಾರಿ ಪ್ರಮಾಣದ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಒದಗಿಸಿತು. ಆರ್ಥಿಕ ದಿಗ್ಬಂಧನ ಮತ್ತು ಸೇನಾ ಆಡಳಿತದ ವೈಫಲ್ಯದಿಂದಾಗಿ ಕುಸಿದುಹೋಗಿದ್ದ ಪಾಕಿಸ್ತಾನ ಈ ನೆರವಿನಿಂದ ಚೇತರಿಸಿಕೊಂಡದ್ದು ಮಾತ್ರವಲ್ಲ, ಸೇನಾಬಲವನ್ನೂ ವೃದ್ಧಿಸಿಕೊಂಡಿತು. ಇದರ ಬಿಸಿ ತಗಲಿದ್ದು ಭಾರತಕ್ಕೆ.

ಆಫ್ಘಾನಿಸ್ತಾನದಲ್ಲಿ ಅಂದಾಜು 60 ಸಾವಿರ ತಾಲಿಬಾನ್ ಹೋರಾಟಗಾರರು ಇದ್ದಿರಬಹುದೆಂಬ ಅಂದಾಜು ಮಾಡಲಾಗಿತ್ತು.  ಪಾಕಿಸ್ತಾನದ ಐಎಸ್‌ಐ ಸಾಕುತ್ತಿದ್ದ ಈ ಜೆಹಾದಿಗಳೆಲ್ಲ ಅಮೆರಿಕದ ಕಾರ್ಯಾಚರಣೆಯಲ್ಲಿ ಸತ್ತಿರಲಾರರು. ಹಾಗಿದ್ದರೆ ಅಲ್ಲಿಂದ ಕಾಲುಕಿತ್ತ ಅವರೆಲ್ಲ ಎಲ್ಲಿ ಹೋದರು? ಪಾಕಿಸ್ತಾನ ಅವರನ್ನು ಭಾರತದ ಮೇಲೆ ಛೂ ಬಿಟ್ಟಿರುವುದರಲ್ಲಿ ಅನುಮಾನವೇ ಇಲ್ಲ.
ಅಮೆರಿಕದ ಜತೆ ಕೈಜೋಡಿಸಿದ್ದನ್ನು ವಿರೋಧಿಸುತ್ತಿದ್ದ ತಮ್ಮ ದೇಶದ ‘ಮಿಲಿಟರಿ-ಮದರಸಾ-ಮುಲ್ಲಾ’ ಕೂಟವನ್ನು ಒಲಿಸಿಕೊಳ್ಳಲು ಮುಷರಫ್ ಕಾಶ್ಮೀರದಲ್ಲಿನ ‘ಸ್ವಾತಂತ್ರ್ಯ ಹೋರಾಟ’ಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಾ ಬಂದರು. 9/11ರ ನಂತರ ಅಮೆರಿಕದಲ್ಲಿ ಯಾವುದೇ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ನಡೆದಿಲ್ಲ. ಆದರೆ ಆ ದೇಶದ ಕರೆಗೆ ಓಗೊಟ್ಟು ಬೆಂಬಲ ಘೋಷಿಸಿರುವ ದೇಶಗಳಲ್ಲಿ ಭಯೋತ್ಪಾದನೆ ನಿಂತಿಲ್ಲ. ಇವುಗಳ ಪೈಕಿ ದೊಡ್ಡ ಬಲಿಪಶು ಭಾರತ.
ಇವೆಲ್ಲದರ ಅರಿವಿದ್ದರೂ, ಇಂದಿಗೂ ಕಾಶ್ಮೀರದಲ್ಲಿ ನಡೆಯುತ್ತಿರುವುದು ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಲು ಅಮೆರಿಕ ಸಿದ್ಧ ಇಲ್ಲ. ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ ಆರೋಪಿಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ.
ಅವರಲ್ಲಿ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ನಿಂದ ಹಿಡಿದು, ಮುಂಬೈನ ತಾಜ್‌ಹೊಟೇಲ್ ಮೇಲೆ ದಾಳಿಯ ರೂವಾರಿ ಹಫೀಜ್ ಶಹೀದ್ ವರೆಗೆ 20ಕ್ಕೂ ಹೆಚ್ಚು ಮಂದಿ ಪಾತಕಿಗಳಿದ್ದಾರೆ. ಒಸಾಮ ರೀತಿಯಲ್ಲಿ ಇವರ್ಯಾರೂ ಅಡಗುತಾಣಗಳಲ್ಲಿಲ್ಲ. ಎಲ್ಲರೂ ರಾಜಾರೋಷವಾಗಿ ಪಾಕಿಸ್ತಾನದ ನಗರಗಳಲ್ಲಿ ಸುತ್ತಾಡುತ್ತಿದ್ದಾರೆ. ಇವರ ಅಪರಾಧದ ವಿವರಗಳೆಲ್ಲವೂ ಅಮೆರಿಕದ ಮುಂದೆ ಇದೆ.
ಅಮೆರಿಕ ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧದ ಜಾಗತಿಕ ಸಮರ ಪ್ರಾಮಾಣಿಕತೆಯಿಂದ ಕೂಡಿದ್ದರೆ ಈ ಪಾತಕಿಗಳನ್ನು ಯಾಕೆ ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಯಲಿಲ್ಲ? ‘ಅಮೆರಿಕದ ಎದುರು ಪಾಕಿಸ್ತಾನದ ಬಣ್ಣ ಬಯಲಾಗಿದೆ.ಇನ್ನೂ ಅದರ ಆಟ ನಡೆಯಲಾರದು. ನೋಡ್ತಾ ಇರಿ, ಅಮೆರಿಕ ಹೇಗೆ ಪಾಕಿಸ್ತಾನವನ್ನು ಮಣಿಸಲಿದೆ’ ಎಂದು ಹೇಳುವ ಮುಗ್ಧರು ಈಗಲೂ ನಮ್ಮಲ್ಲಿದ್ದಾರೆ.
ಅಂತಹದ್ದೇನೂ ಆಗಲಾರದು. ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಸೇನೆಯಲ್ಲಿ ಒಂದಷ್ಟು ಭಾಗವನ್ನು ಅಮೆರಿಕ ವಾಪಸು ಕರೆಸಿಕೊಳ್ಳಬಹುದು, ಆದರೆ ಪೂರ್ತಿ ಜಾಗ ಖಾಲಿ ಮಾಡಿಕೊಂಡು ಹೋಗಲಾರದು. ‘ತೊಲಗಿ ಹೋಗಿ’ ಎನ್ನುವ ಸ್ಥಿತಿಯಲ್ಲಿ ಎರಡೂ ದೇಶಗಳೂ ಇಲ್ಲ. ಹೊರಟು ಹೋಗುವುದು ಅಮೆರಿಕಕ್ಕೂ ಬೇಕಾಗಿಲ್ಲ. ಅದಕ್ಕೆ ಮಧ್ಯ ಏಷ್ಯಾದ ಮೇಲಿನ ನಿಯಂತ್ರಣಕ್ಕೆ ನೆಲೆ ಬೇಕು. ತನ್ನ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಮಾರುಕಟ್ಟೆ ಬೇಕು, ಸೂಪರ್ ಪವರ್ ಆಗಿ ಬೆಳೆಯುತ್ತಿರುವ ಚೀನಾವನ್ನು ಹದ್ದುಬಸ್ತಿನಲ್ಲಿಡಬೇಕು.
ಇದಕ್ಕಾಗಿ ಭಾರತದಂತಹ ಪ್ರಬಲ ಪ್ರಜಾತಾಂತ್ರಿಕ ದೇಶವನ್ನು ‘ಗುಲಾಮಿ ರಾಷ್ಟ್ರ’ವನ್ನಾಗಿ ಮಾಡಿಕೊಳ್ಳುವುದು ಸಾಧ್ಯ ಆಗಲಾರದು. ಈ ಉದ್ದೇಶ ಸಾಧನೆಗಾಗಿ ದುರ್ಬಲ ಪಾಕಿಸ್ತಾನ ಅಲ್ಲದೆ ಬೇರೆ ಯಾವ ದೇಶ ಸಿಕ್ಕೀತು? ಇಂತಹ ವ್ಯವಸ್ಥೆಯಲ್ಲಿ ಒಸಾಮನಂತಹ ನೂರು ಭಯೋತ್ಪಾದಕರು ಸತ್ತರೂ ಭಾರತದ ನೆಲದಲ್ಲಿ ಶಾಂತಿ ನೆಲೆಸಲಾರದು. ಅದು ಸಾಧ್ಯವಾಗಬೇಕಾದರೆ ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ವ್ಯವಸ್ಥೆ  ನಾಶವಾಗಬೇಕು. ಪಾಕಿಸ್ತಾನದ ತಲೆಮೇಲೆ ಅಮೆರಿಕದ ಅಭಯಹಸ್ತ ಇರುವವರೆಗೆ ಇದು ಸಾಧ್ಯವಾಗಲಾರದು.

Monday, May 2, 2011

ಪ್ರಶ್ನಿಸುವ ಸಂಸ್ಥೆಗಳ ಮೇಲೆಲ್ಲ ಕೆಂಗಣ್ಣು

ಭ್ರಷ್ಟಾಚಾರದ ನಿರ್ಮೂಲನೆಗಾಗಿ ‘ಅವತಾರವೆತ್ತಿ ಬರಲಿರುವ’ ಜನಲೋಕಪಾಲರ ನಿರೀಕ್ಷೆಯಲ್ಲಿ ದೇಶ ಮೈಮರೆತಿರುವಾಗಲೇ ಅದೇ ಉದ್ದೇಶಕ್ಕಾಗಿ ಬಹುಹಿಂದೆಯೇ ರಚನೆಗೊಂಡ ಸಂಸ್ಥೆಗಳಲ್ಲೊಂದಾದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ಯನ್ನು (ಪಿಎಸಿ) ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಎರಡು ರಾಜಕೀಯ ಪಕ್ಷಗಳ ನಡುವಿನ ಸಂಘರ್ಷದಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಪಿಎಸಿ ಸೇರಿದಂತೆ ತಮ್ಮನ್ನು ಪ್ರಶ್ನಿಸುವ ಅಧಿಕಾರ ಹೊಂದಿರುವ ಎಲ್ಲ ಸಂಸದೀಯ ಮತ್ತು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ರಾಜಕಾರಣಿಗಳು ಹೊಂದಿರುವ ಅಸಹನೆಯನ್ನು ಕಾಣಬಹುದಾಗಿದೆ.
ಸಿಬಿಐನಿಂದ ಹಿಡಿದು ಸಿವಿಸಿಯಂತಹ ಸಂಸ್ಥೆಗಳ ವರೆಗೆ, ಸ್ಪೀಕರ್‌ನಿಂದ ಹಿಡಿದು ನ್ಯಾಯಮೂರ್ತಿಗಳ ಹುದ್ದೆ ವರೆಗೆ ಎಲ್ಲವೂ ರಾಜಕಾರಣಿಗಳಿಂದ ನಿರಂತರವಾಗಿ ಚಾರಿತ್ರ್ಯಹನನಕ್ಕೆ ಒಳಗಾಗುತ್ತಾ ಬಂದಿವೆ. ಈಗ ಪಿಎಸಿ ಸರದಿ.
ಜನತೆಯ ಆಶೋತ್ತರಗಳ ಪ್ರತೀಕವಾಗಿರುವ ಸಂಸತ್, ಕಾನೂನು ರಚನೆಯ ಜತೆಯಲ್ಲಿ ಕಾರ್ಯಾಂಗದ ಕಾರ್ಯನಿರ್ವಹಣೆಯ ಮೇಲೂ ಕಣ್ಣಿಡುತ್ತದೆ. ಈ ಹೊಣೆ ನಿರ್ವಹಣೆಯಲ್ಲಿ ಸಂಸತ್‌ಗೆ ಪ್ರಧಾನ ಪಾತ್ರವಾದರೆ ಸಂಸದೀಯ ಸಮಿತಿಗಳಿಗೆ ಪೋಷಕ ಪಾತ್ರ. ಮೂರು ಹಣಕಾಸು ಸಮಿತಿಗಳಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿ; ಜತೆಗೆ, ವಿವಿಧ ವಿಷಯಗಳ ಮೇಲಿನ 15 ಸದನ ಸಮಿತಿ, 29 ಸಚಿವ ಖಾತೆಗಳ ಸಲಹಾ ಸಮಿತಿ ಹಾಗೂ ಹದಿನೇಳು ಇಲಾಖಾವಾರು ಸಮಿತಿಗಳು ಸೇರಿದಂತೆ ಒಟ್ಟು 64 ಸಂಸದೀಯ ಸಮಿತಿಗಳಿವೆ. ಇವುಗಳ ಜತೆಗೆ ಆಗಾಗ ಕೇಳಿಬರುವ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.
ಪ್ರಧಾನಪಾತ್ರ ವಹಿಸಬೇಕಾಗಿರುವ ಸಂಸತ್ ಇತ್ತೀಚೆಗೆ ತನ್ನ ಕಾರ್ಯನಿರ್ವಹಣೆಯಲ್ಲಿ ವಿಫಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೋಷಕ ಪಾತ್ರಗಳಾದ ಸಂಸದೀಯ ಸಮಿತಿಗಳ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿಯೇ ಇವುಗಳ ಮೇಲೆ ರಾಜಕಾರಣಿಗಳ ಕೆಂಗಣ್ಣು ಬಿದ್ದಿರುವುದು. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನಗಳಲ್ಲಿಯೇ ಕೇಂದ್ರ ಸರ್ಕಾರದ ಸಂಘರ್ಷಾತ್ಮಕ ನಿಲುವನ್ನು ಪ್ರತಿಭಟಿಸಿ ಎನ್‌ಡಿಎ ಸಂಸದೀಯ ಸಮಿತಿಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಈಗ ಯುಪಿಎ ಸದಸ್ಯರು ಪಿಎಸಿ ಅಧ್ಯಕ್ಷರನ್ನೇ ಕಿತ್ತುಹಾಕಲು ಹೊರಟಿದ್ದಾರೆ.
ರಾಷ್ಟ್ರೀಯ ಹಣಕಾಸು ವ್ಯವಹಾರದ ಮೇಲಿನ ಸಂಸದೀಯ ನಿಯಂತ್ರಣದ ಮೂಲಕವೇ ಕಾರ್ಯಾಂಗವನ್ನು ಶಾಸಕಾಂಗಕ್ಕೆ  ಉತ್ತರದಾಯಿಯನ್ನಾಗಿ ಮಾಡಲು ಸಾಧ್ಯ. ಈ ಸಂಸದೀಯ ನಿಯಂತ್ರಣಕ್ಕಾಗಿ ಇರುವ ಹಲವು ಸಾಧನಗಳಲ್ಲಿ ಮುಖ್ಯವಾದುದು ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’. ಈ ಸಮಿತಿ ನಿಷ್ಪಕ್ಷಪಾತವಾಗಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಾರದು. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಪಿಎಸಿ ರಚನೆಯಾಗಿತ್ತು. 1921ರಲ್ಲಿ ಸ್ಥಾಪನೆಗೊಂಡ ಪಿಎಸಿಗೆ ಆಗಿನ ಗವರ್ನರ್ ಜನರಲ್ ಮಂಡಳಿಯ ಹಣಕಾಸು ಸದಸ್ಯರೇ ಅಧ್ಯಕ್ಷರಾಗಿದ್ದರು.
ಲೋಕಸಭಾಧ್ಯಕ್ಷರ ನಿಯಂತ್ರಣಕ್ಕೆ ಒಳಪಡಿಸಿದ ಪಿಎಸಿ ರಚನೆಗೊಂಡದ್ದು ಸಂವಿಧಾನ ರಚನೆಯಾದ ನಂತರ. ಈಗ ವಿವಾದಕ್ಕೆ ಸಿಲುಕಿರುವ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ 1967ರವರೆಗೆ ಆಡಳಿತ ಪಕ್ಷದ ಸದಸ್ಯರೇ ನೇಮಕಗೊಳ್ಳುತ್ತಿದ್ದರು. ಆಶ್ಚರ್ಯವೆಂದರೆ ಈ ಸಂಪ್ರದಾಯ ತಪ್ಪಿಸಿ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ ವಿರೋಧಪಕ್ಷದ ನಾಯಕರನ್ನು ಮೊದಲು ನೇಮಕಮಾಡಿದ್ದು ನಂತರದ ದಿನಗಳಲ್ಲಿ ವಿರೋಧಪಕ್ಷಗಳಿಂದ ಸರ್ವಾಧಿಕಾರಿ ಎಂದು ದೂಷಣೆಗೊಳಗಾದ ಆಗಿನ ಪ್ರಧಾನಿ ಇಂದಿರಾಗಾಂಧಿ. ಆ ರೀತಿ ನೇಮಕಗೊಂಡವರು ಹಿರಿಯ ಸಂಸದೀಯಪಟು ಎಂ.ಎಚ್.ಮಸಾನಿ. ಆಗಿನ ಲೋಕಸಭಾಧ್ಯಕ್ಷ ನೀಲಂ ಸಂಜೀವ ರೆಡ್ಡಿ ಅವರು ಮಸಾನಿಯವರ ಕಾರ್ಯಪಟುತ್ವ, ನಿಷ್ಪಕ್ಷಪಾತ ನಡವಳಿಕೆ ಮತ್ತು ಬದ್ಧತೆಯನ್ನು ಕೊಂಡಾಡಿರುವುದು ಲೋಕಸಭೆ ದಾಖಲೆಯಲ್ಲಿವೆ. ಮೊನ್ನೆ ಅದೇ ‘ಪಿಎಸಿಯ ಅಧ್ಯಕ್ಷರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ’ ಎಂದು ಬಹುಸಂಖ್ಯಾತ ಸದಸ್ಯರು ಕೂಗಾಡಿದ್ದಾರೆ. ಅಧ್ಯಕ್ಷರು ಪಟ್ಟುಹಿಡಿದು ಸಮಿತಿ ಅಂಗೀಕಾರ ನೀಡದ ಕರಡು ವರದಿಯನ್ನೇ ಲೋಕಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಂಡಿಸಲಾಗುವ ಬಜೆಟ್‌ನ ನಂತರ ಜನತೆ ಕೂಡಾ ದೇಶದ ಆಯವ್ಯಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಬಹುಕೋಟಿ  ರೂಪಾಯಿ ಲೆಕ್ಕದ ಈ ಆರ್ಥಿಕ ವ್ಯವಹಾರ ಸಾಮಾನ್ಯ ಜನರ ತಲೆಗೆ ಹತ್ತುವುದು ಕೂಡಾ ಕಷ್ಟ. ಈ ಹಿನ್ನೆಲೆಯಲ್ಲಿಯೇ ಸಿಎಜಿ ಮತ್ತು ಪಿಎಸಿಯ ಪಾತ್ರ ಮಹತ್ವದ್ದು. ಬಜೆಟ್‌ನಲ್ಲಿ ನಿಗದಿಪಡಿಸಿದ ಅನುದಾನದ ಖರ್ಚಿನ ವಿವರವನ್ನು ಹೊಂದಿರುವ ಧನ ವಿನಿಯೋಗ ಲೆಕ್ಕಪತ್ರವನ್ನು ಸರ್ಕಾರದ ಪ್ರತಿಯೊಂದು ಇಲಾಖೆ ಸಂಸತ್‌ಗೆ ಸಲ್ಲಿಸಬೇಕಾಗುತ್ತದೆ.
ಈ ಲೆಕ್ಕಪತ್ರದ ಪರಿಶೋಧನೆ ನಡೆಸುವ ಮಹಾಲೇಖಪಾಲರು ಇಲಾಖಾವಾರು ವರದಿಗಳನ್ನು ತಯಾರಿಸಿ ಪಿಎಸಿಗೆ ಸಲ್ಲಿಸುತ್ತಾರೆ. ಸಂಸತ್‌ನ ಧನವಿನಿಯೋಗ ನಿಯಮಾವಳಿಗಳಿಗೆ ಅನುಗುಣವಾಗಿ ಸರ್ಕಾರಿ ಇಲಾಖೆಗಳು ಹಣ ಖರ್ಚು ಮಾಡಿವೆಯೇ ಎಂಬುದನ್ನು ಪರಿಶೀಲಿಸುವುದು ಪಿಎಸಿಯ ಕರ್ತವ್ಯ. ಸಿಎಜಿ ಮತ್ತು ಪಿಎಸಿ ಇಂತಹ ಪರಿಶೀಲನೆ ನಡೆಸುವಾಗಲೇ ಭ್ರಷ್ಟರ ಭಾನಗಡಿಗಳು ಹೊರಬೀಳುವುದು.
ವರದಿ ನೀಡುವವರೆಗೆ ಎಲ್ಲವೂ ಸರಿ. ನಂತರ? ಈಗಿನ ವಿವಾದವನ್ನೇ ಉದಾಹರಣೆಗಾಗಿ ತೆಗೆದುಕೊಂಡರೆ ಮುರಳಿ ಮನೋಹರ ಜೋಷಿ ಸಲ್ಲಿಸಿರುವ ವರದಿಯನ್ನು ಲೋಕಸಭಾಧ್ಯಕ್ಷರು ತಿರಸ್ಕರಿಸುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಅದು ಸಮಿತಿಯ ಅಂಗೀಕಾರ ಇಲ್ಲದ ಕರಡು ವರದಿ. ಪಿಎಸಿಯ ಅಂತಿಮ ವರದಿಗಳೇ ಶೈತ್ಯಾಗಾರದಲ್ಲಿರುವಾಗ ಈ ಕರಡು ವರದಿಯನ್ನು ಕೇಳುವವರಾರು? ಸಂಸತ್‌ಗೆ ಐವತ್ತು ವರ್ಷ ತುಂಬಿದ್ದ ಸಂದರ್ಭದಲ್ಲಿ ಪಿಎಸಿ ವರದಿಗಳ ಬಗ್ಗೆ ಒಂದು ಸಮೀಕ್ಷೆ ನಡೆದಿತ್ತು. ಅದರ ಪ್ರಕಾರ ಏಳನೇ ಲೋಕಸಭೆಯಿಂದ ಹದಿಮೂರನೇ ಲೋಕಸಭೆಯ ವರೆಗಿನ ಅವಧಿಯಲ್ಲಿ ಪಿಎಸಿ ಮಾಡಿರುವ 6113 ಶಿಫಾರಸುಗಳಲ್ಲಿ ಸರ್ಕಾರ ಒಪ್ಪಿಕೊಂಡಿದ್ದು 3709 ಮಾತ್ರ.
ಮುಕ್ತ ಮಾರುಕಟ್ಟೆಯಿಂದ ಪಡೆಯುವ ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಪಿಎಸಿ ನಿರಂತರವಾಗಿ ಶಿಫಾರಸು ಮಾಡುತ್ತಾ ಬಂದ ಕಾರಣದಿಂದಾಗಿಯೇ 2000ನೇ ವರ್ಷದಲ್ಲಿ ‘ಹಣಕಾಸು ಜವಾಬ್ದಾರಿ ಮಸೂದೆ’ ಮಂಡನೆಯಾಗಿದ್ದು. ಲೋಕಸಭೆಯ ಅವಧಿಯಲ್ಲಿ ಸಾರ್ವಜನಿಕ ಉದ್ಯಮಗಳ ಷೇರುವಿಕ್ರಯದ ಬಗ್ಗೆ ನೀಡಿದ ವರದಿಯಲ್ಲಿ ಪಿಎಸಿ ‘ಈ ವ್ಯವಹಾರದಲ್ಲಿ ಪಾರದರ್ಶಕತೆಯ ಅವಶ್ಯಕತೆಯಿದ್ದು ಇದರಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಗೊಳಿಸಬೇಕಾಗುತ್ತದೆ’ ಎಂದು ಹೇಳಿತ್ತು.
ಇದನ್ನು ಒಪ್ಪಿಕೊಂಡ ಆಗಿನ ಕೇಂದ್ರ ಸರ್ಕಾರ, ತನಿಖಾ ಸಮಿತಿಯನ್ನು ನೇಮಿಸಿತ್ತು. ವಸತಿ ಮಂಜೂರಾತಿಯಲ್ಲಿ ವಸತಿ ಸಚಿವರ ವಿವೇಚನಾಧಿಕಾರದ ದುರ್ಬಳಕೆ ತಡೆಯಬೇಕೆಂಬ ಪಿಎಸಿ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡು ಹೊಸ ನೀತಿಯೊಂದನ್ನು ರೂಪಿಸಿತ್ತು. ಇವು ಪಿಎಸಿ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡ ಕೆಲವು ಉದಾಹರಣೆಗಳು. ಇತ್ತೀಚಿನ ದಿನಗಳಲ್ಲಿ ಪಿಎಸಿ ಶಿಫಾರಸುಗಳನ್ನು ಒಪ್ಪಿಕೊಂಡಿದ್ದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು. ಪಿಎಸಿ ದೊಡ್ಡಕುಳಗಳತ್ತ ಕಣ್ಣು ಹಾಕಿದಾಗೆಲ್ಲ ಪ್ರತಿರೋಧ ಎದುರಾಗುತ್ತದೆ. ಕಾರ್ಗಿಲ್ ಯುದ್ಧದ ಕಾಲದಲ್ಲಿ ನಡೆದ ಶವಪೆಟ್ಟಿಗೆ ಖರೀದಿ ಅವ್ಯವಹಾರವನ್ನು ಸಿಎಜಿ ಬಯಲುಗೊಳಿಸಿದರೂ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಎನ್‌ಡಿಎ ಸರ್ಕಾರ ಬಿಟ್ಟುಕೊಡಲಿಲ್ಲ.
ಈಗ 2ಜಿ ತರಂಗಾಂತರದ ವ್ಯವಹಾರದಲ್ಲಿನ ಅಕ್ರಮದಲ್ಲಿ ಪ್ರಧಾನಿ ಕಾರ್ಯಾಲಯದ ಪಾತ್ರ ಉಲ್ಲೇಖಿಸಿದ ಕೂಡಲೇ ಪಿಎಸಿಯನ್ನೇ ಬರ್ಖಾಸ್ತುಗೊಳಿಸುವ ಪ್ರಯತ್ನ ನಡೆದಿದೆ.
ರಾಜ್ಯಗಳದ್ದೂ ಇದೇ ಸ್ಥಿತಿ. ಯಾವ ರಾಜ್ಯದಲ್ಲಿಯೂ ಪಿಎಸಿ ಕಾರ್ಯನಿರ್ವಹಣೆ ಸಮಾಧಾನಕರವಾಗಿಲ್ಲ. ಬಹಳಷ್ಟು ರಾಜ್ಯಗಳಲ್ಲಿ ಸರ್ಕಾರಿ ಇಲಾಖೆಗಳು ಬಜೆಟ್ ಅನುದಾನವನ್ನು ಮೀರಿ ಖರ್ಚು ಮಾಡಿವೆ. ಈ ಮಿತಿಮೀರಿದ ಖರ್ಚಿಗೆ ವಿಧಾನಮಂಡಲದ ಅಂಗೀಕಾರ ಅನಿವಾರ್ಯವಾದರೂ ಯಾರೂ ಆ ಬಗ್ಗೆ  ತಲೆಕೆಡಿಸಿಕೊಂಡಿಲ್ಲ. ಈ ಲೋಪವೇ ಹಣಕಾಸು ಅವ್ಯವಹಾರದ ಹಗರಣಗಳಿಗೆ ದಾರಿಮಾಡಿಕೊಡುತ್ತಿರುವುದು.

1987-88ರಿಂದ 1995-96ರ ವರೆಗೆ ಬಿಹಾರ ರಾಜ್ಯದ ಪಶುಸಂಗೋಪನಾ ಇಲಾಖೆ ಬಜೆಟ್ ನಿಗದಿಪಡಿಸಿದ್ದ ಅನುದಾನ ಮೀರಿ ಖರ್ಚು ಮಾಡುತ್ತಲೇ ಇತ್ತು. ಉದಾಹರಣೆಗೆ  1993-94 ರ ಅವಧಿಯಲ್ಲಿ ಬಜೆಟ್ ಅನುದಾನ 77 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 199 ಕೋಟಿ ರೂಪಾಯಿ, 1995-96ರಲ್ಲಿ ಬಜೆಟ್ ಅನುದಾನ 82 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 228 ಕೋಟಿ ರೂಪಾಯಿ. ಕೊನೆಗೊಂದು ದಿನ ಎಲ್ಲವೂ ಬಯಲಾಯಿತು. 1999ರ ಮಾರ್ಚ್ ತಿಂಗಳ ವರೆಗಿನ ಅವಧಿಯ ದಾಖಲೆಗಳ ಪ್ರಕಾರ ಬಜೆಟ್ ಮಿತಿಯನ್ನು ಮೀರಿ ರಾಜ್ಯಗಳಲ್ಲಿ ಖರ್ಚಾಗಿರುವ ಹಣದ ಮೊತ್ತ 93,000 ಕೋಟಿ ರೂಪಾಯಿ.
ರಾಜಕೀಯ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಪಿಎಸಿಗೆ ಸಾಧ್ಯವಾಗದೆ ಇರುವುದಕ್ಕೆ ಅದರ ರಚನೆಯಲ್ಲಿನ ದೋಷ ಮತ್ತು ಕಾರ್ಯನಿರ್ವಹಣೆಯಲ್ಲಿನ ಇತಿಮಿತಿಗಳೂ ಕಾರಣ. ಉದಾಹರಣೆಗೆ ಲೆಕ್ಕಪತ್ರವನ್ನು ಪರಿಶೀಲಿಸುವಾಗ ಸಂಬಂಧಿತ ಇಲಾಖೆಯ ಕಾರ್ಯದರ್ಶಿಗಳು ಪಿಎಸಿ ಮುಂದೆ ಹಾಜರಾಗಿ ಸಾಕ್ಷ್ಯ ನೀಡಬೇಕೆಂದು ಹೇಳುತ್ತದೆ ನಿಯಮ. ಆದರೆ ನಿರ್ದಿಷ್ಟ ಪ್ರಕರಣವನ್ನು ನಿರ್ವಹಿಸಿದ ಅಧಿಕಾರಿಗಳ ಸಾಕ್ಷ್ಯ ಕಡ್ಡಾಯ ಅಲ್ಲ. ಇದರಿಂದಾಗಿ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕದಲ್ಲಿ ಅಧಿಕಾರಿಗಳು ಮಾತ್ರವಲ್ಲ, ಅವಶ್ಯಕ ಸಂದರ್ಭಗಳಲ್ಲಿ  ಸಾರ್ವಜನಿಕ ವ್ಯಕ್ತಿಗಳಿಂದಲೂ ಸಾಕ್ಷ್ಯ ಸಂಗ್ರಹಿಸಬಹುದಾಗಿದೆ. ಪಿಎಸಿ ವರದಿ ನೀಡುವಾಗ ಆಗುತ್ತಿರುವ ವಿಳಂಬಕ್ಕೆ ಇನ್ನೊಂದು ಕಾರಣ ಸಾವಿರಾರು ಪುಟಗಳ ಸಿಎಜಿ ವರದಿ. ಇದರ ಬದಲಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮಹತ್ವದೆನಿಸಿದ ಪ್ರಕರಣಗಳ ಲೆಕ್ಕಪತ್ರಗಳ ವರದಿಯನ್ನಷ್ಟೇ ಸಿಎಜಿ ಸಲ್ಲಿಸಿದರೆ ಪಿಎಸಿ ಪರಿಶೀಲನೆಗೂ ಅನುಕೂಲವಾಗಬಹುದು ಎನ್ನುವ ಅಭಿಪ್ರಾಯ ಇದೆ.
ಪಿಎಸಿಯ ಕಾರ್ಯನಿರ್ವಹಣೆಯಲ್ಲಿನ ಮತ್ತೊಂದು ಸಮಸ್ಯೆ ವಿಳಂಬವಾಗಿ ಸಲ್ಲಿಸಲಾಗುವ ಲೆಕ್ಕಪತ್ರಗಳು. ಈಗ ವಿವಾದ ಸೃಷ್ಟಿಸಿರುವ 2ಜಿ ತರಂಗಾಂತರ ಹಗರಣ ನಡೆದಿದ್ದು 2007-2008ರ ಹಣಕಾಸು ವರ್ಷದಲ್ಲಿ. ಅಂದರೆ ಮೂರುವರ್ಷಗಳ ಹಿಂದಿನ ಲೆಕ್ಕಪತ್ರಗಳನ್ನು ಪಿಎಸಿ ಈಗ ಪರಿಶೀಲನೆ ನಡೆಸುತ್ತಿದೆ. ನಮ್ಮಲ್ಲಿನ ಪಿಎಸಿಗೆ ಬ್ರಿಟನ್ ಸಂಸತ್ ಮಾದರಿಯಾದರೂ ಅಲ್ಲಿನ ಎಲ್ಲ ನಿಯಮಾವಳಿಗಳನ್ನು ಇಲ್ಲಿ ಅಳವಡಿಸಲಾಗಿಲ್ಲ.

ಬ್ರಿಟನ್‌ನಲ್ಲಿ ಸರ್ಕಾರಿ ಇಲಾಖೆಗಳು ಪ್ರತಿವರ್ಷದ ಸೆಪ್ಟೆಂಬರ್ 30ರೊಳಗೆ ಲೆಕ್ಕಪತ್ರವನ್ನು ಸಿಎಜಿಗೆ ಸಲ್ಲಿಸುವುದು ಕಾನೂನು ಪ್ರಕಾರ ಕಡ್ಡಾಯ. ಮುಂದಿನ ಜನವರಿ ಅಂತ್ಯದೊಳಗೆ ದೃಢೀಕೃತ ಲೆಕ್ಕಪತ್ರವನ್ನು ಸಿಎಜಿ ಸಲ್ಲಿಸಬೇಕಾಗುತ್ತದೆ. ಆ ವರದಿಗಳನ್ನು ಎರಡು ತಿಂಗಳೊಳಗೆ ಪರಿಶೀಲನೆ ನಡೆಸಿ ಪಿಎಸಿ ತನ್ನ ವರದಿ ಸಲ್ಲಿಸಬೇಕೆಂಬ ನಿಯಮ ಇದೆ.
ಪಿಎಸಿಯ ಸುಧಾರಣೆ ನಡೆಯಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿದೆ. 
ಇದಕ್ಕೊಂದು ಸ್ಪಷ್ಟ ರೂಪು ನೀಡಿದ್ದು ನ್ಯಾಯಮೂರ್ತಿ ವೆಂಕಟಾಚಲಯ್ಯ ಅಧ್ಯಕ್ಷತೆಯ ಸಂವಿಧಾನ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನೆಯ ರಾಷ್ಟ್ರೀಯ ಆಯೋಗ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಸಾಂವಿಧಾನಿಕ ಸಂಸ್ಥೆಯಾಗಿ ಪುನರ್‌ರಚಿಸಿ ಹಕ್ಕುಬಾಧ್ಯತೆಗಳನ್ನು ಸ್ಪಷ್ಟಪಡಿಸಬೇಕು, ಪಿಎಸಿಯ ಅಧಿಕಾರವಧಿಯನ್ನು ಲೋಕಸಭೆ ಮತ್ತು ವಿಧಾನಸಭೆಯ ರೀತಿಯಲ್ಲಿ ಐದು ವರ್ಷಗಳಿಗೆ ನಿಗದಿಗೊಳಿಸಬೇಕು ಹಾಗೂ ರಾಜ್ಯಸಭೆಯಲ್ಲಿರುವ ವ್ಯವಸ್ಥೆಯಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದರಷ್ಟು ಸಮಿತಿ ಸದಸ್ಯರು ನಿವೃತ್ತರಾಗಿ ಹೊಸ ಸದಸ್ಯರ ನೇಮಕ ನಡೆಯಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದರ ಜತೆಗೆ ಸರ್ಕಾರಿ ಇಲಾಖೆಗಳು ಧನವಿನಿಯೋಗ ಲೆಕ್ಕಪತ್ರಗಳನ್ನು ಸಂಸತ್ ಮತ್ತು ವಿಧಾನಮಂಡಲಗಳಿಗೆ ಹಣಕಾಸು ವರ್ಷದ ಅಂತ್ಯದೊಳಗೆ  ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದೊಮ್ಮೆ ಬಜೆಟ್ ನಿಗದಿಪಡಿಸಿದ್ದ ಅನುದಾನದ ಮಿತಿ ಮೀರಿ ಖರ್ಚು ಮಾಡಿದ್ದರೆ ಅದಕ್ಕೆ ಆ ಹಣಕಾಸು ವರ್ಷದೊಳಗೆ ಅಂಗೀಕಾರ ಪಡೆಯಬೇಕು ಎಂಬ ಸಲಹೆಗಳು ಕೂಡಾ ಇವೆ. ಈ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಬಲವರ್ಧನೆ ನಡೆಸಬೇಕೆಂದು ಚರ್ಚೆ ನಡೆಯುತ್ತಿರುವಾಗಲೇ ಅದನ್ನು  ಇನ್ನಷ್ಟು ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಸಂಚಲ್ಲದೆ ಮತ್ತೇನು?

Monday, April 25, 2011

ಕಲ್ಲೆಸೆದು ಕೆಸರು ಸಿಡಿಸಿಕೊಂಡವರು

‘ಕೆಸರಿಗೆ ಕಲ್ಲೆಸೆದು ಮುಖಕ್ಕೆ ಯಾಕೆ ಸಿಡಿಸಿಕೊಳ್ಳುತ್ತೀರಿ?’ ಎಂದು ಭ್ರಷ್ಟರ ವಿರುದ್ಧ ಹೋರಾಟಕ್ಕೆ ಹೊರಟ ಉತ್ಸಾಹಿಗಳಿಗೆ ಹಿರಿಯರು ಬುದ್ದಿ ಹೇಳುವುದುಂಟು. ಅಣ್ಣಾ ಹಜಾರೆ ಅವರಿಗೂ ಹಿರಿಯರು ಈ ಬುದ್ದಿ ಮಾತನ್ನು ಹಲವಾರು ಬಾರಿ ಹೇಳಿರಬಹದು.

ಅದಕ್ಕೆ ಕಿವಿಗೊಡದೆ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧದ ತಮ್ಮ ಆಂದೋಲವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಹೋರಾಟ ಒಂದು ರಾಜ್ಯಕ್ಕಷ್ಟೇ ಸೀಮಿತವಾ ಗಿತ್ತು. ಅಲ್ಲಿಯೂ  ಶರದ್ ಪವಾರ್ ಅವರಂತಹ ಬಲಿಷ್ಠ ರಾಜಕಾರಣಿಯನ್ನು ಎದುರು ಹಾಕಿಕೊಂಡು ಮುಖಕ್ಕೆ ಒಂದಷ್ಟು ಕೆಸರು ಸಿಡಿಸಿಕೊಂಡಿದ್ದರು.ಈಗ ನೂರಾರು ‘ಪವಾರ್’ಗಳನ್ನು ಎದುರು ಹಾಕಿಕೊಂಡಿದ್ದಾರೆ.
‘ಸಾಮ್ರಾಜ್ಯ’ ತಿರುಗಿ ಹೊಡೆದಿದೆ. ಭ್ರಷ್ಟತೆಯ ಕೆಸರಲ್ಲಿ ಮುಳುಗಿ ಹೋಗಿರುವ ರಾಜಕೀಯ ವ್ಯವಸ್ಥೆಯನ್ನು ತೊಳೆಯಲು ಹೊರಟಿರುವ ಅಣ್ಣಾ ಮತ್ತು ಬೆಂಬಲಿಗರ ಮುಖದ ಮೇಲೆಲ್ಲ ಈಗ ಸಿಡಿದ ಕೆಸರಿನ ಕಲೆಗಳು. ಹಿಂದಡಿ ಇಡುವಂತಿಲ್ಲ, ಮುಂದೆ ಹೋಗಲು ದಾರಿಗಳು ಬಹಳ ಇಲ್ಲ.
ಇವೆಲ್ಲ ಅನಿರೀಕ್ಷಿತವೇ? ಬಹುಶಃ ಅಲ್ಲ. ‘....ರಾಜಕೀಯ ಪಕ್ಷಗಳು  ಮೈಯೆಲ್ಲ ಕಣ್ಣಾಗಿ ಅಣ್ಣಾ ಹಜಾರೆ ಮತ್ತು ಬೆಂಬಲಿಗರ ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ....’ ಎಂದು ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆದದ್ದನ್ನು ಓದಿ ‘ನಿರಾಶವಾದ ಅತಿಯಾಯಿತು’ ಎಂದವರೂ ಇದ್ದರು.
ಆದರೆ ಈ ದೇಶದ ರಾಜಕೀಯ ವ್ಯವಸ್ಥೆಯನ್ನು ತುಸು ಹತ್ತಿರದಿಂದ ನೋಡಿದ ಯಾರೂ ಅಣ್ಣಾ ಹಜಾರೆ  ಎದುರು ಸರ್ಕಾರ ಸೋಲು ಒಪ್ಪಿಕೊಂಡಿತು ಎಂದು ಸಂಭ್ರಮಿಸುವ ಆತುರ ತೋರಿಸಲಾರರು.

ಜನ ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲು ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ಭ್ರಮಿಸಿ ಅಣ್ಣಾ ಹಜಾರೆ ಅವರ ಕೆಲ ಮುಗ್ಧ ಬೆಂಬಲಿಗರು ಕುಣಿದಾಡಿದ್ದರು.
ಆದರೆ ಆಗಲೇ ‘ಸಾಮ್ರಾಜ್ಯ’ ತನ್ನ ಹತಾರುಗಳನ್ನು ಸಾಣೆ ಹಿಡಿಯುತ್ತಿತ್ತು ಎಂದು ಅವರಿಗೆ ತಿಳಿದಿರಲಿಲ್ಲ. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹದ ಬಾಣದಿಂದ ಪ್ರಾಣ ಉಳಿಸಿಕೊಳ್ಳಲು ಸರ್ಕಾರ ತಲೆಯನ್ನು ಒಂದಿಷ್ಟು ಕೆಳಗೆ ತಗ್ಗಿಸಿತ್ತು ಅಷ್ಟೆ.  ಅದು ಪ್ರತಿ ದಾಳಿ ಪೂರ್ವದ ಸಮರ ತಂತ್ರ.
ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಹಳೆಯ ವಿವಾದ. ಇದರಿಂದಾಗಿ ಈ ವಿವಾದದ ಸುತ್ತಲಿನ ಚರ್ಚೆ ಬಹಳ ಬೇಗ ಸಾರ್ವಜನಿಕರ ಗಮನ ಸೆಳೆಯುತ್ತದೆ.ಈಗ ವಿವಾದದ ಕೇಂದ್ರಬಿಂದುವಾಗಿರುವ ಹಿರಿಯ ವಕೀಲ ಶಾಂತಿಭೂಷಣ್ ಕೂಡಾ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಅವರ ಕುಟುಂಬ ರಾಜಕೀಯದ ವಿರುದ್ಧ ದನಿ ಎತ್ತಿದವರು. ಇಷ್ಟೆಲ್ಲ ಗೊತ್ತಿದ್ದೂ ಅಣ್ಣಾ ಹಜಾರೆ ಆಗಲೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರು.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರನ್ನು ಲೋಕಪಾಲ ಮಸೂದೆ ರಚನಾ ಸಮಿತಿಗೆ ಸೇರಿಸಿಬಿಟ್ಟಿದ್ದರು. ನೂರು ಕೋಟಿ ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ನೇಮಕಗೊಂಡ ಐವರು ಸದಸ್ಯರಲ್ಲಿ ಒಂದೇ ಕುಟುಂಬದ ಇಬ್ಬರು. ಕಾರಣಗಳೇನೇ ಇರಬಹುದು, ಸಾರ್ವಜನಿಕವಾಗಿ ಇದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಅಲ್ಲಿಂದ ಪ್ರಾರಂಭವಾಯಿತು ಪ್ರತಿ ದಾಳಿ.

ಇವೆಲ್ಲವೂ ಕೇವಲ ಆಡಳಿತಾರೂಢರ ಹುನ್ನಾರ ಎಂದು ತಿಳಿದುಕೊಳ್ಳಬೇಕಾಗಿಲ್ಲ.ಬಹಿರಂಗವಾಗಿ ಅಣ್ಣಾ ಹಜಾರೆ ಚಳವಳಿಗೆ ಬೆಂಬಲ ಘೋಷಿಸಿರುವ ವಿರೋಧ ಪಕ್ಷಗಳು ಕೂಡಾ ಅಂತರಂಗದಲ್ಲಿ ಅದನ್ನು ಮುರಿಯಲು ಗುಪ್ತ ಬೆಂಬಲ ನೀಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಮತ ಪಡೆದು ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ ಸರ್ಕಾರದ ಮೊದಲ ಆದ್ಯತೆಯೇ ಲೋಕಪಾಲ ಮಸೂದೆಗೆ ಕಾನೂನಿನ ರೂಪ ಕೊಡುವುದು ಆಗಬೇಕಾಗಿತ್ತು.

ಆದರೆ ಹಾಗಾಗಲಿಲ್ಲ. ಆಗಲೂ ಪ್ರಧಾನಿಯನ್ನು ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಬಿಜೆಪಿಯ ಅಧಿಕೃತ ನಿಲುವಾಗಿತ್ತು ಎನ್ನುವುದನ್ನು ಈಗ ಎಲ್ಲರೂ ಮರೆತುಬಿಟ್ಟಿದ್ದಾರೆ.
ಅಣ್ಣಾ ಹಜಾರೆ ವಿರುದ್ಧ ಮೊದಲು ಎರಗಿಬಿದ್ದವರು ಕೂಡಾ ಕಾಂಗ್ರೆಸ್ ಪಕ್ಷದ ಪ್ರಮುಖ ಟೀಕಾಕಾರರಾದ ಯೋಗಗುರು ಬಾಬಾ ರಾಮ್‌ದೇವ್. ಇವರಿಗೆ ಸಲಹೆಗಾರರಾಗಿರುವವರು ಬಿಜೆಪಿಯಿಂದ ಹೊರ ಹೋಗಿದ್ದರೂ ಸಂಘ ಪರಿವಾರದ ಜತೆ ಸಂಬಂಧ ಇಟ್ಟುಕೊಂಡಿರುವ ಗೋವಿಂದಾಚಾರ್ಯ ಮತ್ತು ಹವ್ಯಾಸಿ ಪತ್ರಕರ್ತ ಎಸ್.ಗುರುಮೂರ್ತಿ. ಎರಡು ದಿನಗಳ ಮೊದಲು ಹೋಗಿ ಅಣ್ಣಾ ಹಜಾರೆ ಅವರನ್ನು ಅಪ್ಪಿಕೊಂಡಿದ್ದ ರಾಮ್‌ದೇವ್ ಯಾಕೆ ತಿರುಗಿಬಿದ್ದರು ಎನ್ನುವುದಕ್ಕೂ ಹಿನ್ನೆಲೆ ಇದೆ.
ಮೊದಲನೆಯದಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ರಾಮ್‌ದೇವ್ ಅವರ ಪ್ರಯತ್ನಕ್ಕೆ ಅಣ್ಣಾ ಹಜಾರೆ ಅವರ ದಿಢೀರ್ ರಂಗಪ್ರವೇಶದಿಂದಾಗಿ ಹಿನ್ನಡೆಯಾಗಿದೆ. ಕಳೆದೆರಡು ವಾರಗಳಲ್ಲಿ ಅವರ ದನಿ ಬದಲಾಗಿರುವುದನ್ನು ಗಮನಿಸಬಹುದು.

‘ಹೊಸ ರಾಜಕೀಯ ಪಕ್ಷ ಕಟ್ಟುವುದಿಲ್ಲ, ಈಗಿರುವ ಪಕ್ಷಗಳಿಂದಲೇ ಒಳ್ಳೆಯ ಕೆಲಸ ಮಾಡಿಸಲು ಜನಬಲದ ಮೂಲಕ ಒತ್ತಡ ಹಾಕುತ್ತೇವೆ’ ಎಂದು ಯೋಗಗುರು ಹೇಳುತ್ತಿದ್ದಾರೆ. ಗೋವಿಂದಾಚಾರ್ಯರ ಶಿಷ್ಯೆ ಉಮಾಭಾರತಿ ಅವರನ್ನು ಅಣ್ಣಾ ಹಜಾರೆ ಬೆಂಬಲಿಗರು ಹತ್ತಿರಕ್ಕೆ ಬಿಟ್ಟು ಕೊಡದಿರುವುದು ಕೂಡಾ ರಾಮ್‌ದೇವ್ ಅಸಮಾಧಾನಕ್ಕೆ ಕಾರಣ ಆಗಿರಬಹುದು.
ಬಾಬಾ ರಾಮ್‌ದೇವ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಂತಹ ಆಟಗಳಲ್ಲಿ ಪಳಗಿರುವ ಅಮರ್ ಸಿಂಗ್ ಎಂಬ ರಾಜಕೀಯ ದಲ್ಲಾಳಿಯ ಪ್ರವೇಶವಾಗಿದೆ. ಇದು ಕೂಡಾ ರಾಜಕೀಯ ಸಮರದ ಹಳೆಯ ತಂತ್ರ. ಯುದ್ಧಭೂಮಿಯಲ್ಲಿ ಭೀಷ್ಮಾಚಾರ್ಯರ ಎದುರು ಶಿಖಂಡಿಯನ್ನು ತಂದು ನಿಲ್ಲಿಸಿದ ಹಾಗೆ.
ಅಮರ್‌ಸಿಂಗ್ ಅವರಿಗೆ ಶಾಂತಿಭೂಷಣ್ ಬಗ್ಗೆ ಮೊದಲೇ ಹಳೆಯ ದ್ವೇಷ ಇತ್ತು. ಇದಕ್ಕಿಂತಲೂ ಮಿಗಿಲಾಗಿ ಮುಲಾಯಂ ಸಿಂಗ್ ಕೈಬಿಟ್ಟ ನಂತರ ಮೂಲೆಗುಂಪಾಗಿದ್ದ ಅವರಿಗೆ ರಾಜಕೀಯವಾಗಿ ಜೀವದಾನ ಬೇಕಾಗಿತ್ತು. ಉತ್ತರಪ್ರದೇಶದಲ್ಲಿ ಕಾಲೂರಲು ಪ್ರಯತ್ನಿಸುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಮತ್ತು ಮುಲಾಯಂ ಸಿಂಗ್ ಅವರನ್ನು ಎದುರು ಹಾಕಿಕೊಂಡಿರುವ ಜತೆಗೆ ಠಾಕೂರ್ ಸಮುದಾಯದ ಮತಗಳನ್ನು ಸೆಳೆಯಬಲ್ಲ ನಾಯಕನೊಬ್ಬ ಬೇಕಿತ್ತು.

ಇವೆಲ್ಲವೂ ಒಟ್ಟಾಗಿ ಅಮರ್‌ಸಿಂಗ್ ಕಾಂಗ್ರೆಸ್ ನಾಯಕರ ಕೈ ದಾಳವಾಗಿ ಬಿಟ್ಟರು.ಅಮರ್‌ಸಿಂಗ್ ಮೊದಲು ‘ಸಿಡಿ’ಯೊಂದನ್ನು ಹೊರಹಾಕಿದರು. ಅದರಲ್ಲಿ ಶಾಂತಿಭೂಷಣ್ ಅವರು ಮಗನ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಒಲಿಸಿಕೊಳ್ಳುವ ಭರವಸೆ ನೀಡಿರುವ ಸಂಭಾಷಣೆ ಇದೆ.
ಅದರ ಬೆನ್ನಲ್ಲೇ ಉತ್ತರಪ್ರದೇಶದ ಮಾಯಾವತಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿರುವ ಪ್ರಕರಣ ಬಯಲಾಗಿದೆ. ಈಗ ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ವಂಚಿಸಿರುವ ಆರೋಪ ಎದುರಾಗಿದೆ.
ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಮಕ್ಕಳು ಕೇವಲ ದುಡ್ಡು ಸಂಪಾದನೆಗಾಗಿಯೇ ವಕೀಲಿ ವೃತ್ತಿ ಮಾಡಿಕೊಂಡವರಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನೆತ್ತಿಕೊಂಡು ಕಾನೂನು ಹೋರಾಟ ನಡೆಸುತ್ತಾ ಬಂದವರು.
ನ್ಯಾಯಮೂರ್ತಿಗಳ ಭ್ರಷ್ಟಾಚಾರದ ವಿರುದ್ಧವೂ ದನಿ ಎತ್ತಿ ಅಪಾಯವನ್ನು ಮೈಮೇಲೆ ಎಳೆದುಕೊಂಡವರು. ಅವರು ಹೇಳುತ್ತಿರುವಂತೆ ಅಮರ್‌ಸಿಂಗ್ ಸಿಡಿ ನಕಲಿಯೂ ಇರಬಹುದು, ಉತ್ತರಪ್ರದೇಶ ದಲ್ಲಿ ಪಡೆದಿರುವ ಜಮೀನು ಮಾರುಕಟ್ಟೆ ಬೆಲೆಗೆ ಖರೀದಿಸಿರಬಹುದು. ಮುದ್ರಾಂಕ ಶುಲ್ಕ ವಂಚಿಸದೆಯೂ ಇರಬಹುದು.
ಆದರೆ ಯಾವುದೇ ಚುನಾವಣೆ ಇಲ್ಲದೆ ನೂರು ಕೋಟಿ ನಾಗರಿಕರ ಪ್ರತಿನಿಧಿಗಳಾಗಿ ಲೋಕಪಾಲ ರಚನಾ ಸಮಿತಿಯ ಸದಸ್ಯರಾಗಿ ನೇಮಕ ಗೊಂಡವರ ಮೇಲೆ ಈ ರೀತಿಯ ಸಂಶಯದ ನೆರಳೂ ಚಾಚಬಾರದಲ್ಲವೇ? ಯಾಕೆಂದರೆ ಅಣ್ಣಾ ಹಜಾರೆ ಅವರ ಹೋರಾಟ ಕಾನೂನಿ ನದ್ದಲ್ಲ, ಅದು ನೈತಿಕತೆಯದ್ದು.

ಶರದ್‌ಪವಾರ್ ಸೇರಿದಂತೆ ಅಣ್ಣಾ ಹಜಾರೆ ಅವರು ಗುರಿ ಇಟ್ಟಿರುವ ರಾಜಕಾರಣಿಗಳು ಹೊಂದಿರುವ ಕೋಟ್ಯಂತರ ರೂಪಾಯಿ ಮೌಲ್ಯದ  ಆಸ್ತಿ ಅಕ್ರಮವಾಗಿ ಗಳಿಸಿದ್ದೆಂದು ಎಲ್ಲಿ ಸಾಬೀತಾಗಿದೆ? ಲೋಕಪಾಲರ ನೇಮಕ ಕೂಡಾ ಭ್ರಷ್ಟರ ವಿರುದ್ಧದ ನೈತಿಕ ಹೋರಾಟದ ಒಂದು ಭಾಗ ಅಲ್ಲವೇ?
ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ನಂತರ ಕೆಸರೆರಚಾಟಕ್ಕೆ ಬಲಿಯಾದವರು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಕೆಣಕಿದ್ದೇ ತಡ, ನ್ಯಾ.ಹೆಗ್ಡೆ ಅವರು ಕೆಂಡಾಮಂಡಲವಾಗಿಬಿಟ್ಟರು.
ಇದೇ ಅಭಿಪ್ರಾಯವನ್ನು ಇನ್ನೊಂದು ರೀತಿಯಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕೆಲವು ವಾರಗಳ ಹಿಂದೆ ಹೇಳಿದ್ದಾಗಲೂ ವಿವಾದ ಸೃಷ್ಟಿಯಾಗಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವೈಯಕ್ತಿಕವಾದ ಪ್ರಾಮಾಣಿಕತೆಯನ್ನಾಗಲಿ, ಕ್ಷಮತೆಯನ್ನಾಗಲಿ ಯಾರೂ ಪ್ರಶ್ನಿಸುವ ಹಾಗಿಲ್ಲ.
ಹಾಗಿದ್ದರೂ ಯಾಕೆ ಅವರನ್ನು ಕೆಣಕುವಂತಹ ಚುಚ್ಚುಮಾತುಗಳು ತೂರಿಬರುತ್ತಿವೆ? ಇದಕ್ಕೆ ಸ್ವಲ್ಪಮಟ್ಟಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೂ ಕಾರಣ.ರಾಜ್ಯ ಸರ್ಕಾರದ ಅಸಹಕಾರದಿಂದ ನೊಂದು ಹತ್ತು ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದಾಗ ನ್ಯಾ. ಸಂತೋಷ್‌ಹೆಗ್ಡೆ ದೇಶದ ಗಮನ ಸೆಳೆದಿದ್ದರು. ಅದು ಅವರ ಜನಪ್ರಿಯತೆಯ ಉತ್ತುಂಗ ಸ್ಥಿತಿ.

ಆದರೆ ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಪ್ರಜ್ಞಾವಂತರು ರಾಜೀನಾಮೆ ಹಿಂತೆಗೆದುಕೊಳ್ಳಲು ಒತ್ತಾಯಿಸಿದಾಗಲೂ ಜಗ್ಗದ ಅವರು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮಾತಿಗೆ ಮಣಿದು ರಾಜೀನಾಮೆ ಹಿಂತೆಗೆದುಕೊಂಡರು.
ಮರುಗಳಿಗೆಯಿಂದ ಅವರ ಜನಪ್ರಿಯತೆ ಕುಸಿಯತೊಡಗಿತ್ತು. ಅಲ್ಲಿಯ ವರೆಗೆ ಲೋಕಾಯುಕ್ತರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದವರೂ ನಂತರದ ದಿನಗಳಲ್ಲಿ ನಾಲಿಗೆ ಸಡಿಲ ಬಿಡತೊಡಗಿದ್ದರು. ತಮ್ಮನ್ನು ಕೆಣಕಲೆಂದೇ ಇಂತಹ ಚುಚ್ಚುಮಾತುಗಳನ್ನು ತೂರಿಬಿಡಲಾಗುತ್ತಿದೆ ಎಂದು ಗೊತ್ತಿದ್ದರೂ ನ್ಯಾ.ಸಂತೋಷ್‌ಹೆಗ್ಡೆ ಅವುಗಳಿಗೆ ಭಾವಾವೇಶದಿಂದ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.
ದಿಗ್ವಿಜಯ್‌ಸಿಂಗ್ ಟೀಕೆಗೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೂ ಈ ಭಾವಾವೇಶ ಇತ್ತು.ಒಮ್ಮೊಮ್ಮೆ ಸಾತ್ವಿಕರ ಮೌನ ಕೂಡಾ ಅವರ ಟೀಕಾಕಾರರ ಬಾಯಿಮುಚ್ಚಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ಲೋಕಾಯುಕ್ತರಿಗೆ ಯಾಕೋ ಮನವರಿಕೆಯಾದಂತಿಲ್ಲ.
ಇವರನ್ನೆಲ್ಲ ಕಟ್ಟಿಕೊಂಡಿರುವ ಅಣ್ಣಾ ಹಜಾರೆ ಅವರೂ ಆರೋಪ ಮುಕ್ತರಾಗಿಲ್ಲ. ಅಣ್ಣಾ ಹಜಾರೆ ಅಧ್ಯಕ್ಷರಾಗಿರುವ ಹಿಂದ್ ಸ್ವರಾಜ್ ಟ್ರಸ್ಟ್‌ನ ಖಾತೆಯಲ್ಲಿದ್ದ 2.2 ಲಕ್ಷ ರೂಪಾಯಿಗಳನ್ನು ಅವರ ಹುಟ್ಟುಹಬ್ಬ ಆಚರಣೆಗೆ ಬಳಸಲಾಗಿತ್ತಂತೆ. ಈ ಬಗ್ಗೆ 2005ರಲ್ಲಿ ತನಿಖೆ ಮಾಡಿದ ಸಾವಂತ್ ಆಯೋಗ ಈ ಆರೋಪ ನಿಜ ಎಂದು ವರದಿ ನೀಡಿದೆ.
ರಾಜಕಾರಣಿಗಳು, ಉದ್ಯಮಿಗಳು, ಚಿತ್ರತಾರೆಯರು ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವಾಗ ಈ ಎರಡು ಲಕ್ಷ ರೂಪಾಯಿ ಯಾವ ಲೆಕ್ಕದ್ದು ಎಂದು ಪ್ರಶ್ನಿಸಬಹುದು. ಖರ್ಚಾಗಿರುವ ಹಣವನ್ನು ಅಣ್ಣಾ ಹಜಾರೆ ಸ್ವಂತಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ಸಮರ್ಥಿಸಿಕೊಳ್ಳಲೂ ಬಹುದು.
ಆದರೆ ಅಣ್ಣಾ ಹಜಾರೆ ಅವರಲ್ಲಿ ಗಾಂಧೀಜಿಯನ್ನು ಕಾಣಬಯಸುವ ಕೋಟ್ಯಂತರ ಜನರ ಕಣ್ಣಿನಲ್ಲಿ ಇಂತಹ ಸಣ್ಣ ತಪ್ಪುಗಳು ಭ್ರಮನಿರಸನವನ್ನು ಉಂಟುಮಾಡಬಲ್ಲದು. ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಗಾಂಧೀಜಿ ಇಂತಹ ಸಣ್ಣ ತಪ್ಪುಗಳನ್ನೂ ಮಾಡಿರಲಿಲ್ಲ.

ಸುಮಾರು 30 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸಿದ್ದ ಗಾಂಧೀಜಿ ವಿರುದ್ಧ ಯಾರೂ ಹಣ ದುರುಪಯೋಗದ ಸಣ್ಣ ಸೊಲ್ಲು ಕೂಡಾ ಎತ್ತಿರಲಿಲ್ಲ.

ಇದನ್ನು ನೋಡಿಯೇ ಆಲ್‌ಬರ್ಟ್ ಐನ್‌ಸ್ಟೀನ್ ‘ರಕ್ತ ಮೂಳೆ ಮಾಂಸಗಳನ್ನು ಹೊಂದಿದ್ದ ಇಂತಹ ವ್ಯಕ್ತಿ ಜಗತ್ತಿನಲ್ಲಿ ಸಂಚರಿಸಿದ್ದನೇ, ಬದುಕಿದ್ದನೇ ಎಂದು ಮುಂಬರುವ ಪೀಳಿಗೆ ಸಂಶಯಪಡಬಹುದು’ ಎಂದು ಉದ್ಗರಿಸಿದ್ದು.

ಭ್ರಷ್ಟಾಚಾರ ನಿರ್ಮೂಲನೆ ಈಗಲೂ ಸಾಧ್ಯ. ಅದಕ್ಕಾಗಿ ಮಹಾತ್ಮ ಗಾಂಧೀಜಿಯವರಂತಹ ನಾಯಕರ ಅಗತ್ಯ ಇದೆ. ಅವರನ್ನು ಎಲ್ಲಿಂದ ತರುವುದು?

Monday, April 18, 2011

ಗಾಂಧಿ,ಜೆಪಿ ಆಗುವ ಕಷ್ಟದ ಕೆಲಸ

‘ಈಗಿನ ಸನ್ನಿವೇಶದಲ್ಲಿ ಗಾಂಧೀಜಿ ಇದ್ದಿದ್ದರೆ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಬೇಕಾಗುತ್ತಿತ್ತು ಇಲ್ಲವೇ ಅವರೂ ಭ್ರಷ್ಟರಾಗುತ್ತಿದ್ದರು’ ಎಂದು ರಾಜ್ಯ ಜೆಡಿ (ಎಸ್) ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದಾಕ್ಷಣ ಅವರ ಮೇಲೆ ‘ಗಾಂಧಿ ಅಭಿಮಾನಿ’ಗಳೆಲ್ಲ ಮುಗಿಬಿದ್ದುಬಿಟ್ಟರು.
ಈ ರೀತಿ ದಾಳಿ ಮಾಡಿದವರಲ್ಲಿ ಗಾಂಧೀಜಿ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುಮಾರಸ್ವಾಮಿಗಳ  ದ್ವೇಷಿಗಳು ಇದ್ದಿರಬಹುದು. ಒಮ್ಮೊಮ್ಮೆ ಸಂದೇಶವಾಹಕನ ಚಾರಿತ್ರ್ಯ, ಸಂದೇಶದ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ. ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ಅರ್ಧ ಸತ್ಯ ಇತ್ತು, ಇದಕ್ಕೆ ಗಾಂಧೀಜಿ ಬಗೆಗಿನ ಅವರ ಅರ್ಧಂಬರ್ಧ ತಿಳುವಳಿಕೆ ಕಾರಣ ಇರಬಹುದು.
ಗಾಂಧೀಜಿ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿ ಅಲ್ಲಿಯೇ ಉಳಿಯಬೇಕೆಂದು ಬಯಸಿದ್ದರೆ ಭ್ರಷ್ಟರಾಗಬೇಕಾಗುತ್ತಿತ್ತೋ ಏನೋ? ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಹೇಳಿರುವುದು ಸತ್ಯ. ಆದರೆ ಗಾಂಧೀಜಿ ಈಗ ನಮ್ಮ ನಡುವೆ ಇದ್ದಿದ್ದರೂ ಖಂಡಿತ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಿರಲಿಲ್ಲ. ಹಾಗೆಯೇ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಿ ಓಡಿಹೋಗುತ್ತಲೂ ಇರಲಿಲ್ಲ.
ಇದು ನಾವೆಲ್ಲ ಅರ್ಥಮಾಡಿಕೊಳ್ಳಬೇಕಾದ ಪೂರ್ಣ ಸತ್ಯ. ಇಡೀ ದೇಶ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದಾಗ ಮತ್ತು ತಮ್ಮ ಅನುಯಾಯಿಗಳೆಲ್ಲ ಅಧಿಕಾರದ ಕುರ್ಚಿ ಹಿಡಿಯುವ ತರಾತುರಿಯಲ್ಲಿದ್ದಾಗ ಗಾಂಧೀಜಿಯವರು ನೌಕಾಲಿಯಲ್ಲಿ ಭುಗಿಲೆದ್ದಿದ್ದ ಕೋಮುದ್ವೇಷದ ಬೆಂಕಿಯನ್ನು ಶಮನಮಾಡಲು ಏಕಾಂಗಿಯಾಗಿ  ಹೆಣಗಾಡುತ್ತಿದ್ದರು. ಆಗ ದೆಹಲಿಯಲ್ಲಿದ್ದ ಗಾಂಧಿ ಅನುಯಾಯಿಗಳ ಪಾಲಿಗೆ ಸರ್ಕಾರ ರಚನೆಯೇ ರಾಜಕೀಯ ಆಗಿದ್ದರೆ, ಗಾಂಧೀಜಿ ಅವರಿಗೆ ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಕೋಮುಸೌಹಾರ್ದತೆಯನ್ನು ಸ್ಥಾಪಿಸುವುದು ರಾಜಕೀಯ ಆಗಿತ್ತು. ಗಾಂಧೀಜಿ ಈಗ ಬದುಕಿದ್ದರೂ ಅವರು ಸಂಸತ್‌ನೊಳಗೆ ಪ್ರವೇಶಿಸಿ ರಾಜಕೀಯ ಮಾಡುತ್ತಿರಲಿಲ್ಲ, ಅಲ್ಲಿಗೆ ಸಮೀಪದಲ್ಲಿಯೇ ಇರುವ ಜಂತರ್‌ಮಂತರ್‌ನ ಸತ್ಯಾಗ್ರಹದ ಶಿಬಿರದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದರು.
ಸಾರ್ವಜನಿಕ ಜೀವನ, ಚುನಾವಣಾ ರಾಜಕೀಯ, ಹೋರಾಟದ ರಾಜಕೀಯ, ಚಳುವಳಿ, ಸತ್ಯಾಗ್ರಹಗಳೆಲ್ಲವನ್ನೂ ಒಂದೇ ಬಗೆಯ ‘ರಾಜಕೀಯ’ ಎಂದು ತಿಳಿದುಕೊಂಡಿರುವುದೇ ಕುಮಾರಸ್ವಾಮಿ ಮತ್ತು ಅವರಂತಹವರ ಗೊಂದಲಕಾರಿ ಹೇಳಿಕೆಗಳಿಗೆ ಕಾರಣ. ಅವರು ಮಾತ್ರವಲ್ಲ ಲಾಲ್‌ಕೃಷ್ಣ ಅಡ್ವಾಣಿಯವರಂತಹ ಅನುಭವಿ ರಾಜಕಾರಣಿ ಕೂಡಾ ಹಜಾರೆ ಅವರ ಚಳುವಳಿ ರಾಜಕೀಯದ ಬಗ್ಗೆ ದ್ವೇಷ-ಸಿನಿಕತನ ಹುಟ್ಟಿಸುತ್ತಿದೆಯೇನೋ ಎಂದು ಆತಂಕ ವ್ಯಕ್ತಪಡಿಸುವಷ್ಟು ಮಟ್ಟಿಗೆ ಗೊಂದಲಕ್ಕೆಡಾಗಿದ್ದಾರೆ. ಇದರ ಜತೆಗೆ ಅಣ್ಣಾ ಹಜಾರೆ ಅವರು ರಾಜಕೀಯ ಪ್ರವೇಶ ಮಾಡಬಾರದೆಂದು ಹೇಳುವುದು ಎಷ್ಟು ಸರಿ?
ಹಾಗಿದ್ದರೆ ಪ್ರಾಮಾಣಿಕರೆಲ್ಲರೂ ರಾಜಕೀಯವನ್ನು ಭ್ರಷ್ಟರಿಗೆ ಬಿಟ್ಟುಕೊಟ್ಟು ಮೂಕಪ್ರೇಕ್ಷಕರಾಗಬೇಕೇ? ಪ್ರಜಾಪ್ರಭುತ್ವದಲ್ಲಿ ರಾಜಕೀಯ ಚಟುವಟಿಕೆಯ ಮೂಲಕವೇ ಬದಲಾವಣೆ ತರಬೇಕಲ್ಲವೇ? ಎಂಬೀತ್ಯಾದಿ ಪ್ರಶ್ನೆಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇವು ರಾಜಕೀಯವನ್ನು ತೀರಾ ಸರಳೀಕರಿಸಿ ನೋಡುವ ಮುಗ್ಧಪ್ರಶ್ನೆಗಳು ಎಂದು ತಳ್ಳಿಹಾಕಬಹುದು. ಆದರೆ ಈ ರೀತಿ ಪ್ರಶ್ನಿಸುತ್ತಿರುವವರಲ್ಲಿ ಹೆಚ್ಚಿನವರು ಯುವಕರು, ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕು ಎಂಬ ರೋಷದ ಜತೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ರಾಜಕೀಯ ಬದಲಾವಣೆ ಮಾಡಬೇಕೆಂಬ ಹಂಬಲ ಉಳ್ಳ ಅಮಾಯಕರು. ಆದ್ದರಿಂದಲೇ ಈ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಈ ಗೊಂದಲಗಳಿಗೆ ಮೂಲ ಕಾರಣ ಏನೆಂದರೆ ರಾಜಕೀಯ ಎಂದಾಕ್ಷಣ ನಮ್ಮ ಕಣ್ಣೆದುರು ಮೂಡುವ ಶಾಸಕರು,ಸಂಸದರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಇಲ್ಲವೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ಚಿತ್ರಗಳು. ರಾಜಕೀಯ ಎಂದಾಕ್ಷಣ ಯಾರ ಕಣ್ಣಮುಂದೆಯೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧೀಜಿ ಇಲ್ಲವೇ ಆ ಸ್ವಾತಂತ್ರ್ಯ ಗಂಡಾಂತರ ಸ್ಥಿತಿಯಲ್ಲಿದ್ದಾಗ ಅದನ್ನು ರಕ್ಷಿಸಿಕೊಟ್ಟ ಜಯಪ್ರಕಾಶ್ ನಾರಾಯಣ್ ಚಿತ್ರಗಳು ಕಣ್ಣಮುಂದೆ ಮೂಡುವುದಿಲ್ಲ. ಆದರೆ ಈ ಇಬ್ಬರೂ ನಾಯಕರು ದೇಶ ಕಂಡ ಅತ್ಯಂತ ಬುದ್ದಿವಂತ ಮತ್ತು ಯಶಸ್ವಿ ರಾಜಕಾರಣಿಗಳು ಎನ್ನುವುದನ್ನು ಮರೆಯಬಾರದು.
ಗಾಂಧೀಜಿ ರಾಜಕೀಯ ಮಾಡಿರಲಿಲ್ಲವೇ? ಸ್ವಾತಂತ್ರ್ಯಹೋರಾಟ ಎನ್ನುವುದು ರಾಜಕೀಯ ಚಟುವಟಿಕೆಯಲ್ಲದೆ ಮತ್ತೇನು? ಆದರೆ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಬಯಸಿದ್ದರೆ ದೇಶದ ಪ್ರಧಾನಿಯಾಗಲು ಗಾಂಧೀಜಿಯವರಿಗೇನು  ಸಾಧ್ಯ ಇರಲಿಲ್ಲವೇ? ಗಾಂಧೀಜಿಯವರಿಗೆ ಚುನಾವಣಾ ರಾಜಕೀಯದ ಶಕ್ತಿ-ದೌರ್ಬಲ್ಯಗಳು ಮಾತ್ರವಲ್ಲ ಅದರ ಇತಿಮಿತಿಯೂ ತಿಳಿದಿತ್ತು. ಆದ್ದರಿಂದಲೇ ಅವರು ಅದರಿಂದ ದೂರ ಇದ್ದರು ಮತ್ತು ಜನರಿಗೆ ಹತ್ತಿರವಾಗಿದ್ದರು. ಅಣ್ಣಾ ಹಜಾರೆಯವರು ಮಾಡಬಹುದಾದ ರಾಜಕೀಯ ಇದು.
ಜಯಪ್ರಕಾಶ್ ನಾರಾಯಣ್ ಕೂಡಾ ಗಾಂಧೀಜಿ ಮಾದರಿಯ ರಾಜಕೀಯವನ್ನೇ ನಡೆಸಿದವರು. ಸ್ವತಂತ್ರಭಾರತದಲ್ಲಿ ಗಾಂಧೀಜಿಯವರ ನಿಜವಾದ ಉತ್ತರಾಧಿಕಾರಿಯಂತೆ ನಡೆದುಕೊಂಡವರು ಜೆಪಿ. ಗಾಂಧೀಜಿಯವರಿಗೆ ನೆಹರೂ ಬಗೆಗಿನ ದೌರ್ಬಲ್ಯ ಇಲ್ಲದೆ ಹೋಗಿದ್ದರೆ ರಾಮಮನೋಹರ ಲೋಹಿಯಾ ಇಲ್ಲವೇ ಜಯಪ್ರಕಾಶ್ ನಾರಾಯಣ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಿದ್ದರೋ ಏನೋ? ಗಾಂಧೀಜಿಯವರಂತೆ ಜೆಪಿಯವರೂ ಮನಸ್ಸು ಮಾಡಿದ್ದರೆ ದೇಶದ ಪ್ರಧಾನಿಯಾಗಬಹುದಿತ್ತು. ಎರಡು ಬಾರಿ ಅಂತಹ ಅವಕಾಶ ಒದಗಿಬಂದಿತ್ತು.
ಮೊದಲನೆಯ ಬಾರಿ ಗಾಂಧೀಜಿಯವರೇ  ಈ ಆಹ್ಹಾನ ನೀಡಿದ್ದರು. ಇನ್ನೇನು ಸ್ವಾತಂತ್ರ್ಯ ಘೋಷಣೆಯಾಗಲಿದೆ ಎನ್ನುವಾಗ ಗಾಂಧಿ ಅನುಯಾಯಿಗಳೆಲ್ಲ ಸಂಪುಟ ಸೇರುವ ಹುರುಪಲಿದ್ದರು. ಆಗ ಗಾಂಧೀಜಿ ಜೆಪಿಯವರನ್ನು ಕರೆದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವಂತೆ ಸಲಹೆ ನೀಡಿದ್ದರು. ಇದಕ್ಕೆ ನೆಹರೂ ಮತ್ತು ಸಂಗಡಿಗರ ವಿರೋಧ ಇದ್ದರೂ ಜೆಪಿ ಒಪ್ಪಿಕೊಂಡಿದ್ದರೆ ದೇಶದ ಇತಿಹಾಸವೇ ಬೇರೆ ದಾರಿ ಹಿಡಿಯುತ್ತಿತ್ತು.  ನೆಹರೂ ನಂತರವಾದರೂ ಅವರು ಪ್ರಧಾನಿಯಾಗುತ್ತಿದ್ದರು.
ಆ ಅವಕಾಶ ಮತ್ತೆ 1964ರಲ್ಲಿ ಜೆಪಿ ಮನೆಬಾಗಿಲು ಬಡಿದಿತ್ತು. ಅಸ್ವಸ್ಥರಾಗಿದ್ದ ನೆಹರೂ ಅವರ ಅಂತ್ಯ ಸಮೀಪಿಸುತ್ತಿದೆ ಎಂದು ಅನಿಸಿದಾಗ ಕೇಂದ್ರ ಸಂಪುಟದಲ್ಲಿ ಹಿರಿಯಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಖುದ್ದಾಗಿ ಜೆಪಿಯವರನ್ನು ಭೇಟಿ ಮಾಡಿ ನೆಹರೂ ನಂತರ ಪ್ರಧಾನಿಯಾಗುವಂತೆ ಕೋರಿಕೊಂಡಿದ್ದರು. ಗಾಂಧೀಜಿ ಹತ್ಯೆಯಾದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದ ಜೆಪಿಯವರು ಶಾಸ್ತ್ರಿಯವರ ಆಹ್ಹಾನವನ್ನು ಒಪ್ಪಿಕೊಳ್ಳಲಿಲ್ಲ.
ಆಗಲೇ ಅವರು ಪಕ್ಷರಾಜಕೀಯವನ್ನು ತ್ಯಜಿಸಿ ವಿನೋಬಾ ಭಾವೆ ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಆದರೆ ಇಳಿವಯಸ್ಸಿನಲ್ಲಿ ತಮ್ಮ ಅನಾರೋಗ್ಯದ ಹೊರತಾಗಿಯೂ ಮತ್ತೆ ಅವರು ಹೋರಾಟದ ರಾಜಕೀಯಕ್ಕೆ ಧುಮುಕಿದರು. ಚುನಾವಣಾ ರಾಜಕಾರಣದಿಂದ ಕೊನೆಯವರೆಗೆ ಅವರು ದೂರವೇ ಉಳಿದರು.
ಅಣ್ಣಾ ಹಜಾರೆ ಅವರು ಇನ್ನೊಬ್ಬ ಗಾಂಧಿ ಆಗಬೇಕು, ಮತ್ತೊಬ್ಬ ಜೆಪಿ ಆಗಬೇಕು ಎಂದು ಆಶಿಸುವುದು ಸುಲಭ. ಆದರೆ ಈಗಿನ ರಾಜಕೀಯದಲ್ಲಿ ಭ್ರಷ್ಟರೇ ಬಹುಸಂಖ್ಯೆಯಲ್ಲಿರುವಾಗ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವುದು  ಅಷ್ಟು ಸುಲಭ ಅಲ್ಲ. ಅಂತಹದ್ದೊಂದು ದೊಡ್ಡ ರಾಜಕೀಯ ಚಳುವಳಿಗೆ ಹೆಗಲು ಕೊಡುವ ನಾಯಕರು ಮತ್ತು ಕಾರ್ಯಕರ್ತರು ಎಷ್ಟು ಮಂದಿ ನಮ್ಮ ನಡುವೆ ಇದ್ದಾರೆ? ರಾಜಕಾರಣಿಗಳೆಂದರೆ ಭ್ರಷ್ಟರು ಎಂದಾಗಿರುವ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಚಳುವಳಿ ರಾಜಕಾರಣಿಗಳ ವಿರುದ್ಧವೇ ನಡೆಯುತ್ತಿದೆ ಎಂಬ ಆತಂಕ ಅಡ್ವಾಣಿಯವರಲ್ಲಿ ಹುಟ್ಟಿರುವುದು.
ಇದಕ್ಕೆ ಕಾರಣ ಎಲ್ಲ ಪಕ್ಷಗಳಲ್ಲಿ ಬಹುಸಂಖ್ಯೆಯಲ್ಲಿ ಭ್ರಷ್ಟರು ತುಂಬಿರುವುದು. ಜೆಪಿಯವರು ‘ಸಂಪೂರ್ಣಕ್ರಾಂತಿ’ ಚಳುವಳಿ ಪ್ರಾರಂಭಿಸಿದಾಗ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆಗಿನ ವಿರೋಧಪಕ್ಷಗಳಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಮಧುಲಿಮಯೆ, ಮುಲಾಯಂಸಿಂಗ್‌ಯಾದವ್, ಲಾಲುಪ್ರಸಾದ್,ನಾನಾಜಿ ದೇಶಮುಖ್ ಮೊದಲಾದ ನಾಯಕರಿದ್ದರು. ಇವರ್ಯಾರೂ ಆಗ ಅಧಿಕಾರ ರಾಜಕಾರಣದ ಕೆಸರಿಗೆ ಕಾಲಿಟ್ಟಿರಲಿಲ್ಲ.  ಎಡಪಕ್ಷಗಳ ನಾಯಕರನ್ನು ಹೊರತುಪಡಿಸಿ ಉಳಿದ ಯಾವ ವಿರೋಧಪಕ್ಷಗಳಲ್ಲಿ ಅಣ್ಣಾಹಜಾರೆ ಪಕ್ಕದಲ್ಲಿ ಕೂರುವ ಯೋಗ್ಯತೆ ಇರುವ ಎಷ್ಟು ಮಂದಿ ನಾಯಕರು ಈಗ ಇದ್ದಾರೆ?
ನಾಯಕರನ್ನು ಪಕ್ಕಕ್ಕೆ ಇಟ್ಟುಬಿಡಿ, ಹೋರಾಟದ ಸಾಗರಕ್ಕೆ ಧುಮುಕಲು ಸಿದ್ದ ಇರುವ ಕಾರ್ಯಕರ್ತರು ಎಷ್ಟು ಮಂದಿ ಇದ್ದಾರೆ. ನಾಳೆ ಅಣ್ಣಾ ಹಜಾರೆ ದೇಶವ್ಯಾಪಿ ಚಳುವಳಿಗೆ ಕರೆಗೊಟ್ಟರೆ ಎಲ್ಲವನ್ನೂ ತ್ಯಾಗಮಾಡಿ ಅದರಲ್ಲಿ ಪಾಲ್ಗೊಳ್ಳಲು ಎಷ್ಟುಮಂದಿ ಕಾರ್ಯಕರ್ತರು ಮುಂದೆಬರಬಹುದು? ಜೆಪಿ ಚಳುವಳಿ ಪ್ರಾರಂಭವಾಗಿದ್ದೇ ವಿದ್ಯಾರ್ಥಿ ಚಳುವಳಿಯಿಂದ ಎಂಬುದನ್ನು ಮರೆಯಬಾರದು.
ಅಹ್ಮದಾಬಾದ್ ಮತ್ತು ಮೋರ್ವಿಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್‌ನ ಊಟ-ತಿಂಡಿಯ ದರ ಏರಿಕೆ ವಿರುದ್ಧ ಚಳುವಳಿ ಪ್ರಾರಂಭಿಸಿದಾಗ ಅಲ್ಲಿ ಜೆಪಿ ಇರಲಿಲ್ಲ. ಅದರಿಂದ ಪ್ರೇರಣೆ ಪಡೆದು ಬಿಹಾರದ ವಿದ್ಯಾರ್ಥಿಗಳು ಚಳುವಳಿ ಪ್ರಾರಂಭಿಸಿದ್ದರು. ಆಗಲೂ ಜೆಪಿ ಅದರಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ. ಕೊನೆಗೆ ವಿದ್ಯಾರ್ಥಿಗಳು ತಮ್ಮ ನಾಯಕತ್ವ ವಹಿಸಬೇಕೆಂದು ಕೇಳಿಕೊಂಡಾಗ ಜೆಪಿ ‘ನಿಮ್ಮಲ್ಲಿ ಎಷ್ಟುಮಂದಿ ಕನಿಷ್ಠ ಒಂದುವರ್ಷದ ಮಟ್ಟಿಗೆ ಶಾಲೆ-ಕಾಲೇಜು ತೊರೆದು ಚಳುವಳಿಯಲ್ಲಿ ಭಾಗವಹಿಸಲು ಸಿದ್ಧ ಇದ್ದೀರಿ?’ ಎಂದು ಕೇಳಿದ್ದರು.
ವಿದ್ಯಾರ್ಥಿಗಳು ಭರವಸೆ ನೀಡಿದ ನಂತರವೇ ಜೆಪಿ ಸಕ್ರಿಯವಾಗಿ ಚಳುವಳಿನಿರತ ವಿದ್ಯಾರ್ಥಿಗಳ ಜತೆ ಸೇರಿಕೊಂಡದ್ದು.
ಅಣ್ಣಾಹಜಾರೆ ಅವರು ಮೊನ್ನೆಯ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದೆಹಲಿಯಲ್ಲಿ ಮಾತ್ರವಲ್ಲ ಬಹುತೇಕ ನಗರ-ಪಟ್ಟಣಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದಿದ್ದರು. ಆದರೆ ಅವರಿಗೆ ಅಣ್ಣಾ ಹಜಾರೆ ಅವರು ಅಂದು ಜೆಪಿ ಕೇಳಿದ್ದ ಪ್ರಶ್ನೆಯನ್ನೇ ಕೇಳಿದರೆ ಎಷ್ಟು ಮಂದಿ ಒಪ್ಪಿಕೊಳ್ಳಲು ಸಿದ್ದ ಇರಬಹುದು?
ಇಮೇಲ್, ಎಸ್‌ಎಂಎಸ್, ಟ್ವಿಟರ್‌ಗಳ ಮೂಲಕ ಕ್ರಾಂತಿ ಮಾಡಲು ಹೊರಟವರಲ್ಲಿ ಎಷ್ಟುಮಂದಿ ಆರು ತಿಂಗಳು ಕೆಲಸಕ್ಕೆ ರಜೆಹಾಕಿ ಅಣ್ಣಾಹಜಾರೆ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು? ಫ್ರೀಡಮ್‌ಪಾರ್ಕ್‌ನಲ್ಲಿ ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳು ಆಗಲೇ ಸಿಇಟಿ ಪರೀಕ್ಷೆಯ ತಲೆಬಿಸಿಯಲ್ಲಿದ್ದಾರೆ. ಇಮೇಲ್,ಎಸ್‌ಎಂಎಸ್, ಟ್ವಿಟರ್‌ಗಳು ಆಗಲೇ ನಿಂತುಬಿಟ್ಟಿವೆ. ಜೆಪಿ ಚಳುವಳಿಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಬಲ ತಂದುಕೊಟಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯಾದರೂ ಪ್ರಾಮಾಣಿಕರು ಉಳಿದುಕೊಂಡಿದ್ದಾರೆಯೇ? ಉಳಿದುಕೊಂಡಿದ್ದರೆ ಕನಿಷ್ಠ ಕರ್ನಾಟಕದಲ್ಲಿಯಾದರೂ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಬೀದಿಗಿಳಿಯಬೇಕಿತ್ತಲ್ಲಾ? ಇದು ಇಂದಿನ ವಾಸ್ತವ.
ಪ್ರಾಮಾಣಿಕತೆಯೊಂದರಿಂದಲೇ ರಾಜಕೀಯದಲ್ಲಿ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಅದು ಸಾಧ್ಯವಾಗುವುದಿದ್ದರೆ ಪ್ರಧಾನಿಯಾಗಿ ಮನಮೋಹನ್‌ಸಿಂಗ್ ಯಶಸ್ವಿಯಾಗಬೇಕಿತ್ತು. ಅಣ್ಣಾಹಜಾರೆ ಅವರು ಎಲ್ಲಾ ಬಗೆಯ ರಾಜಕೀಯದಿಂದ ದೂರ ಇದ್ದು ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಆದರೆ ಮನಮೋಹನ್‌ಸಿಂಗ್ ಅಧಿಕಾರ ಕೇಂದ್ರಿತ ರಾಜಕೀಯದಲ್ಲಿ ತೊಡಗಿಸಿಕೊಂಡೂ ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಇದೇನು ಕಡಿಮೆ ಸಾಧನೆಯಲ್ಲ. ಹೀಗಿದ್ದರೂ ಪ್ರಾಮಾಣಿಕ ಮನಮೋಹನ್‌ಸಿಂಗ್ ಅವರಿಗೆ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡಲು ಆಗಲಿಲ್ಲ. ಆದ್ದರಿಂದ ಕೇವಲ ಅಣ್ಣಾ ಹಜಾರೆ ಮತ್ತು ಅವರ ಬೆರಳೆಣಿಕೆಯ ಬೆಂಬಲಿಗರಿಂದ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗಲಿ, ರಾಜಕೀಯ ಬದಲಾವಣೆಯಾಗಲಿ ಸಾಧ್ಯವಾಗಲಾರದು.
ಇದು ಸಾಧ್ಯವಾಗಬೇಕಾದರೆ  ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಉಳಿದುಕೊಂಡಿರುವ ಸಜ್ಜನರು ತಮ್ಮ ಪಕ್ಷಗಳನ್ನು ತೊರೆದು ಹೊರಬಂದು ಅಣ್ಣಾಹಜಾರೆ ಮಾರ್ಗದರ್ಶನದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಲು ಕೈಜೋಡಿಸಬೇಕಾಗುತ್ತದೆ. ಇದು ಹೇಗೆ ಎನ್ನುವುದಕ್ಕೆ 1977 ಮತ್ತು 1989ರ ರಾಜಕೀಯ ಬದಲಾವಣೆಯ ಮಾದರಿಗಳು ನಮ್ಮ ಮುಂದಿವೆ.ಆಗ ಆಡಳಿತ ಪಕ್ಷ ಮಾತ್ರ ಭ್ರಷ್ಟವಾಗಿತ್ತು, ಈಗ ವಿರೋಧಪಕ್ಷಗಳೂ ಭ್ರಷ್ಟಗೊಂಡಿರುವುದರಿಂದ ಅಲ್ಲಿಯೂ ಒಡೆಯುವ ಕೆಲಸ ನಡೆಯಬೇಕಾಗುತ್ತದೆ. ಮೊದಲು ಅಣ್ಣಾ ಹಜಾರೆ ಚಳುವಳಿಯನ್ನು ಬೆಂಬಲಿಸುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿಯಿಂದಲೇ ಇದು ಪ್ರಾರಂಭವಾಗಲಿ.

Monday, April 11, 2011

ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ

ಕತ್ತಲೆಯ ಹಾದಿಯಲ್ಲಿ ಕನಸುಗಳ ದೀಪ ಹಿಡಿದುಕೊಂಡು ಹೊರಟವರಿಗೆ ಎದುರಾಗುವ ಪ್ರತಿಯೊಂದು ನೆರಳುಗಳಲ್ಲಿಯೂ ತಮ್ಮನ್ನು ಮುನ್ನಡೆಸುವ ಅವತಾರಪುರುಷ ಕಾಣುವುದು ಸಹಜ. ಭ್ರಷ್ಟ ವ್ಯವಸ್ಥೆಯಿಂದಾಗಿ ರೋಸಿಹೋಗಿ ಹತಾಶೆಗೀಡಾದ ಜನತೆಯ ಕಣ್ಣುಗಳಿಗೆ ಸರ್ಕಾರದ ವಿರುದ್ಧ ಸಣ್ಣಗೆ ಸಿಟ್ಟುಮಾಡಿಕೊಂಡ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿ ಒಬ್ಬ ಜಯಪ್ರಕಾಶ್ ನಾರಾಯಣ್ ಕಾಣುತ್ತಾರೆ, ಕಪ್ಪು ಹಣದ ವಿರುದ್ಧ ಮಾತನಾಡುವ ಒಬ್ಬ ಸಾಮಾನ್ಯ ಯೋಗಗುರು ಬಾಬಾ ರಾಮ್‌ದೇವ್ ಅವರಲ್ಲಿ ಒಬ್ಬ ವಿನೋಬಾ ಭಾವೆ ಕಾಣುತ್ತಾರೆ, ಒಬ್ಬ  ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರಲ್ಲಿ ಮಹಾತ್ಮ ಗಾಂಧೀಜಿ ಕಾಣುತ್ತಾರೆ.
ಆದರೆ ಒಬ್ಬ ಮಹಾತ್ಮ, ಒಬ್ಬ ಜೆಪಿ ಇಲ್ಲವೇ ಒಬ್ಬ ವಿನೋಬಾ ಭಾವೆ ರಾತ್ರಿ ಹಗಲಾಗುವುದರೊಳಗೆ ಸುದ್ದಿಮಾಧ್ಯಮಗಳ ಮಿಂಚುಬೆಳಕಲ್ಲಿ ಉದಿಸಿದ ತಾರೆಗಳಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಆ ಮಹನೀಯರ ಹೋರಾಟದ ಬದುಕನ್ನು ಅಗೌರವಿಸಿದಂತಾಗುವುದು ಮಾತ್ರವಲ್ಲ, ಭ್ರಷ್ಟಚಾರದ ವಿರುದ್ದ ದೇಶದಾದ್ಯಂತ ಹುಟ್ಟಿಕೊಂಡಿರುವ ಜನಾಭಿಪ್ರಾಯ ತಾರ್ಕಿಕ ಅಂತ್ಯ ಕಾಣದೆ ವ್ಯರ್ಥಗೊಂಡು ಮತ್ತೊಂದು ಭ್ರಮನಿರಸನಕ್ಕೆ ದಾರಿಮಾಡಿಕೊಡುವ ಅಪಾಯವೂ ಇದೆ.
ಸರ್ಕಾರ ಮಣಿಯಲು ಕಾರಣವಾದ ‘ಕ್ರಾಂತಿಯ ಹರಿಕಾರರು’ ತಾವೇ ಎಂದು  ಮಾಧ್ಯಮಗಳು ಆಗಲೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿವೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಯಶಸ್ಸಿನಲ್ಲಿ ಅತೀ ಎನಿಸುವಷ್ಟು ಕ್ರಿಯಾಶೀಲವಾಗಿದ್ದ ಮಾಧ್ಯಮಗಳ, ಅದರಲ್ಲೂ ಹುಟ್ಟು-ಸಾವುಗಳೆರಡನ್ನೂ ಹಬ್ಬದಂತೆ ಆಚರಿಸುವ ಟಿವಿ ಚಾನೆಲ್‌ಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಟಿವಿ ಚಾನೆಲ್‌ಗಳು ಆಗಲೇ ಭಿನ್ನ ರಾಗ ಹಾಡುತ್ತಿರುವ ಬಾಬಾ ರಾಮ್‌ದೇವ್ ಅವರ ಸುತ್ತ ನೆರೆದಿವೆ. ಮಾಧ್ಯಮಗಳ ಮೇಲಿನ ಅತಿ ಅವಲಂಬನೆಯ ಅಪಾಯ ಇದು.
ಒಂದು ಮಸೂದೆಯ ರಚನೆಯ ಸಮಿತಿಯಲ್ಲಿ ನಾಗರಿಕ ಸಮಾಜದ ಐವರು ಪ್ರತಿನಿಧಿಗಳು ಪಾಲ್ಗೊಳ್ಳಲು ಸರ್ಕಾರ ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ತಿಳಿದುಕೊಳ್ಳಬೇಕಾಗಿಲ್ಲ. ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆಯ ಆಳ-ಅಗಲಗಳ ಪರಿಚಯ ಇರುವ ಯಾರೂ ಅಷ್ಟೊಂದು ಆಶಾವಾದಿಯಾಗುವುದು ಸಾಧ್ಯ ಇಲ್ಲ. ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಯಾಕೆ ಬೇಕು? ರಾಜ್ಯದ ಮುಖ್ಯಮಂತ್ರಿ ಮತ್ತು ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತರು ಮಾಡಬೇಕಾಗಿದ್ದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟು ಕೈ ಕಟ್ಟಿಹಾಕಿಲ್ಲವೇ? ಇಲ್ಲಿ ಹೈಕೋರ್ಟ್ ಇದ್ದರೆ ಅಲ್ಲಿ ಸುಪ್ರೀಂಕೋರ್ಟ್ ಇದೆ. ನ್ಯಾಯಾಲಯಗಳು ಕೂಡಾ ಇಂದು ಸಂಶಯಾತೀತವಾಗಿ ಉಳಿದಿಲ್ಲ. ಆದ್ದರಿಂದ ಲೋಕಪಾಲರ ನೇಮಕದಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲಿದೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ ಲೋಕಪಾಲರ ನೇಮಕಕ್ಕಿಂತಲೂ ಮೊದಲು ಈಗಿನ ಭ್ರಷ್ಟರಾಜಕೀಯ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಯಾಗಬೇಕಿತ್ತು. ಪ್ರತಿಯೊಂದು ಕಾನೂನನ್ನೂ ನಾಗರಿಕ ಸಮಾಜವೇ ರಚಿಸುವ ಇಲ್ಲವೇ ತಿದ್ದುವ ಕೆಲಸವನ್ನು ಮಾಡುವುದು ಸಾಧ್ಯ ಇಲ್ಲವಲ್ಲಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸವನ್ನು ಮಾಡಬೇಕಾಗಿರುವುದು ಶಾಸನ ರಚನೆಯ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳಲ್ಲವೇ? ಆದ್ದರಿಂದ ಶಾಸನಸಭೆಗೆ ಪ್ರಾಮಾಣಿಕರು, ಸಚ್ಚಾರಿತ್ರ್ಯಉಳ್ಳವರು ಮತ್ತು ಪ್ರಜ್ಞಾವಂತರು ಆರಿಸಿಬರುವಂತಹ ಚುನಾವಣಾ ವ್ಯವಸ್ಥೆ ಇಲ್ಲದೆ ಹೋದರೆ ಪ್ರತಿಬಾರಿ ಜನಪರವಾದ ಕಾನೂನು ರಚನೆಗೆ ಅಣ್ಣಾ ಹಜಾರೆ ಅವರು ಉಪವಾಸ ಕೂರಬೇಕಾಗುತ್ತದೆ.
ಅಂದ ಮಾತ್ರಕ್ಕೆ ಸಿನಿಕರಾಗುವ ಅಗತ್ಯ ಖಂಡಿತ ಇಲ್ಲ. ಬೇರೇನೂ ಆಗಬೇಕಾಗಿಲ್ಲ, ಸಿವಿಲ್ ಸೊಸೈಟಿ ರಚಿಸಿರುವ ‘ಜನಲೋಕಪಾಲ ಮಸೂದೆ’ ಅದರ ಮೂಲರೂಪದಲ್ಲಿಯೇ ಕಾಯಿದೆಯಾಗಿ ಅನುಷ್ಠಾನಕ್ಕೆ ಬಂದರಷ್ಟೇ ಸಾಕು. ದೇಶದ ಈಗಿನ ಜನಾಂಗ ಮಾತ್ರವಲ್ಲ ಭವಿಷ್ಯದ ಜನಾಂಗ ಕೂಡಾ ಹಜಾರೆ ಅವರಿಗೆ ಚಿರಋಣಿಯಾಗಿರುತ್ತದೆ. ಆದರೆ  ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದರೆ ಮುಂದಿನ ದಾರಿ ತುಳಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹೋರಾಟಗಾರರೆಲ್ಲರೂ ಶತ್ರುಗಳನ್ನು ಸರಿಯಾಗಿಯೇ ಗುರುತಿಸಿಕೊಂಡಿರುತ್ತಾರೆ, ಆದರೆ ಯಾವಾಗಲೂ ಹೋರಾಟ ಎಡವಿ ಬೀಳುವುದು ಅದರ ನಾಯಕರು ಆರಿಸಿಕೊಳ್ಳುವ ಮಿತ್ರರ ಆಯ್ಕೆಯಲ್ಲಿ. ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಎಚ್ಚರ ವಹಿಸಬೇಕಾಗಿರುವುದು ಮಿತ್ರರ ಬಗ್ಗೆ, ಶತ್ರುಗಳ ಬಗ್ಗೆ ಅಲ್ಲ.
ಆಮರಣ ಉಪವಾಸ ಕೊನೆಗೊಳಿಸುವ ಮುನ್ನ ಅಣ್ಣಾ ಹಜಾರೆ ಅವರು ಅಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿದ್ದವು. ಆ ಹೊತ್ತಿನಲ್ಲಿ ವೇದಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಕಾಗದದ ಪೊಟ್ಟಣವೊಂದನ್ನು ಬಿಚ್ಚಿ ದೊಡ್ಡ ಕತ್ತಿಯೊಂದನ್ನು ಹೊರತೆಗೆದು ಅಣ್ಣಾ ಅವರ ಕೈಗೆ ಕೊಡಲು ಹೊರಟಿದ್ದ. ಪಕ್ಕದಲ್ಲಿದ್ದ ಸ್ವಾಮಿ ಅಗ್ನಿವೇಶ್ ತಕ್ಷಣ ಜಾಗೃತರಾಗಿ ಕತ್ತಿ ಕೊಡಲು ಬಂದವನನ್ನು ಹಿಂದಕ್ಕೆ ಸರಿಸಿದರು. ಇಲ್ಲದೆ ಹೋಗಿದ್ದರೆ ನಾವೆಲ್ಲ ಕಾಣಬಯಸುವ ‘ಮಹಾತ್ಮಗಾಂಧಿ’ ಅವರು ಕೈಯಲ್ಲಿ ಕತ್ತಿ ಹಿಡಿದ ‘ರೋಮಾಂಚಕಾರಿ’ ಕ್ಷಣಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡಿಬಿಡುತ್ತಿದ್ದವು. ಮರುದಿನದ ಪತ್ರಿಕೆಗಳಲ್ಲಿ ಅದೇ ಚಿತ್ರ ಪ್ರಕಟವಾಗುತ್ತಿತ್ತೋ ಏನೋ? ಕಣ್ಣರೆಪ್ಪೆ ಮುಚ್ಚಿ ತೆರೆದುಕೊಳ್ಳುವಷ್ಟರಲ್ಲಿ ನಡೆದುಹೋದ ಈ ಸಣ್ಣ ಘಟನೆ ಅಣ್ಣಾ ಹಜಾರೆ ಹೋರಾಟದ ಶಕ್ತಿ-ದೌರ್ಬಲ್ಯಗಳೆರಡನ್ನೂ ಹೇಳುವಂತಿತ್ತು.
ಕತ್ತಿ ಮತ್ತು ಉಪವಾಸದ ಸಂಕೇತಗಳು ಬೇರೆ. ಅವುಗಳು ಬಿಂಬಿಸುವ ವಿಚಾರಧಾರೆಗಳು ಕೂಡಾ ಬೇರೆಬೇರೆ. ಅಣ್ಣಾ ಅವರ ಪಕ್ಕದಲ್ಲಿ ಮಾವೋವಾದಿಗಳಿಗೂ ಅಹಿಂಸೆಯ ಪಾಠ ಬೋಧಿಸುತ್ತಿರುವ ಸ್ವಾಮಿ ಅಗ್ನಿವೇಶ್ ಅಂತಹವರು ಮಾತ್ರವಲ್ಲ ಬಂದೂಕಿನ ನಳಿಕೆಯ ಮೂಲಕ ಬದಲಾವಣೆಯನ್ನು ತರಬಯಸುವ ಕಾಡಲ್ಲಿರುವ ಮಾವೋವಾದಿಗಳಿಗೂ, ಅದನ್ನೇ ಉಪವಾಸದ ಮೂಲಕ ಮಾಡಲು ಹೊರಟಿರುವ ಅಣ್ಣಾ ಹಜಾರೆ ಎಂಬ ಗಾಂಧಿವಾದಿಗೂ ಇರುವ ವ್ಯತ್ಯಾಸವನ್ನೇ ಅರಿಯದ ಕುರುಡುಕಣ್ಣುಗಳ ಕತ್ತಿವೀರರೂ ಇದ್ದಾರೆ. ಸ್ವಾಮಿ ಅಗ್ನಿವೇಶ್, ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇರ್ಜಿವಾಲಾ, ಕಿರಣ್‌ಬೇಡಿ ಮೊದಲಾದವರ ಜತೆಯಲ್ಲಿ ಬಾಲಿವುಡ್ ತಾರೆಯರು, ಆಧ್ಯಾತ್ಮವನ್ನೇ ವ್ಯಾಪಾರ ಕೊಂಡಿರುವ ‘ದೇವಮಾನವ’ರು, ಅಧಿಕಾರ ಕಳೆದುಕೊಂಡಿರುವ ಭಗ್ನಹೃದಯಿ ರಾಜಕಾರಣಿಗಳು ಕೂಡಾ ಇದ್ದಾರೆ.
ಇವರೆಲ್ಲರ ನಡುವೆ ಅಣ್ಣಾ ಹಜಾರೆ ಅವರ ಜತೆಯಲ್ಲಿಯೇ ಆಮರಣ ಉಪವಾಸ ಕೂತ ವ್ಯಕ್ತಿಗಳ ಹೆಸರಾದರೂ ಯಾರಿಗಾದರೂ ಗೊತ್ತಿದೆಯೇ? ಯಾವ ಪತ್ರಿಕೆಗಳಲ್ಲಿಯಾದರೂ ಅವರ ಹೆಸರು ಪ್ರಕಟಗೊಂಡಿದೆಯೇ? ಯಾವುದಾದರೂ ಟಿವಿ ಚಾನೆಲ್ ಅವರ ಹೆಸರು ಹೇಳಿದೆಯೇ? ತಾನು ಉಪವಾಸ ಅಂತ್ಯಗೊಳಿಸುವ ಮೊದಲು ಅಣ್ಣಾ ಅವರು ಉಪವಾಸ ಕೂತಿದ್ದವರನ್ನು ಎಬ್ಬಿಸಿ ಅವರ ಗಲ್ಲ ಎತ್ತಿ ಹಣ್ಣಿನ ರಸ ಕುಡಿಸುತ್ತಿದ್ದಾಗಷ್ಟೇ ಆ ಅನಾಮಿಕ ಸತ್ಯಾಗ್ರಹಿಗಳ ಮುಖದರ್ಶನವಾಗಿದ್ದು. ಆಗಲೂ ಅವರ ಹೆಸರುಗಳನ್ನು ಯಾರೂ ಹೇಳಲಿಲ್ಲ.  ಆದರೆ ಮುಂಬೈನಲ್ಲಿ ವಿಮಾನದಲ್ಲಿ ಹಾರಿಬಂದು, ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ತಿಂಡಿ-ತೀರ್ಥ ಸೇವಿಸಿ ಪಿಆರ್‌ಗಳ ಮೂಲಕ ಮಾಧ್ಯಮಮಿತ್ರರಿಗೆ ತಮ್ಮ ಆಗಮನದ ವಿಷಯವನ್ನು ಮುಂಚಿತವಾಗಿಯೇ ತಿಳಿಸಿ ಅಣ್ಣಾಹಜಾರೆಯವರ ಜತೆಯಲ್ಲಿ ಒಂದಷ್ಟು ಹೊತ್ತು ಕಾಣಿಸಿಕೊಂಡು ಮಿಂಚಿದ ಬಾಲಿವುಡ್ ತಾರೆಯರ ಹೆಸರುಗಳೆಲ್ಲ ಟಿವಿ ನೋಡುವ, ಪತ್ರಿಕೆ ಓದುವ ಜನರಿಗೆಲ್ಲ ಬಾಯಿಪಾಠವಾಗಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಟಿವಿ ಕ್ಯಾಮೆರಾಗಳು ಕಣ್ಣಿಟ್ಟಿರುವ ವೇದಿಕೆಗಳಿಂದ ಪ್ರಾರಂಭವಾಗುವುದಲ್ಲ, ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನೊಳಗಿಂದ ಪ್ರಾರಂಭವಾಗಬೇಕು.  ಎದೆ-ತೋಳುಗಳ ಮೇಲೆ ಅಣ್ಣಾಹಜಾರೆ ಹೆಸರು ಬರೆಸುವುದರಿಂದ, ಒಂದೆರಡು ಗಂಟೆ ಧರಣಿ ಕೂತು ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಇಲ್ಲವೇ ಬೀದಿಗಳಲ್ಲಿ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು ಸಾಧ್ಯ ಇಲ್ಲ. ಈ ಚಿತ್ರತಾರೆಯರು ಸರ್ಕಾರಕ್ಕೆ ವಂಚನೆ ಮಾಡದೆ ಗಳಿಸಿದ ಹಣಕ್ಕೆ ಸರಿಯಾಗಿ ವರಮಾನ ತೆರಿಗೆ ಕೊಟ್ಟರೆ ಸಾಕು.
ಅಣ್ಣಾ ಹಜಾರೆ ಅವರಿಗೆ ಅದಕ್ಕಿಂತ ದೊಡ್ಡ ಬೆಂಬಲ ಬೇಕಿಲ್ಲ. ಸಾಧ್ಯವಾದರೆ ಒಂದಷ್ಟು ಒಳ್ಳೆಯ ಅಭಿರುಚಿಯ ಚಿತ್ರಗಳನ್ನು ಸಮಾಜಕ್ಕೆ ನೀಡಲಿ. ಈ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಎಂದು ಎದೆಮೇಲೆ ಕೈಯಿಟ್ಟು ಹೇಳುವ ಎಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ? ಲಂಚ ಸ್ವೀಕರಿಸುವುದಿಲ್ಲ ಮಾತ್ರವಲ್ಲ ಕೊಡುವುದೂ ಇಲ್ಲ,  ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಗೊತ್ತಿದ್ದೂ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದವರು ಮಾತ್ರ ವೇದಿಕೆ ಹತ್ತಿ ಎಂದು  ಹಜಾರೆ ಹೇಳಿದ್ದರೆ ಅವರು ಉಪವಾಸ ಕೂತಿದ್ದ ವೇದಿಕೆ ಮುಕ್ಕಾಲು ಪಾಲು ಖಾಲಿಯಾಗಿರುತ್ತಿತ್ತು.
ಎರಡನೆಯ ದೊಡ್ಡ ಅಪಾಯ ಇರುವುದು ಇಂತಹ ಹೋರಾಟಗಾರರನ್ನೆಲ್ಲ ಸುಲಭದಲ್ಲಿ ಸಮ್ಹೋಹನಕ್ಕೊಳಪಡಿಸುವ ರಾಜಕೀಯ ಮಾಯಾಂಗನೆಯಿಂದ. ಎಂಬತ್ತರ ದಶಕದ ಆದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಾಗೆಲ್ಲ ಬೆಂಗಳೂರಿನ ಜನಜೀವನ ಸ್ಥಗಿತಗೊಳ್ಳುತ್ತಿತ್ತು. ಅಧಿಕಾರದಲ್ಲಿದ್ದವರು ಕೈಕಾಲು ಕಂಪಿಸುತ್ತಿದ್ದವು. ಮುಂದೆ ರೈತರದ್ದೇ ಸರ್ಕಾರ ಎಂದು ಭ್ರಮಿಸಿಕೊಂಡವರು ಆ ಕಾಲದಲ್ಲಿ ಬಹಳ ಮಂದಿ ಇದ್ದರು. ಇನ್ನೊಂದೆಡೆ ಅಲ್ಲಿಯ ವರೆಗೆ ಕೇವಲ ಮುಖರಹಿತ ಮತಬ್ಯಾಂಕ್ ಆಗಿದ್ದ ದಲಿತರು ಸಂಘಟಿತರಾಗಿ ನಡೆಸುತ್ತಿದ್ದ ಚಳವಳಿಯಿಂದ ರಾಜಕೀಯ ಪಕ್ಷಗಳು ತಮ್ಮ ನೆಲೆ ಕಳೆದುಕೊಂಡವರಂತೆ ಭೀತಿಗೊಳಗಾಗಿದ್ದವು. ಆದರೇನಾಯಿತು? ಈ ಎರಡೂ ಚಳವಳಿಗಳ ನಾಯಕರು ರಾಜಕೀಯದ ಮೋಹಪಾಶಕ್ಕೆ ಸಿಕ್ಕಿ ತಾವು ನೆಲೆಕಲೆದುಕೊಂಡಿದ್ದು ಮಾತ್ರವಲ್ಲ ಚಳವಳಿಗಳು ಕೂಡಾ ದಿಕ್ಕು ತಪ್ಪಲು ಕಾರಣರಾದರು. ಈ ಅಪಾಯವನ್ನು ಅಣ್ಣಾ ಹಜಾರೆ ಮತ್ತು ಸಂಗಡಿಗರು ಕೂಡಾ ಮುಂದಿನ ದಿನಗಳಲ್ಲಿ ಎದುರಿಸುವ ಸಾಧ್ಯತೆ ಇದೆ.
ಆಗಲೇ ‘ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಅಣ್ಣಾ ಹಜಾರೆ ಅವರನ್ನು ಪೆದ್ದುಪೆದ್ದಾಗಿ ಕೇಳತೊಡಗಿದ್ದಾರೆ. ಈ ರೀತಿಯ ಜನಬೆಂಬಲ ಕಂಡಾಗ ಎಂತಹ ಗಟ್ಟಿಮನಸ್ಸಿನ ನಾಯಕರ ಸಂಯಮವೂ ಕರಗುವುದು ಸಹಜ. ಅಣ್ಣಾ ಹಜಾರೆ ಅವರಲ್ಲಿ ಅಲ್ಲದಿದ್ದರೂ ಅವರ ಬೆಂಬಲಿಗರಲ್ಲಿ ರಾಜಕೀಯ ಆಕಾಂಕ್ಷೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಬಾಬಾ ರಾಮ್‌ದೇವ್ ಅವರ ಭಿನ್ನಮತದ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರಿಂದಾಗಿ ತನ್ನ ರಾಜಕೀಯ ಆಕಾಂಕ್ಷೆ ಭಗ್ನಗೊಳ್ಳಬಹುದೆಂಬ ಭೀತಿಯಿಂದ ಹುಟ್ಟಿಕೊಂಡ ಹತಾಶೆಯೂ ಇರುವಂತೆ ಕಾಣುತ್ತಿದೆ.
ಆದ್ದರಿಂದ ಎಲ್ಲಿಯ ವರೆಗೆ ಅಣ್ಣಾಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ ಅಲ್ಲಿಯ ವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು. ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ  ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ದವಾಗಬೇಕು. ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿಯಾಗಲಿ, ಶಕ್ತಿಯಾಗಲಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ. ರಾಜಕೀಯ ಪಕ್ಷಗಳು ಕೂಡಾ  ಮೈಯೆಲ್ಲ ಕಣ್ಣಾಗಿ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ.

Monday, April 4, 2011

ಇಂದಿರಾಗಾಂಧಿ, ವಾಜಪೇಯಿ ಅವರಿಂದ ಕಲಿಯಿರಿ

ಇಷ್ಟೊಂದು ದೇಶಪ್ರೇಮ ಇವರಲ್ಲೆಲ್ಲ ಎಲ್ಲಿ ಅಡಗಿ ಕೂತಿರುತ್ತೋ ಗೊತ್ತಿಲ್ಲ.  ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳು ಮುಖಾಮುಖಿಯಾದ ಕೂಡಲೇ ಇವರೊಳಗಿನ ದೇಶಪ್ರೇಮ ಜ್ವಾಲಾಮುಖಿಯಂತೆ ಸಿಡಿದು ಬೀದಿಬೀದಿಗಳಲ್ಲಿ ಹರಿಯತೊಡಗುತ್ತದೆ.  ಕ್ರಿಕೆಟ್ ಎನ್ನುವುದು ಭಾರತದ ಹೆಮ್ಮೆ ಹೇಗೋ ಹಾಗೆ ದೌರ್ಬಲ್ಯ ಕೂಡಾ.
ಜನತೆಯ ದೌರ್ಬಲ್ಯದ ಹುಡುಕಾಟದಲ್ಲಿರುವ ರಾಜಕಾರಣಿಗಳು ಕ್ರಿಕೆಟ್ ಕಾಲ ಪ್ರಾರಂಭವಾಯಿತೆಂದರೆ ಒಮ್ಮಿಂದೊಮ್ಮೆಲೇ ಕ್ರಿಕೆಟ್ ಪ್ರೇಮಿಗಳಾಗುವುದು ಇದೇ ಕಾರಣಕ್ಕಾಗಿ. ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದರೆ ಸಾಕ್ಷಾತ್ ಪ್ರಧಾನಮಂತ್ರಿಗಳೇ ಸ್ಟೇಡಿಯಂಗೆ ಬಂದಿಳಿಯುತ್ತಾರೆ.

ಮನಮೋಹನ್‌ಸಿಂಗ್ ಅವರು ತಾನು ಹೋಗಿದ್ದು ಮಾತ್ರವಲ್ಲ ಪಾಕಿಸ್ತಾನದ ಪ್ರಧಾನಿಯನ್ನೂ ಕರೆಸಿ ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಅಲ್ಲಿ ಭಾರತದ ಗೆಲುವಿಗೆ ಚಪ್ಪಾಳೆತಟ್ಟಿ ‘ದೇಶಪ್ರೇಮ’ ಮೆರೆದಿದ್ದಾರೆ. ಇದು ಕೇವಲ ಕ್ರಿಕೆಟ್ ಮೇಲಿನ ಪ್ರೀತಿ ಖಂಡಿತ ಅಲ್ಲ. ಅಂತಹ ಪ್ರೀತಿ ಹೊಂದಿದ್ದರೆ ವಿಶ್ವಕಪ್‌ನ ಸೆಮಿಫೈನಲ್‌ಗೆ ಯಾಕೆ ಹೋಗಬೇಕಿತ್ತು, ಫೈನಲ್ ನೋಡಲು ಹೋಗಬಹುದಿತ್ತಲ್ಲ?
ಕ್ರಿಕೆಟ್ ಎನ್ನುವ ಆಟ ಇಂದು ಭಾರತ ಮತ್ತು ಪಾಕಿಸ್ತಾನದ ಮನಸ್ಸುಗಳನ್ನು ಬೆಸೆಯುವ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ, ಯಾಕೆಂದರೆ ಇಂದಿನ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಒಂದೆಡೆ ಉದ್ಯಮ, ರಾಜಕೀಯ ಮತ್ತು ಅಪರಾಧ ಜಗತ್ತುಗಳ ನೆರಳು ಅದರ ಮೇಲೆ ಚಾಚಿದ್ದರೆ ಇನ್ನೊಂದೆಡೆ ಅದು ಮನಸ್ಸುಗಳನ್ನು ಒಡೆಯುವ ಅಸ್ತ್ರವಾಗಿ ಹೋಗಿದೆ.

ಇದಕ್ಕೆ ಎರಡೂ ದೇಶಗಳ ರಾಜಕಾರಣಿಗಳು ಮತ್ತು ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳು ಕಾರಣ. ಕ್ರಿಕೆಟ್‌ನ ಸೋಲು-ಗೆಲುವುಗಳು ದೇಶದ ಸೋಲು-ಗೆಲುವು ಎಂದು ತಿಳಿದುಕೊಳ್ಳುವಂತಹ ಸಮೂಹಸನ್ನಿ ಹರಡಿರುವಾಗ ಯಾವ ಬಗೆಯ ಸೌಹಾರ್ದತೆಯ ಸ್ಥಾಪನೆ ಸಾಧ್ಯ? ಇಂತಹ ಪರಿಸ್ಥಿತಿಯಲ್ಲಿ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿದ್ದ ದೇಶದ ಕ್ರಿಕೆಟ್ ಅಭಿಮಾನಿಗಳ ಜೈಕಾರ, ಚೀತ್ಕಾರಗಳು ಮಾತ್ರವಲ್ಲ ಗೆದ್ದ ಭಾರತವನ್ನು ಅಭಿನಂದಿಸಲು ಪ್ರಧಾನಿ ಹೊಡೆದ ಚಪ್ಪಾಳೆ ಕೂಡಾ ತನಗೆ ಮಾಡುತ್ತಿರುವ ಅವಮಾನ ಎಂದು ಪಕ್ಕದಲ್ಲಿ ಕೂತ ಪಾಕಿಸ್ತಾನದ ಪ್ರಧಾನಿ ತಿಳಿದುಕೊಂಡರೆ ಆಶ್ಚರ್ಯವೇನಿದೆ? ಇದರಿಂದ ಏನನ್ನು ಸಾಧಿಸಿದಂತಾಯಿತು?ಅದೂ ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯಲ್ಲಿ ದುರ್ಬಲ ಸ್ಥಾನಮಾನ ಹೊಂದಿರುವ ಪ್ರಧಾನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು. ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದು ತರುವ ಸಾಮರ್ಥ್ಯವಾದರೂ ಗಿಲಾನಿ ಅವರಿಗೆಲ್ಲಿದೆ?
ಕೇವಲ ಅಗ್ಗದ ಜನಪ್ರಿಯತೆ ಗಳಿಸುವ ಉದ್ದೇಶದ ಇಂತಹ ರಾಜತಾಂತ್ರಿಕ ಕಸರತ್ತುಗಳಿಂದ ಎರಡು ದೇಶಗಳ ಸಂಬಂಧ ಸುಧಾರಣೆಯಾಗಲಾರದು. ಇದಕ್ಕಾಗಿ ಎರಡೂ ದೇಶಗಳ ನಾಯಕರು ಸವೆದ ದಾರಿಯನ್ನೇ ಮತ್ತೆ ತುಳಿಯದೆ ಹೊಸದಾರಿ ಕಂಡುಕೊಳ್ಳುವ ದಿಟ್ಟತನ ಮತ್ತು ಅಪ್ರಿಯ ನಿರ್ಧಾರ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿ ತೋರಬೇಕು. ಹಿಂದಿನ ಇಬ್ಬರು ಪ್ರಧಾನಿಗಳು ಈ ಕೆಲಸ ಮಾಡಿದ್ದಾರೆ.
ಅವರಲ್ಲೊಬ್ಬರು ಇಂದಿರಾಗಾಂಧಿ, ಇನ್ನೊಬ್ಬರು ಅಟಲಬಿಹಾರಿ ವಾಜಪೇಯಿ. ಇವರಿಬ್ಬರ ಕಾಲದಲ್ಲಿಯೇ ಕ್ರಮವಾಗಿ ಶಿಮ್ಲಾ ಮತ್ತು ಆಗ್ರಾ ಶೃಂಗಸಭೆಗಳು ನಡೆದದ್ದು. ಆ ನಾಯಕರ ಅದೃಷ್ಟವೇನೆಂದರೆ ಅವರ ಕಾಲದಲ್ಲಿ ಪಾಕಿಸ್ತಾನದಲ್ಲಿ ಕ್ರಮವಾಗಿ ಜುಲ್ಫೆಕರ್ ಅಲಿ ಭುಟ್ಟೋ ಮತ್ತು ಪರ್ವೇಜ್ ಮುಷರಫ್ ಎಂಬ ಇಬ್ಬರು ಬಲಿಷ್ಠ ನಾಯಕರಿದ್ದರು. ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನವನ್ನು ಹಣಿದುಹಾಕಿ ಆರೇ ತಿಂಗಳ ಅವಧಿಯಲ್ಲಿ ಮತ್ತೆ ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದುತಂದ ಕೀರ್ತಿ ಇಂದಿರಾಗಾಂಧಿಯವರದ್ದು. ಸೋಲಿನಿಂದ ಅವಮಾನಕ್ಕೀಡಾಗಿದ್ದರೂ ವ್ಯತಿರಿಕ್ತವಾದ ಜನಾಭಿಪ್ರಾಯಕ್ಕೆ ಅಂಜದೆ ಮಾತುಕತೆಗೆ ಬಂದದ್ದು ಭುಟ್ಟೋ ಅವರ ವ್ಯಕ್ತಿತ್ವದ ಶಕ್ತಿ.
 ಇಬ್ಬರೂ ಪ್ರಧಾನಿಗಳಿಗೆ ತಮ್ಮ ದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಡಬಲ್ಲ ಯಾವ ಅಂಶಗಳೂ ಶಿಮ್ಲಾ ಒಪ್ಪಂದದಲ್ಲಿ ಇರಲಿಲ್ಲ ಎನ್ನುವುದು ಗಮನಿಸುವಂತಹದ್ದು. ಆದರೆ ಇಬ್ಬರೂ ಕೂಡಾ ಯಾವುದೇ ಒಪ್ಪಂದದ ಮೂಲಸೂತ್ರವಾದ ‘ಕೊಟ್ಟು ತೆಗೆದುಕೊಳ್ಳುವ’ ಔದಾರ್ಯ ತೋರಿದ್ದರು. ಸೋತ ದೇಶದ ನಾಯಕನಿಗೆ ಮುಜುಗರವಾಗದಂತೆ, ಆತ ತನ್ನ ದೇಶಕ್ಕೆ ಹಿಂದಿರುಗಿದಾಗ ಜನರ ವಿರೋಧಕ್ಕೆ ಬಲಿಯಾಗದಂತೆ ಇಂದಿರಾಗಾಂಧಿ ಎಚ್ಚರಿಕೆಯಿಂದ ಭುಟ್ಟೋ ಅವರನ್ನು ನಡೆಸಿಕೊಂಡಿದ್ದರು.
‘1971ರ ಡಿಸೆಂಬರ್ 17ರಂದು ನಡೆದ ಕದನವಿರಾಮದ ನಂತರ ಗುರುತುಮಾಡಲಾಗಿದ್ದ ಗಡಿರೇಖೆಯನ್ನು ನಿಯಂತ್ರಣ ರೇಖೆಯನ್ನಾಗಿ ಎರಡೂ ದೇಶಗಳು ಯಾವುದೇ ಪೂರ್ವಗ್ರಹ ಇಲ್ಲದೆ ಒಪ್ಪಿಕೊಳ್ಳಬೇಕು...’ ಎನ್ನುವುದು ಶಿಮ್ಲಾ ಒಪ್ಪಂದದ ಮಹತ್ವದ ಅಂಶ. ಈ ನಿಯಂತ್ರಣ ರೇಖೆಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೆರ ಮತ್ತು ಭಾರತದ ನಿಯಂತ್ರಣದಲ್ಲಿರುವ ಕಾಶ್ಮೆರವನ್ನು ಪ್ರತ್ಯೇಕಗೊಳಿಸಿರುವುದು.

ಕಾಶ್ಮೀರದ ಮೇಲೆ ಸತತವಾಗಿ ಹಕ್ಕುಸ್ಥಾಪನೆ ಮಾಡುತ್ತಾ ಬಂದ ಮತ್ತು ಈ ವಿವಾದವನ್ನು ವಿಶ್ವಸಂಸ್ಥೆಯ ವರೆಗೆ ಎಳೆದುಕೊಂಡು ಹೋಗಿದ್ದ ಪಾಕಿಸ್ತಾನ ಮೊದಲ ಬಾರಿ ಅದನ್ನು ಬಿಟ್ಟುಕೊಟ್ಟದ್ದು ಶಿಮ್ಲಾ ಒಪ್ಪಂದದ ಮೂಲಕವೇ. ಅಷ್ಟು ಮಾತ್ರವಲ್ಲ ಇಬ್ಬರು ನಾಯಕರ ನಡುವೆ ಮೌಖಿಕವಾದ ಒಪ್ಪಂದವೊಂದು ಕೂಡಾ ಆ ಸಮಯದಲ್ಲಿ ನಡೆದಿತ್ತು.
ಆದರೆ ಅದು ನಡೆದಿದ್ದು ಮಾತುಕತೆ ನಡೆಯುತ್ತಿದ್ದ ಅಧಿಕೃತ ಬಂಗಲೆಯಲ್ಲಿ ಅಲ್ಲ, ಯಾಕೆಂದರೆ ಅಲ್ಲಿ ಆಗಲೇ ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆಯಾದ ಐಎಸ್‌ಐ ಮಾತು ಕದ್ದಾಲಿಕೆಯ ಉಪಕರಣಗಳನ್ನು ಜೋಡಿಸಿಟ್ಟಿತ್ತಂತೆ. ಇದಕ್ಕಾಗಿ ಭುಟ್ಟೋ ಇಂದಿರಾಗಾಂಧಿಯವರನ್ನು ವಾಯುವಿಹಾರಕ್ಕೆ ಕರೆದೊಯ್ದು ‘ನಿಯಂತ್ರಣ ರೇಖೆಯನ್ನು  ಕ್ರಮೇಣ ‘ಅಂತರರಾಷ್ಟ್ರೀಯ ಗಡಿರೇಖೆ’ಯನ್ನಾಗಿ ಒಪ್ಪಿಕೊಳ್ಳುವ ಭರವಸೆ ನೀಡಿದ್ದು ಈಗ ರಹಸ್ಯವಾಗಿ ಉಳಿದಿಲ್ಲ.

ಆ ವಾಗ್ದಾನವನ್ನು ಲಿಖಿತ ರೂಪದಲ್ಲಿ ನೀಡಲು ಸಾಧ್ಯವಾಗದ ಭುಟ್ಟೋ ಅವರ ಅಸಹಾಯಕತೆಯನ್ನು ಇಂದಿರಾಗಾಂಧಿ ಅರ್ಥಮಾಡಿಕೊಂಡಿದ್ದರು. ಜುಲ್ಫಿಕರ್ ಅಲಿ ಭುಟ್ಟೋ ಅವರ ಪಾಲಿಗೆ ಶಿಮ್ಲಾ ಒಪ್ಪಂದದ ಲಿಖಿತ ಅಂಶಗಳು ಕೂಡಾ ತನ್ನ ದೇಶದಲ್ಲಿ ಜನಪ್ರಿಯತೆಯನ್ನು ತಂದುಕೊಡುವಂತಹದ್ದಾಗಿರಲಿಲ್ಲ ಎನ್ನುವುದಕ್ಕೆ ಅವರ ಬದುಕಿನ ಅಂತ್ಯವೇ ಸಾಕ್ಷಿ. ಅಂತಿಮವಾಗಿ ಭುಟ್ಟೋ ದೇಶದ್ರೋಹಿ ಎಂಬ ಆರೋಪ ಹೊತ್ತು ಗಲ್ಲಿಗೇರಬೇಕಾಯಿತು.
ಇಂದಿರಾಗಾಂಧಿಯವರು ಕೂಡಾ ಒಂದು ಸಣ್ಣ ರಾಜಿ ಮಾಡಿಕೊಂಡಿದ್ದರು. ಆದರೆ ಅದು ಭಾರತದಲ್ಲಿ ದೊಡ್ಡ ಸುದ್ದಿಯಾಗಲೇ ಇಲ್ಲ. ಬಾಂಗ್ಲಾ ಯುದ್ಧದ ವೇಳೆ ಭಾರತದ ಸೇನೆ ಆಕ್ರಮಿಸಿಕೊಂಡಿದ್ದ ಈಗಿನ ಪಾಕ್ ಆಕ್ರಮಿತ ಕಾಶ್ಮೆರದಲ್ಲಿದ್ದ (ಪಿಒಕೆ) ಸೇನೆಯನ್ನು ಹಿಂದೆಗೆದುಕೊಳ್ಳಲು ಇಂದಿರಾಗಾಂಧಿ ಒಪ್ಪಿಕೊಂಡಿದ್ದರು. ಅದರಿಂದಾಗಿಯೇ ಭಾರತ ತನ್ನ ‘ಬಲಜುಟ್ಟು’ ಕಳೆದುಕೊಂಡಿದ್ದು. ಭಾರತದ ಅಧಿಕೃತ ಭೂಪಟದಲ್ಲಿ ಕಾಣುವ ದೇಶದ ತಲೆಯ ಎಡ-ಬಲಗಳ ಎರಡು ಜುಟ್ಟುಗಳ ಮೇಲೆ ಭಾರತಕ್ಕೆ ಈಗ ಯಾವ ನಿಯಂತ್ರಣವೂ ಇಲ್ಲ.

ಅವೆರಡೂ ಪಾಕಿಸ್ತಾನ ಮತ್ತು ಚೀನಾದ ವಶದಲ್ಲಿವೆ. ಬಲಭಾಗದ ಜುಟ್ಟು ಇರುವ ಪ್ರದೇಶವೇ ಸುಮಾರು 78,000 ಚದರ ಕಿ.ಮೀ.ವಿಸ್ತೀರ್ಣದ ಪಿಒಕೆ. ಪಾಕಿಸ್ತಾನದ ಪ್ರಕಾರ ಅದು ಆಜಾದ್ ಕಾಶ್ಮೆರ. ಆ ಕಾಲದಲ್ಲಿ ಇಂದಿರಾಗಾಂಧಿಯವರ ‘ಉಡುಗೊರೆ’ಯ ಪರಿಣಾಮವನ್ನು ಯಾರೂ ಊಹಿಸಲು ಹೋಗಿರಲಿಲ್ಲ, ಈಗಷ್ಟೇ ಅರಿವಿಗೆ ಬರುತ್ತಿದೆ.
ಈಗ ಭಾರತದೊಳಗೆ ನುಸುಳಿಕೊಂಡು ಬರುವ ಭಯೋತ್ಪಾದಕರಿಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ತರಬೇತಿ ನೀಡುತ್ತಿರುವ ಶಿಬಿರಗಳು ಇರುವುದು ದುದನಿಯಾಲ್‌ನಿಂದ ಬಿಂಬರ್ ವರೆಗಿನ ನಿಯಂತ್ರಣ ರೇಖೆಗೆ ಒತ್ತಿಕೊಂಡಿರುವ ಪಿಒಕೆ ಪ್ರದೇಶದಲ್ಲಿ. ಭುಟ್ಟೋ ಅನಧಿಕೃತವಾಗಿ ಕಾಶ್ಮೀರವನ್ನು ಮತ್ತು ಇಂದಿರಾಗಾಂಧಿಯವರು ಅಧಿಕೃತವಾಗಿ ಪಿಒಕೆಯನ್ನು ಬಿಟ್ಟುಕೊಟ್ಟಿದ್ದರು. ಶಿಮ್ಲಾ ಒಪ್ಪಂದವನ್ನು ಬಿಟ್ಟು ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಈಗಲೂ ಬೇರೆ ದಾರಿಯಾವುದಾದರೂ ಇದೆಯೇ?
ಇಂದಿರಾಗಾಂಧಿಯವರ ನಂತರ ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ಅಟಲಬಿಹಾರಿ ವಾಜಪೇಯಿ. ‘ಮನೆಯೊಳಗಿನ ಶತ್ರು’ಗಳ ಕಾಟದ ನಡುವೆಯೂ ಅವರು ಮಾಡಿದ ಸಾಧನೆ ನೆನಪಿಸಿಕೊಳ್ಳುವಂತಹದ್ದು. ಒಮ್ಮೊಮ್ಮೆ ತನ್ನ ಸರ್ಕಾರದೊಳಗೆ ಏನು ನಡೆಯುತ್ತಿದೆ ಎನ್ನುವುದೂ ಗೊತ್ತಿರದಿದ್ದ ವಾಜಪೇಯಿ ಅವರಿಗೆ ವಿದೇಶಾಂಗ ವ್ಯವಹಾರದ ಬಗ್ಗೆ ಮಾತ್ರ ಉಳಿದವರನ್ನು ಚಕಿತಗೊಳಿಸಬಲ್ಲಂತಹ ಒಳನೋಟ ಇತ್ತು. ಕಾಶ್ಮೀರ ಸಮಸ್ಯೆಯ ಇತ್ಯರ್ಥಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಿದ್ದ ಅವರು ಉದ್ದೇಶಪೂರ್ವಕವಾಗಿ ‘ಸವೆದ ಹಾದಿ ತುಳಿಯದೆ’ ಹೊಸಹಾದಿಯಲ್ಲಿಯೇ ಹೆಜ್ಜೆಹಾಕಿದ್ದರು.

ಲಾಹೋರ್ ಬಸ್ ಯಾತ್ರೆಯ ಶಾಂತಿ ಪ್ರಯತ್ನಕ್ಕೆ ಪಾಕಿಸ್ತಾನ ಕಾರ್ಗಿಲ್ ಯುದ್ದದ ಉಡುಗೊರೆ ನೀಡಿದರೂ ಅವರು ಶಾಂತಿಸ್ಥಾಪನೆಯ ಪ್ರಯತ್ನ ನಿಲ್ಲಿಸಿರಲಿಲ್ಲ. 2000ನೇ ವರ್ಷದಲ್ಲಿ ರಮ್ಜಾನ್ ತಿಂಗಳ ಕದನವಿರಾಮ ಘೋಷಿಸಿದ ನಂತರ ಜಮ್ಮು ಮತ್ತು ಕಾಶ್ಮೆರದಲ್ಲಿ ಮಾತ್ರವಲ್ಲ  ಕೆಂಪುಕೋಟೆ, ಅಕ್ಷರಧಾಮಗಳ ಮೇಲೂ ಉಗ್ರರ ದಾಳಿ ನಡೆಯಿತು. ಅಂತಿಮವಾಗಿ ಸಂಸತ್‌ಭವನದ ಮೇಲೆಯೇ ಭಯೋತ್ಪಾದಕರು ಎರಗಿಬಿದ್ದರು. ಹೀಗಿದ್ದರೂ ವಾಜಪೇಯಿ ಸಂಬಂಧ ಸುಧಾರಣೆಯ ಪ್ರಯತ್ನವನ್ನು ನಿಲ್ಲಿಸಿರಲಿಲ್ಲ.
ಪ್ರಧಾನಿ ಮನಮೋಹನ್‌ಸಿಂಗ್ ಅವರ ಕ್ರಿಕೆಟ್ ಡಿಪ್ಲೊಮೆಸಿಯಲ್ಲಿ ಹೊಸದೇನಿಲ್ಲ. ಇದು  ವಾಜಪೇಯಿ ಅವರು ಮಾಡಿಬಿಟ್ಟದ್ದು. ‘ದೇಶದ ಮನಸ್ಸುಗಳು ಒಂದಾಗಬೇಕಾದರೆ ಮೊದಲು ಜನರ ಮನಸ್ಸುಗಳು ಒಂದಾಗಬೇಕು. ಇದು ಕೇವಲ ರಾಜತಾಂತ್ರಿಕ ಮಟ್ಟದಲ್ಲಿ ನಡೆಯುವ ಮಾತುಕತೆಗಳಿಂದ ಸಾಧ್ಯ ಇಲ್ಲ. ದೇಶ-ಭಾಷೆಗಳ ಗಡಿಯನ್ನು ಮೀರಿದ ಕ್ರೀಡೆ, ಸಂಗೀತ, ಕಲೆ, ನಾಟಕ, ಚಲನಚಿತ್ರಗಳ ಮೂಲಕ ಮನಸ್ಸು ಒಂದಾಗಲು ಸಾಧ್ಯ’ ಎಂದು ಅವರು ಹೇಳುತ್ತಿದ್ದರು.
ಈ ಹಿನ್ನೆಲೆಯಲ್ಲಿಯೇ ಎರಡು ದೇಶಗಳ ಮನಸ್ಸನ್ನು ಬೆಸೆಯುವ ‘ಜನಸಂಪರ್ಕ ಮತ್ತು ವಿಶ್ವಾಸನಿರ್ಮಾಣ’ದ ಡಿಪ್ಲೊಮೆಸಿಯ ಹಾದಿ ತೆರೆದುಕೊಂಡದ್ದು. ಸ್ಥಗಿತಗೊಂಡಿದ್ದ ವಿಮಾನ-ರೈಲು-ಹಡಗು ಸಂಚಾರ, ಶ್ರಿನಗರ-ಮುಜಾಫರ್‌ನಗರ ನಡುವೆ ಬಸ್‌ಸಂಚಾರ, ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ, ವೀಸಾ ಕ್ಯಾಂಪ್ ಸ್ಥಾಪನೆಯ ಜತೆ ನಿಂತುಹೋಗಿದ್ದ ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟಕ್ಕೆ ಚಾಲನೆ ನೀಡಿದ್ದು ಕೂಡಾ ವಾಜಪೇಯಿ.
 ಆ ಕಾಲದಲ್ಲಿ ಇವು ಯಾವುದೂ ಜನಪ್ರಿಯ ಕಾರ್ಯಕ್ರಮಗಳಾಗಿರಲಿಲ್ಲ. ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಆ ದೇಶವನ್ನು ಮುಗಿಸಿಬಿಡಬೇಕೆಂದು ಗರ್ಜಿಸುತ್ತಿರುವವರು ವಾಜಪೇಯಿ ಪರಿವಾರದಲ್ಲಿ ಮಾತ್ರವಲ್ಲ, ಹೊರಗೆಯೂ ಇದ್ದರು. ಪರ್ವೇಜ್ ಮುಷರಫ್ ಅವರ ಮೇಲೆಯೂ ಇದೇ ರೀತಿಯ ಒತ್ತಡಗಳಿದ್ದವು. ಒಂದೆಡೆ ಉಗ್ರಗಾಮಿ ಸಂಘಟನೆಗಳು ಇನ್ನೊಂದೆಡೆ ಧಾರ್ಮಿಕ ನಾಯಕರು ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದವು.

ಆದರೆ ಶಾಂತಿ ಸ್ಥಾಪನೆಗೆ ಮುಷರಫ್ ಅವರ ಗುಪ್ತ ಸಹಕಾರ ಇದ್ದ ಕಾರಣದಿಂದಾಗಿಯೇ ಇಬ್ಬರ ಪ್ರಯತ್ನಗಳು ಸ್ವಲ್ಪ ಮಟ್ಟಿಗಾದರೂ ಯಶಸ್ಸು ಕಾಣಲು ಸಾಧ್ಯವಾಗಿದ್ದು. ಆದರೆ ಈ ಇಬ್ಬರು ನಾಯಕರು ಭುಟ್ಟೋ ಮತ್ತು ಇಂದಿರಾಗಾಂಧಿಯವರಷ್ಟು ಅದೃಷ್ಟಶಾಲಿಗಳಾಗಿರಲಿಲ್ಲ. ಈ ಕಾರಣದಿಂದಾಗಿಯೇ ಆಗ್ರಾ ಶೃಂಗಸಭೆ ಭಂಗಗೊಂಡದ್ದು.
ಭಾರತದ ಕಡೆಯಿಂದ ಆಗ್ರಾ ಶೃಂಗಸಭೆಯನ್ನು ವಿಫಲಗೊಳಿಸಿದ ‘ಖಳನಾಯಕಿ’ ಈಗ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ. ಮಾತುಕತೆಯಲ್ಲಿ ಕಾಶ್ಮೀರವೇ ಮುಖ್ಯ ವಿಷಯ ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು, ಭಯೋತ್ಪಾದನೆಯ ಬಗ್ಗೆ ಮೊದಲು ತೀರ್ಮಾನಿಸುವ ಎನ್ನುತ್ತಿತ್ತು ಭಾರತ. ಒಂದು ಹಂತದಲ್ಲಿ ಕಾಶ್ಮೀರ ವಿಷಯವನ್ನು ಕೈಬಿಡುವ ಇಂಗಿತವನ್ನು ಪರ್ವೇಜ್ ಮುಷರಫ್ ನೀಡಿದ್ದರಂತೆ.ಇದನ್ನು ಹೇಗೋ ತಿಳಿದ ಸಚಿವೆ ಸುಷ್ಮಾಸ್ವರಾಜ್ ಇದನ್ನು ಭಾರತದ ಗೆಲುವು ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ತಕ್ಷಣ ಐಎಸ್‌ಐ ಮತ್ತು ಜೆಹಾದಿಗಳ ಕಡೆಯಿಂದ ವಿರೋಧ ಬರಲಾರಂಭಿಸಿತು.

ಈ ಸಂದೇಶವನ್ನು ಐಎಎಸ್ ಜತೆ ಸಂಪರ್ಕ ಹೊಂದಿದ್ದ ವಿದೇಶಾಂಗ ವ್ಯವಹಾರ ಸಚಿವ ಅಬ್ದುಲ್ ಸತ್ತಾರ್ ಅವರು ಮುಷರಫ್ ಅವರಿಗೆ ತಲುಪಿಸಿದ ನಂತರವೇ ಮುಷರಫ್ ಮುಷ್ಠಿ ಬಿಗಿಗೊಳಿಸಿದ್ದು. ಇನ್ನೇನು ಘೋಷಣೆ ಹೊರಬೀಳಲಿದೆ ಎಂದು ಆಗ್ರಾದ ಮೊಗಲ್ ಶೆರಟನ್ ಮಾಧ್ಯಮಕೇಂದ್ರದಲ್ಲಿ ಶೃಂಗಸಭೆಯ ವರದಿಗಾಗಿ ಹೋಗಿದ್ದ ನಾವೆಲ್ಲ ಕಾಯುತ್ತಿದ್ದರೆ ಪಕ್ಕದ ಜೇಪಿ ಪ್ಯಾಲೇಸ್‌ನಲ್ಲಿ ತಂಗಿದ್ದ ಪರ್ವೇಜ್‌ಮುಷರಫ್ ಪಾಕಿಸ್ತಾನದ ವಿಮಾನ ಹತ್ತಿದ್ದರು.

ಆಗ್ರಾ ಶೃಂಗಸಭೆಯ ವೈಫಲ್ಯದ ಹೊರತಾಗಿಯೂ ಉಭಯದೇಶಗಳ ಸಂಬಂಧ ಸುಧಾರಣೆಯಲ್ಲಿ ವಾಜಪೇಯಿ ವಹಿಸಿದ್ದ ಪಾತ್ರದಿಂದ ಕಲಿಯುವುದಿದೆ. ಇದಕ್ಕಾಗಿ ಮನಮೋಹನ್‌ಸಿಂಗ್ ಇತಿಹಾಸದ ಪುಟಗಳನ್ನು ತಿರುವಿಹಾಕಬೇಕು, ಪಾಕ್ ಪ್ರಧಾನಿ ಜತೆ ಕೂತು ಕ್ರಿಕೆಟ್ ನೋಡಿದರಷ್ಟೇ ಸಾಲದು

Monday, March 28, 2011

ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ

ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಭ್ರಷ್ಟ ಆಡಳಿತ ಪಕ್ಷಕ್ಕಿಂತ  ಹೆಚ್ಚು ಹಾನಿಕಾರಿ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಸ್ವಘೋಷಿತ ನಾಲ್ಕನೇ ಸ್ಥಂಭವಾದ ಪತ್ರಿಕಾರಂಗದ ಜತೆ ವಿರೋಧಪಕ್ಷಕ್ಕೆ ಕೂಡಾ  ಮಹತ್ವದ ಪಾತ್ರ ಇದೆ. ಈ ದೃಷ್ಟಿಯಿಂದ ಇದನ್ನು ಸಂವಿಧಾನದ ‘ಐದನೇ ಸ್ಥಂಭ’ ಎಂದು ಕರೆಯಬಹುದು.
ಆಡಳಿತ ಪಕ್ಷವೊಂದು ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾಗಿದ್ದಾಗ ಏನೂ ಕೆಲಸವಿಲ್ಲದ ಈ ‘ಐದನೆಯ ಸ್ಥಂಭ’ ದುರ್ಬಲಗೊಂಡರೆ ಅದು ಸಹಜ. ಆದರೆ ನಾವು ಕಾಣುತ್ತಿರುವುದು ತದ್ವಿರುದ್ಧವಾದ ಬೆಳವಣಿಗೆ. ಇಲ್ಲಿ ಆಡಳಿತ ಪಕ್ಷ ಹೆಚ್ಚುಹೆಚ್ಚು ಭ್ರಷ್ಟ, ಅಪ್ರಮಾಣಿಕ ಮತ್ತು ಜನವಿರೋಧಿಯಾಗುತ್ತಿದ್ದಾಗ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕಾದ ವಿರೋಧಪಕ್ಷಗಳು ಹೆಚ್ಚುಹೆಚ್ಚು ದುರ್ಬಲಗೊಂಡಂತೆ ಕಾಣುತ್ತಿವೆ.ಇದೊಂದು ಪಕ್ಷಾತೀತ ಬೆಳವಣಿಗೆ. ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್  ಎರಡೂ ಪಕ್ಷಗಳ ವಿಷಯದಲ್ಲಿಯೂ ಇದು ಸತ್ಯ.
ವಿರೋಧ ಪಕ್ಷಗಳು ಹೆಚ್ಚು ದುರ್ಬಲಗೊಳ್ಳತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ. ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿರೋಧಪಕ್ಷಗಳ ನಾಯಕರು ದೆಹಲಿಯ ಜನಪಥ ರಸ್ತೆಯ ಹತ್ತನೆ ನಂಬರಿನ ಬಂಗಲೆ ಕಡೆ ಓಡತೊಡಗಿದ್ದರು.ಫಲಿತಾಂಶ ಪ್ರಕಟಣೆಯ ಮೊದಲೇ ಕಾಂಗ್ರೆಸ್ ಗೆಲುವಿನ ವಾಸನೆ ಹಿಡಿದು ಹೋದವರು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ. ಹೇಗೋ ಸುದ್ದಿ ತಿಳಿದು ಕನ್ನಡದ ಟಿವಿ ಚಾನೆಲ್‌ನ ಒಬ್ಬ ವರದಿಗಾರ ಅಲ್ಲಿಗೆ ಓಡಿ ಕ್ಯಾಮೆರಾ ಹಿಡಿದರೆ ಕುಮಾರಸ್ವಾಮಿಯವರು ಕರ್ಚಿಫ್‌ನಿಂದ ಮುಖಮುಚ್ಚಿಕೊಂಡು ಅಲ್ಲಿಂದ ಪಾರಾಗುವ ಪ್ರಯತ್ನ ನಡೆಸಿ ವಿಫಲವಾಗಿದ್ದರು.
ನೋಡುನೋಡುತ್ತಿದ್ದಂತೆಯೇ ತೃತೀಯರಂಗ-ಚತುರ್ಥರಂಗದ ಸೌಧಗಳೆಲ್ಲ ಕುಸಿಯತೊಡಗಿದ್ದವು. ಲಾಲುಪ್ರಸಾದ್,ಮುಲಾಯಂಸಿಂಗ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದ ತೃತೀಯರಂಗದ ನಾಯಕರು ಪೈಪೋಟಿಯಲ್ಲಿ ಕಾಂಗ್ರೆಸ್ ಮೈಮೇಲೆ ಬಿದ್ದು ಬೆಂಬಲ ಘೋಷಿಸತೊಡಗಿದ್ದರು. ಚುನಾವಣೆಯ ಮೊದಲು ಪ್ರಧಾನಿ ಪಟ್ಟ ಏರಲು ಕನಸಿನ ಆನೆ ಏರಿ ಹೊರಟಿದ್ದ ಮಾಯಾವತಿಯವರು ಕೂಡಾ ಬೇಷರತ್ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಿದ್ದರು.
ಆ ಕಾಲದ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ನಾಯಕರೊಬ್ಬರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡುತಾ  ‘ನಮ್ಮ ಪಕ್ಷವೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುತ್ತದೆಯೇನೋ ಎಂದು ಭಯವಾಗುತ್ತಿದೆ’ಎಂದು ಕುಹಕವಾಡಿದ್ದರು. ಆದರೆ ಅದು ಬರೀ ಕುಹಕವಾಗಿರಲಿಲ್ಲ, ಆಗಲೆ ಬಿಜೆಪಿ ಬಗ್ಗೆ ಒಲವುಹೊಂದಿದ್ದ ಬುದ್ದಿಜೀವಿಗಳ ಗುಂಪೊಂದು ಕಾಂಗ್ರೆಸ್ ಮತ್ತು ಬಿಜೆಪಿ ಕೂಡಿ ಯಾಕೆ ಸರ್ಕಾರ ರಚಿಸಬಾರದು ಎನ್ನುವ ಚರ್ಚೆಗೆ ಚಾಲನೆ ನೀಡಿತ್ತು. ಇಂದು ಕೇಂದ್ರ ಮತ್ತು ರಾಜ್ಯದ ವಿರೋಧಪಕ್ಷಗಳ ಸ್ಥಿತಿ ಅಂದಿಗಿಂತ ಭಿನ್ನವೇನಿಲ್ಲ.ಭ್ರಷ್ಟಾಚಾರದ ಆರೋಪಗಳು ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಕುಸಿಯತೊಡಗಿದೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಯುದ್ಧಭೂಮಿಗಿಳಿಯುವ ಯೋಧರ ವೀರಾವೇಶ ಕಾಣಬೇಕಿತ್ತು.
ಆದರೆ ದೆಹಲಿ ಕಡೆಯಿಂದ ನಾಯಕರು ಬಂದರೆ ಮೆರೆದಾಡುವ ಕಟೌಟ್‌ಗಳು ಮತ್ತು ಒಂದಷ್ಟು ಕಾರ್ಯಕರ್ತರ ಗೌಜಿಗದ್ದಲ   ಬಿಟ್ಟರೆ ಉಳಿದ ಸಮಯದಲ್ಲಿ ಕೆಪಿಸಿಸಿ ಕಚೇರಿ ಬಿಕೋ ಅನಿಸುತ್ತಿದೆ. ಕಾಂಗ್ರೆಸ್ ನಾಯಕರು ವಾರಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಯಾರೋ ಮಾಡಿರುವ ಆರೋಪಗಳನ್ನು ಪುನರುಚ್ಚರಿಸಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಾರೆ. ಪತ್ರಕರ್ತರು ಕಾಡಿದರೆ ನಡುನಡುವೆ ಒಂದಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಯಾರಾದರೂ ಸ್ಥಳೀಯ ಕಾರ್ಯಕರ್ತರು ದುಡ್ಡು-ಶ್ರಮ ಹಾಕಿ ಸಮಾವೇಶಗಳನ್ನು ಮಾಡಿದರೆ ಅಲ್ಲಿಗೆ ಹೋಗಿ ಒಂದಷ್ಟು ಭಾಷಣ ಮಾಡಿ ಬರುತ್ತಾರೆ.
 ಉಳಿದಂತೆ ದೆಹಲಿ ಕಡೆ ಮುಖಮಾಡಿ ಗಡದ್ದಾಗಿ ನಿದ್ದೆ ಮಾಡುತ್ತಾರೆ. ಬಳ್ಳಾರಿ ಕಡೆ ಪಾದಯಾತ್ರೆ ಹೊರಟಾಗ ವ್ಯಕ್ತವಾದ ಸಾರ್ವಜನಿಕ ಪ್ರತಿಕ್ರಿಯೆ ಕಂಡಾಗ ಈ ಸರ್ಕಾರ ಪತನದ ದಿನಗಳ ಎಣಿಕೆ ಪ್ರಾರಂಭವಾಗಿದೆಯೇನೋ ಎಂಬ ಅಭಿಪ್ರಾಯ ಮೂಡಿತ್ತು. ಮತ್ತೆ ಎಲ್ಲ ಯಥಾಸ್ಥಿತಿ. ಜೆಡಿ (ಎಸ್)ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಗಾಗ ಹಗರಣಗಳನ್ನು ಬಯಲುಗೊಳಿಸುತ್ತಿರುತ್ತಾರೆ.ಅವರ ‘ಒನ್‌ಮ್ಯಾನ್ ಶೋ’ನಲ್ಲಿ ಆಗಾಗ ಇಂಟರ್‌ವಲ್‌ಗಳಿರುತ್ತವೆ. ಈ ಇಂಟರ್‌ವಲ್‌ಗಳಲ್ಲಿ ಅವರೇನು ಮಾಡುತ್ತಾರೆ ಎನ್ನುವುದೇ ಕುತೂಹಲ.
ಕೇಂದ್ರದಲ್ಲಿ ವಿರೋಧಪಕ್ಷವಾಗಿರುವ ಬಿಜೆಪಿಯದ್ದು ಕಣ್ಣೆತ್ತಿ ಕಾಂಗ್ರೆಸ್ ಕಡೆ ನೋಡಲಾರದ ಸ್ಥಿತಿ. ಕಾಮನ್‌ವೆಲ್ತ್, 2ಜಿ ತರಂಗಾಂತರ, ಆದರ್ಶ ಹೌಸಿಂಗ್ ಕಾರ್ಪೋರೇಷನ್ ಮೊದಲಾದ ಭ್ರಷ್ಟಾಚಾರದ ಹಗರಣಗಳಲ್ಲಿ ಯುಪಿಎ ಸರ್ಕಾರ ಮುಳುಗಿಹೋಗಿದೆ, ಸ್ವಚ್ಛ, ಸಮರ್ಥ ಎಂಬ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಬಿಂಬ ಒಡೆದುಹೋಗಿದೆ. ಈ ಪ್ರತಿಕೂಲ ಬೆಳವಣಿಗೆಗಳನ್ನು ಬಳಸಿಕೊಂಡು ಆಡಳಿತ ಪಕ್ಷವನ್ನು ಮಂಡಿ ಊರುವಂತೆ ಮಾಡಬೇಕಾದ ಬಿಜೆಪಿಯ ಬಾಯಿ ಕಟ್ಟಿಹೋಗಿದೆ. ಯಾಕೆಂದರೆ ಭ್ರಷ್ಟಾಚಾರದ ವಿಷಯ ಎತ್ತಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ನಿಮ್ಮ ಯಡಿಯೂರಪ್ಪನವರದ್ದೇನು ಎಂದು ಕೇಳುತ್ತಾರೆ. ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇಂತಹ ಮುಜುಗರಗಳೇ ಬೇಡ ಎಂದುಕೊಂಡು ಆಡಳಿತ ಮತ್ತು ವಿರೋಧಪಕ್ಷಗಳು ಜತೆಗೂಡಿ ವಿಕಿಲೀಕ್ಸ್‌ನಂತಹ ಅಪ್ರಸ್ತುತ ವಿಷಯವನ್ನೆತ್ತಿಕೊಂಡು ಕಾಲಹರಣ ಮಾಡುತ್ತಿವೆ.ಹಿಂದಿನ ವಿರೋಧಪಕ್ಷಗಳು  ಮತ್ತು ಅದರ ನಾಯಕರು ಹೀಗಿರಲಿಲ್ಲ.
ಮುಂದೊಂದು ದಿನ ತಾವೂ ಅಧಿಕಾರಕ್ಕೆ ಬರಬಹುದೆಂದು ಸ್ವಾತಂತ್ರ್ಯಾನಂತರದ  ಮೊದಲು 25 ವರ್ಷಗಳ ಕಾಲ ಯಾವ ವಿರೋಧ ಪಕ್ಷವೂ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ.ಮೊದಲ 30ವರ್ಷಗಳ ಕಾಲ ತೆಪ್ಪಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂತು ಕಾಂಗ್ರೆಸ್‌ನಂತಹ ದೈತ್ಯಪಕ್ಷವನ್ನು ಅವುಗಳು ಎದುರಿಸಿದ್ದವು.
ಆಗಿನ ಕಾಲದ ಬುದ್ದಿಜೀವಿ ಪ್ರಧಾನಿ ಜವಾಹರಲಾಲ ನೆಹರೂ ಅವರಲ್ಲಿಯೂ ಕೀಳರಿಮೆ ಹುಟ್ಟಿಸಬಲ್ಲಂತಹ ಚಿಂತನಶೀಲ ರಾಜಕೀಯ ನಾಯಕರಾದ ಆಚಾರ್ಯ ಕೃಪಲಾನಿ, ರಾಮಮನೋಹರ ಲೋಹಿಯಾ, ಅಶೋಕ್ ಮೆಹ್ತಾ, ಎ.ಕೆ.ಗೋಪಾಲನ್,ಮಿನೂ ಮಸಾನಿ ಮೊದಲಾದ ವಿರೋಧಪಕ್ಷಗಳ ನಾಯಕರಿದ್ದರು. ಭ್ರಷ್ಟತೆ ಬಿಡಿ ಕನಿಷ್ಠ ಆತ್ಮವಂಚನೆಯನ್ನೂ ಈ ನಾಯಕರು ಮಾಡಿಕೊಂಡಿರಲಿಲ್ಲ.
 ವಿರೋಧಿ ಸ್ಥಾನದಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾದಾಗ ಹಿಂದಿನ ಕಾಂಗ್ರೆಸ್ ನಾಯಕರು ಕೂಡಾ ವಿಶ್ವಾಸ ಕಳೆದುಕೊಂಡಿರಲಿಲ್ಲ. ವಿರೋಧಪಕ್ಷಗಳಿಗೆ 2009ರ ಚುನಾವಣಾ ಸೋಲು ಎಷ್ಟೇ ಹೀನಾಯವಾಗಿದ್ದರೂ ಅದನ್ನು 1977ರ ಚುನಾವಣೆಯಲ್ಲಿನ ಇಂದಿರಾಗಾಂಧಿ ಸೋಲಿಗೆ ಹೋಲಿಸಲಾಗದು. ಅಧಿಕಾರದಿಂದ ಅಲ್ಲ ಸರ್ವಾಧಿಕಾರದಿಂದ ಮೆರೆದಿದ್ದ ಇಂದಿರಾಗಾಂಧಿಯವರನ್ನು ದೇಶದ ಮತದಾರ ಕಿತ್ತೊಗೆದಿದ್ದ. ಅವರ ಪಕ್ಷದ ಬಲ 352ರಿಂದ 154ಕ್ಕೆ ಇಳಿದಿತ್ತು. ಮಗ ಸಂಜಯಗಾಂಧಿ ಕೂಡಾ ಸೋತುಹೋಗಿದ್ದ.
ಆಯೋಗಗಳ ಮೇಲೆ ಆಯೋಗ, ತನಿಖೆ, ಯಾವಾಗ ಜೈಲಿಗೆ ತಳ್ಳಲಿದ್ದಾರೆ ಎಂಬ ಭೀತಿ, ಸೇಡುತೀರಿಸಿಕೊಳ್ಳುವ ರೀತಿಯಲ್ಲಿ ಮಾಧ್ಯಮಗಳ ದಾಳಿ, ಕೈಬಿಟ್ಟುಹೋದ ಮಿತ್ರರು, ಹೆಚ್ಚಿದ ಶತ್ರುಗಳು.. ಆದರೆ ಇಂದಿರಾಗಾಂಧಿ ಅಂಜಿದ್ದರೇ, ಅಳುಕಿದ್ದರೇ? ಮೂರೇ ಮೂರುವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದರು. ಅದೂ 1971ರ ಚುನಾವಣೆಗಿಂತಲೂ ಒಂದು ಸ್ಥಾನವನ್ನು ಹೆಚ್ಚುಗಳಿಸಿ. ನುಚ್ಚುನೂರಾಗಿ ಹೋದ ಆಗಿನ ಆಡಳಿತಪಕ್ಷಗಳಲ್ಲಿ ಯಾವುದರ ಸಂಖ್ಯೆಯೂ 50 ದಾಟಿರಲಿಲ್ಲ.
ಕಾಂಗ್ರೆಸ್ ಕತೆ ಬಿಡಿ ಬಿಜೆಪಿಯ ಹಳೆಯ ಕತೆಗೆ ಬರೋಣ. 1984ರ ಚುನಾವಣೆಯಲ್ಲಿ ದೂಳೀಪಟವಾಗಿ ಹೋಗಿದ್ದ ವಿರೋಧ ಪಕ್ಷಗಳಲ್ಲಿ ಬಿಜೆಪಿಯೂ ಇತ್ತು. ಲೋಕಸಭೆಯಲ್ಲಿ ಎರಡೇ ಎರಡು ಸ್ಥಾನ. ವಾಜಪೇಯಿಯವರೇ ಸೋತಿದ್ದರು. ಆದರೆ ಆ ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಸೋಲು ಒಪ್ಪಿಕೊಂಡಿರಲಿಲ್ಲ. ಅವರು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದರೆ ಹನ್ನೆರಡು ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುವ ಸ್ಥಿತಿಗೆ ಬಂದು ತಲುಪಿತ್ತು. ಆ ರಾಜಕೀಯ ಹೋರಾಟ ನಡೆಸಿದ್ದ ಲಾಲ್‌ಕೃಷ್ಣ ಅಡ್ವಾಣಿ ಈಗಲೂ ಇದ್ದಾರೆ.
ಸೋನಿಯಾಗಾಂಧಿ ಎಂಬ ವಿದೇಶಿ ಮಹಿಳೆಯದ್ದು ಇನ್ನೂ ಇತ್ತೀಚಿನ ಕತೆ. ಮೊದಲು ಮೈದುನ, ನಂತರ ಅತ್ತೆ, ಕೊನೆಗೆ ಗಂಡನನ್ನು ಕಳೆದುಕೊಂಡವರು ಅವರು. ಕೆಲವರ್ಷಗಳಲ್ಲಿಯೇ ನೆಹರೂ ಕುಟುಂಬಕ್ಕೆ ಆಧಾರವಾಗಿದ್ದ ಕಾಂಗ್ರೆಸ್ ಪಕ್ಷ ಕೂಡಾ ಅಧಿಕಾರ ಕಳೆದುಕೊಂಡಿತ್ತು. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸೋನಿಯಾಗಾಂಧಿಯವರ ನೇತೃತ್ವದ ಕಾಂಗ್ರೆಸ್ 1999ರಲ್ಲಿ ಗಳಿಸಿದ್ದು 114 ಸ್ಥಾನಗಳನ್ನು ಮಾತ್ರ. ಇದು ಸೀತಾರಾಂ ಕೇಸರಿ ಎಂಬ ವಯೋವೃದ್ಧನ ನೇತೃತ್ವದಲ್ಲಿ ಎದುರಿಸಿದ 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದಕ್ಕಿಂತ 27 ಸ್ಥಾನ ಕಡಿಮೆ. ಅನಂತರದ ಐದು  ವರ್ಷಗಳ ಕಾಲ ಸೋನಿಯಾಗಾಂಧಿಯವರು ರಾಜಕೀಯ ಮತ್ತು ವೈಯಕ್ತಿಕ ದಾಳಿಯನ್ನು ಪಕ್ಷದ ಒಳಗೆ ಮತ್ತು ಹೊರಗೆ ಎದುರಿಸಬೇಕಾಯಿತು. ಇದಕ್ಕೆಲ್ಲ  ಅರ್ಧ ಉತ್ತರವನ್ನು 2004ರ ಚುನಾವಣಾ ಫಲಿತಾಂಶದಲ್ಲಿ ಇನ್ನರ್ಧ ಉತ್ತರವನ್ನು ಪ್ರಧಾನಿ ಪಟ್ಟ ನಿರಾಕರಣೆಯ ಮೂಲಕ ಕೊಟ್ಟರು.
ಹಳೆಯ ಕಾಲದ ವಿರೋಧಪಕ್ಷದ ನಾಯಕರಲ್ಲಿ ಈಗ ಉಳಿದಿರುವವರು ಎಲ್.ಕೆ.ಅಡ್ವಾಣಿ ಮಾತ್ರ. ಹೆಚ್ಚುಕಡಿಮೆ ರಾಜಕೀಯ ಸನ್ಯಾಸ ಸ್ವೀಕರಿಸಿದಂತಿರುವ ಅಡ್ವಾಣಿಯವರು ಮತ್ತೆ ಸಕ್ರಿಯವಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಷ್ಟ.ಹೊಸಬರಲ್ಲಿ ಯಾರೂ ಅಡ್ವಾಣಿ, ಇಂದಿರಾಗಾಂಧಿ ಬಿಡಿ, ಕನಿಷ್ಠ ಸೋನಿಯಾಗಾಂಧಿಯವರ ವ್ಯಕ್ತಿತ್ವಕ್ಕೆ ಸಮನಾದ ರಾಜಕೀಯ ನಾಯಕರು ಕಾಣುತ್ತಿಲ್ಲ. ದೀರ್ಘ ಕಾಲ ವಿರೋಧಪಕ್ಷದ ನಾಯಕರಾಗಿ ಕೆಲಸಮಾಡಿರುವ ಎಚ್.ಡಿ.ದೇವೇಗೌಡರಂತಹ ನಾಯಕರು ರಾಜ್ಯದಲ್ಲಿಯೂ ಕಾಣಿಸುತ್ತಿಲ್ಲ. ಯಾಕೆ ಹೀಗಾಗಿ ಹೋಗಿದೆ?
ಇದಕ್ಕೆ ಮುಖ್ಯ ಕಾರಣ-ಅಧಿಕಾರ. ಈಗ ವಿರೋಧಪಕ್ಷದಲ್ಲಿದ್ದವರೆಲ್ಲರೂ ಒಂದಷ್ಟು ವರ್ಷ ಅಧಿಕಾರ ಅನುಭವಿಸಿದವರು, ಮೊದಲ 30 ವರ್ಷಗಳ ಕಾಲ ಅಧಿಕಾರದ ಸಮೀಪ ಹೋಗಲಿಕ್ಕೂ ಆಗದ ವಿರೋಧ ಪಕ್ಷಗಳ ನಾಯಕರಂತಹವರಲ್ಲ. ಅಧಿಕಾರದ ಮಾಯೆಯೇ ಹಾಗೆ, ಒಮ್ಮೆ ಅನುಭವಿಸಿದ ಮೇಲೆ ಹೋರಾಟದ ರಾಜಕೀಯದ ಮೇಲಿನ ಆಸಕ್ತಿ ಕುಂದುತ್ತಾ ಹೋಗುತ್ತದೆ. ಅಧಿಕಾರದ ಸವಿಯನ್ನು ಚಪ್ಪರಿಸಿದ್ದ ನಾಲಿಗೆಯಲ್ಲಿ ನೀರೂರುತ್ತಲೇ ಇರುತ್ತದೆ. ಇನ್ನೊಂದು ಕಾರಣ ನೈತಿಕವಾಗಿ ಇವರನ್ನು ದಿವಾಳಿ ಮಾಡಿರುವ ಭ್ರಷ್ಟಾಚಾರದ ಕಳಂಕ. ಇದು ಅಧಿಕಾರದ ಜತೆಗೆ ಬಂದ ಉಚಿತ ಕೊಡುಗೆ.
ಕೇಂದ್ರದ ಬಿಜೆಪಿ ನಾಯಕರು ಎ.ರಾಜಾನ ಹೆಸರೆತ್ತಿದ ಕೂಡಲೇ ಕಾಂಗ್ರೆಸ್ ನಾಯಕರು ಪ್ರಮೋದ್ ಮಹಾಜನ್, ಅರುಣ್ ಶೌರಿ ಹೆಸರಿಡಿದು ಕೂಗುತ್ತಾರೆ, ಅಶೋಕ್ ಚವಾಣ್ ಹೆಸರೆತ್ತಿದರೆ ಅವರಿಗೆದುರಾಗಿ ಬಿ.ಎಸ್.ಯಡಿಯೂರಪ್ಪನವರನ್ನು ತಂದು ನಿಲ್ಲಿಸುತ್ತಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಅಕ್ರಮಗಣಿಗಾರಿಕೆ, ಡಿನೋಟಿಫಿಕೇಶನ್ ಹಗರಣಗಳನ್ನೆತ್ತಿದರೆ ಬಿಜೆಪಿ ನಾಯಕರು ಧರ್ಮಸಿಂಗ್,ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಮೊದಲಾದವರ ಕಾಲದ ಕತೆಗಳನ್ನು ಕೆದಕುತ್ತಾರೆ. ‘ಹಮಾಮ್ ಮೇ ಸಬ್ ನಂಗಾ ಹೈ’ (ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ). ಎಲ್ಲರೂ ತಮ್ಮ ತಮ್ಮ ಕಪಾಟುಗಳಲ್ಲಿ ಅಸ್ಥಿಪಂಜರಗಳನ್ನು ಇಟ್ಟುಕೊಂಡವರು. ಅಧಿಕಾರದಲ್ಲಿದ್ದ ಪಕ್ಷವೇನಾದರೂ ಕಪಾಟಿನ ಬಾಗಿಲು ತೆಗೆದುಬಿಟ್ಟರೆ ಗತಿ ಏನು ಎಂಬ ಭಯ ಚುನಾವಣೆಯಲ್ಲಿ ಸೋತ ಮರುಗಳಿಗೆಯಿಂದಲೇ ಇವರನ್ನು ಕಾಡತೊಡಗುತ್ತದೆ. ಆ ಕ್ಷಣದಿಂದಲೇ ಹೊಂದಾಣಿಕೆಯ ರಾಜಕೀಯ ಪ್ರಾರಂಭವಾಗುತ್ತದೆ. ಇದರಿಂದಾಗಿ ಉಳಿದ ‘ನಾಲ್ಕು ಸ್ಥಂಭ’ಗಳ ಜತೆ ‘ಐದನೇ ಸ್ಥಂಭ’ ಕೂಡಾ ಕುಸಿದುಬೀಳತೊಡಗಿದೆ. ಪ್ರಜಾಪ್ರಭುತ್ವಕ್ಕೆ ಆಧಾರ ಎಲ್ಲಿದೆ?

Monday, March 21, 2011

ವಿಕಿಲೀಕ್ಸ್‌ನಲ್ಲಿಯೂ ಉತ್ತರ ಇಲ್ಲದ ಪ್ರಶ್ನೆಗಳು

ಎಡಪಕ್ಷಗಳಿಗೆ ಸೆಡ್ಡು ಹೊಡೆದು ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಿದ್ದ ಮನಮೋಹನ್ ಸಿಂಗ್ ವಿಶ್ವಾಸಮತಯಾಚನೆಗಾಗಿ ಎದೆಯುಬ್ಬಿಸಿಕೊಂಡು ಸಂಸತ್‌ಭವನ ಪ್ರವೇಶಿಸಿದ್ದು... ತನ್ನನ್ನು ಪ್ರಶ್ನಿಸಲು ಬಂದ ಪತ್ರಕರ್ತರಿಗೆ ಏನನ್ನೂ ಹೇಳದೆ ನಗುನಗುತ್ತಾ ಕೈಬೆರಳುಗಳನ್ನೆತ್ತಿ ಗೆಲುವಿನ ಸಂಜ್ಞೆ ಮಾಡಿದ್ದು... ವಿಶ್ವಾಸಮತಯಾಚನೆಯಲ್ಲಿ ಗೆದ್ದ ಮರುಕ್ಷಣದಲ್ಲಿಯೇ ಕಾಂಗ್ರೆಸ್ ಸಂಸದರು ‘ಸಿಂಗ್ ಈಸ್ ಕಿಂಗ್’ ಎಂದು ಹರ್ಷೋದ್ಗಾರ ಮಾಡಿದ್ದು... ಎಲ್ಲವೂ ಮೊನ್ನೆಮೊನ್ನೆ ನಡೆದಂತಿದೆ.
ಇಂತಹ ಒಂದು ಕ್ಷಣಕ್ಕಾಗಿಯೇ ಮನಮೋಹನ್ ಸಿಂಗ್ ಕಾಯುತ್ತಿದ್ದರೋ ಏನೋ ಎಂದು ಆಗ ಅನಿಸಿತ್ತು. ಯಾಕೆಂದರೆ ಪ್ರಧಾನಿಯಾಗಲು ಒಪ್ಪಿಕೊಂಡ ದಿನದಿಂದ ಅವಮಾನ, ಹೀಯಾಳಿಕೆಯ ನುಡಿಗಳನ್ನೇ ಅವರು ಕೇಳುತ್ತಾ ಬಂದಿದ್ದು. ಸಾಮಾನ್ಯವಾಗಿ ಬಳಸುವ ಭಾಷೆ ಬಗ್ಗೆ ಎಚ್ಚರದಿಂದ ಇರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೇ ಮನಮೋಹನ್‌ಸಿಂಗ್ ಅವರನ್ನು ‘ನಿಕ್ಕಮ್ಮ (ಕೈಲಾಗದವ)’ ‘ದುರ್ಬಲ’, ‘ಅದೃಶ್ಯ’ ಪ್ರಧಾನಿ ಎಂದೆಲ್ಲಾ ಹೀಗಳೆದಿದ್ದರು.

ಅದಕ್ಕೆಲ್ಲ ಉತ್ತರ ನೀಡುವಂತಿತ್ತು ಮನಮೋಹನ್ ಸಿಂಗ್ ಅವರ ಆ ದಿನದ ಧೀರ, ಗಂಭೀರ ನಡಿಗೆ ಮತ್ತು ಹುಸಿನಗೆ.
2008ರ ಜುಲೈ 22ರ  ಆ ದಿನವನ್ನು (ವಿಶ್ವಾಸಮತಯಾಚನೆ ದಿನ) ಮನಮೋಹನ್‌ಸಿಂಗ್ ಮತ್ತು ಅವರ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಆ ದಿನವೇ ತಾನೊಬ್ಬ ದುರ್ಬಲ ಪ್ರಧಾನಿ ಅಲ್ಲ ಎಂದು ಮನಮೋಹನ್ ಸಿಂಗ್ ಸಾಬೀತುಪಡಿಸಿದ್ದು ಮತ್ತು ಅದೇ ದಿನ ಅವರ ಬಿಳಿಬಟ್ಟೆಯ ಮೇಲೆ ಮೊದಲ ಕಳಂಕದ ಕಲೆ ಅಂಟಿಕೊಂಡದ್ದು.

ತುಂಬು ವಿಶ್ವಾಸದಿಂದ ಮನಮೋಹನ್ ಸಿಂಗ್ ಲೋಕಸಭೆ ಪ್ರವೇಶಿಸಿದ್ದ ಮರುಗಳಿಗೆಯಲ್ಲಿಯೇ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರ್ಗಲ್, ಫಗನ್‌ಸಿಂಗ್ ಕುಲಸ್ಥೆ ಮತ್ತು ಮಹಾವೀರ ಭಗೋರಾ ಅವರು ಎರಡು ದೊಡ್ಡ ಚೀಲಗಳನ್ನು ಎತ್ತಿಕೊಂಡು ಸಭಾಧ್ಯಕ್ಷರ ಪೀಠದ ಮಂದಿನ ಅಂಗಳದ ಕಡೆ ನುಗ್ಗಿದ್ದರು.
 ಅವರ ಕೈಯೊಳಗೆ ಸಾವಿರ ರೂಪಾಯಿಗಳ ನೋಟಿನ ಕಂತೆಗಳಿದ್ದವು. ಒಂದು ಕ್ಷಣ ಇಡೀ ಸದನ ಸ್ಥಬ್ದವಾಗಿತ್ತು. ‘ಇದು ವಿಶ್ವಾಸಮತದ ಪರವಾಗಿ ಮತಚಲಾಯಿಸಲು ತಮಗೆ  ಮುಂಗಡವಾಗಿ ಕೊಟ್ಟಿದ್ದ ಒಂದು ಕೋಟಿ ರೂಪಾಯಿ. ಇದನ್ನು ಅಮರ್‌ಸಿಂಗ್ ಸೂಚನೆ ಮೇರೆಗೆ ಅವರ ಸಹಾಯಕರು ತಂದುಕೊಟ್ಟಿದ್ದರು’ ಎಂದು ಅಶೋಕ್ ಅರ್ಗಲ್ ಕೂಗಾಡುತ್ತಿದ್ದರು. ಇತ್ತ ಸೆಂಟ್ರಲ್ ಹಾಲ್‌ನ ಸೈಡ್‌ವಿಂಗ್‌ನಲ್ಲಿ ಕರ್ನಾಟಕದ ಮೂವರು ಬಿಜೆಪಿ ಲೋಕಸಭಾ ಸದಸ್ಯರಾದ ಎಚ್.ಟಿ. ಸಾಂಗ್ಲಿಯಾನಾ, ಮಂಜುನಾಥ ಕುನ್ನೂರು ಮತ್ತು ಮನೋರಮಾ ಮಧ್ವರಾಜ್ ಹಾಗೂ ಜೆಡಿ (ಎಸ್) ಸದಸ್ಯ ಶಿವಣ್ಣ ಕಾಂಗ್ರೆಸ್ ಜತೆ ಕೈಜೋಡಿಸಲು ವೇಷ ಬದಲಿಸುತ್ತಿದ್ದರು. ಎದೆಯುಬ್ಬಿಸಿಕೊಂಡು ಬಂದಿದ್ದ ಮನಮೋಹನ್ ಸಿಂಗ್ ಗದ್ದಲದ ನಡುವೆಯೇ ಸೋನಿಯಾಗಾಂಧಿ ಜತೆಗೂಡಿ ತಲೆತಗ್ಗಿಸಿಕೊಂಡು ಸದನದಿಂದ ಹೊರನಡೆದಿದ್ದರು.
 ಇವೆಲ್ಲವೂ ಹಳೆಯ ಕತೆ, ವಿಕಿಲೀಕ್ಸ್ ಕೇಬಲ್‌ಗಳು ಬಹಿರಂಗಪಡಿಸಿದ್ದರಲ್ಲಿ ಕೂಡಾ ಹೊಸದೇನಿಲ್ಲ, ಒಂದಷ್ಟು ಹೊಸ ಪುರಾವೆಗಳು ಸಿಕ್ಕಿವೆ ಅಷ್ಟೇ.ಆದರೆ  ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸುವಂತಹ ಅಪಾಯಕ್ಕೆ ಆಹ್ವಾನ ನೀಡುವಷ್ಟು ಮತ್ತು ಅಧಿಕಾರ ಉಳಿಸಲು ಸಂಸದರ ಖರೀದಿಯಂತಹ ಹೀನಕೃತ್ಯಕ್ಕೆ ಇಳಿಯುವಷ್ಟು ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ವಿಕಿಲೀಕ್ಸ್ ಕೇಬಲ್‌ಗಳಲ್ಲಿಯೂ ಈ ವರೆಗೆ ಉತ್ತರ ಸಿಕ್ಕಿಲ್ಲ. 2004ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪ್ರಸ್ತಾವವೇ ಇರಲಿಲ್ಲ. ಅದರ ನಂತರ ಯುಪಿಎ ಎಂಬ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ರಚನೆಯಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿಯೂ ಇದರ ಉಲ್ಲೇಖ ಇರಲಿಲ್ಲ.
 ಹೀಗಿದ್ದರೂ ಈ ಒಪ್ಪಂದವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಡುವ ಅವಶ್ಯಕತೆ ಏನಿತ್ತು? ಇದಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಉತ್ತರ ಇಂಧನ ಕೊರತೆ. ಭಾರತ ಇಂಧನ ಕೊರತೆಯಿಂದ ಬಳಲುತ್ತಿರುವುದು ನಿಜ. ಆದರೆ ನಾಗರಿಕ ಪರಮಾಣು ಒಪ್ಪಂದದಿಂದ ಈ ಕೊರತೆ ನೀಗುವುದೇ?
‘ಇಡೀ ವಿಶ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ 35 ಅಣುಸ್ಥಾವರಗಳಲ್ಲಿ 24 ಏಷ್ಯಾದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ವೇಗದ ಓಟ ಭಾರತಕ್ಕೆ ಅನಿವಾರ್ಯ’ ಎಂದು ಒಪ್ಪಂದವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಹೇಳಿದಂತೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತವೇನು ಹಿಂದೆ ಉಳಿದಿರಲಿಲ್ಲ.
ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಭಾರತದಲ್ಲಿ ಆರು ಅಣುಸ್ಥಾವರಗಳು ನಿರ್ಮಾಣಗೊಳ್ಳುತ್ತಿತ್ತು. ಏಳು ಅಣುಸ್ಥಾವರಗಳನ್ನು ನಿರ್ಮಿಸುತ್ತಿದ್ದ ಚೀನಾ ದೇಶವೊಂದೇ ಭಾರತಕ್ಕಿಂತ ಮುಂದೆ ಇತ್ತು. ‘ಈಗ ಭಾರತ ಪರಮಾಣು ಮೂಲದಿಂದ ಶೇಕಡಾ 3ರಷ್ಟು ಇಂಧನ ಪಡೆಯುತ್ತಿದೆ.
ಆದರೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತ ಚೀನಾ ಮತ್ತು ರಷ್ಯಾ ದೇಶಗಳಿಗೆ ಸಮನಾಗಿ ನಿಂತಿದೆ’ ಎಂದು ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ (ಐಎಇಎ)ಯ ಮುಖವಾಣಿ ಪತ್ರಿಕೆಯಲ್ಲಿ  ಆ ದಿನಗಳಲ್ಲಿ ಪ್ರಕಟಗೊಂಡಿದ್ದ ಲೇಖನ ಹೇಳಿತ್ತು.
 2030ನೇ ವರ್ಷದಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಮೂಲಗಳ ಇಂಧನದ ಸ್ಥಿತಿಗತಿ ಏನಿರುತ್ತದೆ ಎಂಬ ಬಗ್ಗೆ ವರದಿಯನ್ನು ಅಮೆರಿಕದ ಇಂಧನ ಇಲಾಖೆಗೆ ಸೇರಿರುವ ‘ಇಂಧನ ಮಾಹಿತಿ ಸಂಸ್ಥೆ’ (ಇಐಎ) ಪ್ರಕಟಿಸಿತ್ತು. ಅದರ ಪ್ರಕಾರ 2005ರಲ್ಲಿ 1,38,000 ಮೆಗಾವಾಟ್‌ನಷ್ಟಿದ್ದ ಭಾರತದ ಇಂಧನ ಸಾಮರ್ಥ್ಯ 2030ನೇ ವರ್ಷದಲ್ಲಿ 3,98,00 ಮೆಗಾವಾಟ್‌ನಷ್ಟು ಆಗಲಿದೆ.
 ಇದರಲ್ಲಿ ಅಣುಶಕ್ತಿಯ ಪಾಲು 20,000 ಮೆಗಾವಾಟ್ ಮಾತ್ರ. ಅಂದರೆ ಇಷ್ಟೆಲ್ಲಾ ಹೊಸ ಅಣುಸ್ಥಾವರಗಳ ನಿರ್ಮಾಣದ ನಂತರವೂ 2030ರ ವೇಳೆಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇಕಡಾ ಐದರಷ್ಟಾಗಲಿದೆ. ಇದನ್ನು ಇಂಧನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ಎನ್ನಬಹುದೇ?
 ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆಯೇ ಕೇಂದ್ರ ಯೋಜನಾ ಆಯೋಗದ ಇಂಧನ ಸಂಬಂಧಿ ಕಾರ್ಯತಂಡ ವರದಿಯೊಂದನ್ನು ನೀಡಿದೆ. ಪರಮಾಣು ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೂ ಅವಕಾಶ ನೀಡುವ ಬಗ್ಗೆಯೂ ಈ ವರದಿಯಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಇವೆಲ್ಲದರ ಪರಿಣಾಮ ಹನ್ನೆರಡನೇ ಯೋಜನೆಯ ಅವಧಿಯಲ್ಲಿ (2012-2017) ನಿಚ್ಚಳವಾಗಿ ಕಾಣಲಿದೆ ಎಂಬ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ.
ಇದರ ಆಧಾರದಲ್ಲಿ ಮಾಡಲಾದ ಅಂದಾಜಿನಂತೆ 11 ಮತ್ತು 12ನೇ ಯೋಜನಾ ಅವಧಿಯಲ್ಲಿ 15,960 ಮೆಗಾವಾಟ್ ಅಣುಶಕ್ತಿ ಉತ್ಪಾದನೆಯಾಗಬಹುದು. ಇದರ ಪ್ರಕಾರವೂ ದೇಶದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇ 6.7 ಮಾತ್ರ. ಇದನ್ನು ಕೂಡಾ ಇಂಧನ ಭದ್ರತೆಯಲ್ಲಿ ನಿರ್ಣಾಯಕ ಎಂದು ಹೇಳಲಾಗದು.
ನಾವೆಲ್ಲ ತಿಳಿದುಕೊಂಡ ಹಾಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ಆಗಬಹುದಾದ ಏಕೈಕ ಲಾಭ ಎಂದರೆ ದೇಶದ ಇಂಧನ ಸಾಮರ್ಥ್ಯದ ಹೆಚ್ಚಳ. ಉಳಿದಂತೆ ಆಗಲಿರುವುದು ನಷ್ಟವೇ. ಉದಾಹರಣೆಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ದೇಶದ ಪರಮಾಣು ಅಸ್ತ್ರ ಕಾರ್ಯಕ್ರಮದ ಗತಿ ಏನು ಎಂಬ ಮೂರು ವರ್ಷಗಳ ಹಿಂದಿನ ಪ್ರಶ್ನೆ ಈಗಲೂ ಜ್ವಲಂತವಾಗಿದೆ. ಇದು ಒಪ್ಪಂದದ ಅತ್ಯಂತ ವಿವಾದಾತ್ಮಕ ಅಂಶ. ಪರಮಾಣು ಶಕ್ತಿಯ ನಾಗರಿಕ ಬಳಕೆಯ ಚಟುವಟಿಕೆಗಳಿಗಷ್ಟೇ ಒಪ್ಪಂದ ಅನ್ವಯವಾಗುವುದರಿಂದ ನಾಗರಿಕ ಮತ್ತು ಮಿಲಿಟರಿ ಬಳಕೆಯ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸಬೇಕಾಗಿದೆ.
ನಮ್ಮಲ್ಲಿರುವ 22 ಅಣು ಸ್ಥಾವರಗಳಲ್ಲಿ ಹದಿನಾಲ್ಕು ಮಾತ್ರ ನಾಗರಿಕ ಬಳಕೆಯ ಉದ್ದೇಶದ್ದು ಎಂದು ಹೇಳಿ ಅವುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಚಕ್ರದೊಳಗೆ ಸೇರಿಸಲು ಭಾರತ ಒಪ್ಪಿಕೊಂಡಿದೆ. ಯುರೇನಿಯಂ ಬಳಕೆಯನ್ನು ಕಡಿಮೆ ಮಾಡಲು ಕಂಡುಹಿಡಿಯಲಾದ ‘ಕಡಿಮೆ ತಿಂದು ಹೆಚ್ಚು ಶಕ್ತಿ ಉತ್ಪಾದಿಸುವ’ ಸ್ವದೇಶಿ ತಂತ್ರಜ್ಞಾನ ಅಳವಡಿಕೆಯ ಫಾಸ್ಟ್ ಬ್ರೀಡರ್ ಸ್ಥಾವರಗಳನ್ನು ನಾಗರಿಕ ಬಳಕೆಯ ಗುಂಪಿನಲ್ಲಿ ಸೇರಿಸಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಇದೆ.
ಈ ಒಪ್ಪಂದದ ನಂತರ ಮಿಲಿಟರಿ ಬಳಕೆಯ ಅಣುಸ್ಥಾವರಗಳು ಮುಂದೆಂದೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಅಮೆರಿಕದ ಪರಮಾಣು ಇಂಧನ ಕಾಯಿದೆ ಪ್ರಕಾರ ‘ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ದೇಶಗಳ ಜತೆ ಆ ದೇಶ ಪರಮಾಣು ಸಹಕಾರ ಸಂಬಂಧ ಹೊಂದುವ ಹಾಗಿಲ್ಲ. ಅದರಿಂದ ಭಾರತಕ್ಕೆ ವಿನಾಯಿತಿ ನೀಡಲೆಂದೇ ಹೈಡ್ ಕಾಯಿದೆ ಎನ್ನುವ ಹೆಸರಲ್ಲಿ ಚರ್ಚೆಗೊಳಗಾಗಿದ್ದ ಹೊಸ ಕಾಯಿದೆಯನ್ನು ಅಮೆರಿಕ ರಚಿಸಿದೆ.
ಈ ಕಾಯಿದೆ ಭಾರತಕ್ಕೆ ಕೆಲವು ವಿನಾಯಿತಿ ನೀಡುವ ಜತೆಯಲ್ಲಿ ಕೆಲವು ಷರತ್ತುಗಳನ್ನು ಹೇರಿದೆ. ಅದರ ಪ್ರಕಾರ ಭಾರತ ಸ್ವತಂತ್ರವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಈ ಷರತ್ತು ಉಲ್ಲಂಘಿಸಿದರೆ ಒಪ್ಪಂದ ತನ್ನಿಂದತಾನೇ ರದ್ದಾಗುತ್ತದೆ. ಹೈಡ್ ಕಾಯಿದೆ ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ವ್ಯಕ್ತವಾದ ವಿರೋಧವನ್ನು ಕಂಡ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ‘ಹೈಡ್ ಕಾಯಿದೆ ಭಾರತಕ್ಕೆ ಅನ್ವಯವಾಗುವುದಿಲ್ಲ, ಅದು ಸಲಹಾ ರೂಪದ್ದು’ ಎಂದು ಮೌಖಿಕವಾಗಿ ಸಮಾಧಾನ ಹೇಳಿದ್ದರು.
ಇದನ್ನೇ ಕಾಂಗ್ರೆಸ್ ಆತ್ಮರಕ್ಷಣೆಗಾಗಿ ಬಳಸುತ್ತಿದೆ. ಆದರೆ ಅಮೆರಿಕ ಬಿಡುಗಡೆಗೊಳಿಸಿರುವ 123 ಒಪ್ಪಂದದ ಪಠ್ಯದಲ್ಲಿನ ಆರ್ಟಿಕಲ್ 2 (ಸಹಕಾರದ ಅವಕಾಶ) ‘... ಎರಡೂ ದೇಶಗಳು ತಮ್ಮಲ್ಲಿನ ಒಪ್ಪಂದ ರಾಷ್ಟ್ರೀಯ ಕಾನೂನುಗಳು ಮತ್ತು ಅವಶ್ಯಕ ಲೈಸೆನ್ಸ್‌ಗಳಿಗೆ ಅನುಗುಣವಾಗಿ ಒಪ್ಪಂದವನ್ನು ಜಾರಿಗೊಳಿಸಬೇಕು...’ ಎಂದು ಹೇಳಿದೆ. ಅಮೆರಿಕದ ರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಯಲ್ಲಿ ಹೈಡ್ ಕಾಯಿದೆ ಸೇರಿಕೊಳ್ಳುವುದರಿಂದ ಅದು ಪರಮಾಣು ಸಹಕಾರ ಒಪ್ಪಂದಕ್ಕೆ ಅನ್ವಯವಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಯ ಮೇಲೆ ಹೇರಲಾಗಿರುವ ಈ ನಿರ್ಬಂಧವನ್ನು ಹಲವಾರು ಹಿರಿಯ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ‘ಹೊಸ ಪರಮಾಣು ಅಸ್ತ್ರಗಳ ತಯಾರಿ ಮಾತ್ರವಲ್ಲ, ಹಳೆಯ ಅಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲು ಕೂಡಾ ಅಣ್ವಸ್ತ್ರ ಪರೀಕ್ಷೆ ಅಗತ್ಯ’ ಎಂದು  ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್‌)ದ ನಿವೃತ್ತ ನಿರ್ದೇಶಕ ಎ.ಎನ್. ಪ್ರಸಾದ್ ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಪರಮಾಣು ಸಹಕಾರ ಒಪ್ಪಂದ ಇನ್ನೊಂದು ರೀತಿಯಲ್ಲಿ ತಮ್ಮ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ರಾಜಿ ಎನ್ನುವ ಆರೋಪವನ್ನು ಎದುರಿಸಬೇಕಾಗಿಬಂದಿರುವುದು.ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ನಮ್ಮ ಇಂಧನ ಸಾಮರ್ಥ್ಯ ಗಣನೀಯವಾಗಿ ಹೆಚ್ಚದೆ ಇದ್ದರೂ, ಈ ಒಪ್ಪಂದದಿಂದಾಗಿ ಸೇನಾ ಬಳಕೆಯ ಪರಮಾಣು ಕಾರ್ಯಕ್ರಮಗಳಿಗೆ ಹಿನ್ನಡೆಯಾದರೂ ಮತ್ತು ದೇಶದ ಭದ್ರತೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಬೇಕಾಗಿ ಬಂದರೂ ಮನಮೋಹನ್ ಸಿಂಗ್ ಅವರು ಯಾಕೆ ಈ ಒಪ್ಪಂದವನ್ನು ಸರ್ಕಾರದ ಜೀವನ್ಮರಣದ ಪ್ರಶ್ನೆ ಮಾಡಿದ್ದರು?
ನಾಗರಿಕ ಬಳಕೆಗಾಗಿ ಅಣುಶಕ್ತಿ ಅಭಿವೃದ್ಧಿಯ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಾಣುವ ಪರಮಾಣು ಸಹಕಾರ ಒಪ್ಪಂದದ ಗುಪ್ತವಾಗಿ ಅಮೆರಿಕ ಮತ್ತು ಭಾರತದ ನಡುವಿನ ಸೇನಾ ಒಪ್ಪಂದವೇ? ಈ ಒಪ್ಪಂದ ಭಾರತವನ್ನು ಚೀನಾ ಎದುರು ಎತ್ತಿಕಟ್ಟುವ ಹುನ್ನಾರವೇ ? ತನ್ನಲ್ಲಿರುವ ಎರಡನೇ ದರ್ಜೆ ಅಣುತಂತ್ರಜ್ಞಾನ ಮತ್ತು ಅಣು ರಿಯಾಕ್ಟರ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಕುದುರಿಸಲಿಕ್ಕೆ ಈ ಒಪ್ಪಂದವನ್ನು ಮಾಡಿಕೊಂಡಿತೇ? ವಿಕಿಲೀಕ್ಸ್ ಕೇಬಲ್‌ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾದ ಅಣುಸ್ಥಾವರಗಳ ಸುರಕ್ಷತೆಯ ಪ್ರಶ್ನೆ ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯನ್ನು ಎದುರಿಸಲಾಗದೆ ಅಲ್ಲಿನ ಅಣುಸ್ಥಾವರಗಳು ಕುಸಿದುಬಿದ್ದನಂತರ ಹುಟ್ಟಿಕೊಂಡಿದೆ.

Monday, March 14, 2011

ಈ ಸರ್ಕಾರಗಳನ್ನು ನಂಬಿರುವ ನಾವೆಷ್ಟು ಸುರಕ್ಷಿತ?

ಮತ್ತೊಬ್ಬರ ಕಷ್ಟಕ್ಕಾಗಿ ಮರುಗಲು ಈಗ ಯಾರಿಗೂ ಪುರುಸೊತ್ತಿಲ್ಲ. ವಿಶ್ವದ ಕನ್ನಡಿಗರನ್ನು ನೆನಪಿಸಿಕೊಳ್ಳಲೆಂದೇ ಆಯೋಜಿಸಲಾಗಿದ್ದ ವಿಶ್ವಕನ್ನಡ ಸಮ್ಮೇಳನದ ಆಯೋಜಕರಿಗೂ, ಕೆಲವು ಗಂಟೆಗಳ ಮೊದಲಷ್ಟೆ ಸುನಾಮಿಯಿಂದ ತತ್ತರಿಸಿ ಹೋದ ಜಪಾನ್‌ನ ನೆನಪಾಗಲಿಲ್ಲ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನಾದರೂ ಆಚರಿಸುವ ಮಾನವೀಯತೆಯನ್ನು ಯಾರೂ ತೋರಿಸಲಿಲ್ಲ.
ಅಲ್ಲಿ ಸಾವು-ನೋವಿಗೀಡಾದವರಲ್ಲಿ ಕನ್ನಡಿಗರೂ ಇರಬಹುದು ಎಂಬ ಸಣ್ಣ ಅನುಮಾನವೂ ಯಾರಲ್ಲಿಯೂ ಮೂಡಲಿಲ್ಲ. ಬರೀ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದರೆ ಇದನ್ನು ಮರೆತುಬಿಡಬಹುದಿತ್ತು. ಅದರೆ ಇದು ವಿಶ್ವದ ವ್ಯಾಪ್ತಿಯ ಕನ್ನಡ ಸಮ್ಮೇಳನ. ಸಮ್ಮೇಳನದ ಸಂಭ್ರಮದ ಮೇಲೆ ಸೂತಕದ ಛಾಯೆ ಬೇಡ ಎಂದು ಎಲ್ಲರೂ ಮರೆತುಬಿಟ್ಟರೇನೋ?
ಉದ್ಯಮಿ ಎನ್.ಆರ್.ನಾರಾಯಣಮೂರ್ತಿಯವರು ತಮ್ಮ ಭಾಷಣದಲ್ಲಿ ಹೇಳಿದ್ದ ಬಹಳಷ್ಟು ವಿಚಾರಗಳಿಗೆ ಜಪಾನ್ ದೇಶಕ್ಕಿಂತ ದೊಡ್ಡ ಮಾದರಿ ಯಾವುದಿದೆ? ಜಪಾನಿಯರಷ್ಟು ಕೆಲಸವನ್ನು ಪ್ರೀತಿಸುವ ಇನ್ನೊಂದು ಜನಾಂಗ ವಿಶ್ವದಲ್ಲಿ ಸಿಗಲಾರದು, ಈ ಬಗ್ಗೆ ದಂತಕತೆಗಳೇ ಇವೆ. ಅಣುಬಾಂಬ್ ಸುಟ್ಟುಹಾಕಿದರೂ ಮತ್ತೆ ಬೂದಿಯಿಂದ ಮೇಲೆದ್ದು ಬಂದವರಂತೆ ಹೊಸನಾಡನ್ನು ಕಟ್ಟಿದವರು ಜಪಾನೀಯರು.
ಕಠಿಣಶ್ರಮ, ಜೀವನೋತ್ಸಾಹ ಮತ್ತು ಸ್ವಾಭಿಮಾನದಲ್ಲಿ ಅವರಿಗೆ ಅವರೇ ಸಾಟಿ ಮತ್ತು ಉಳಿದವರಿಗೆ ಸ್ಫೂರ್ತಿ.ವಿಶ್ವವನ್ನು ತನ್ನ ಅಂಗೈಯಷ್ಟೇ ಚೆನ್ನಾಗಿ ಬಲ್ಲ ವಿಶ್ವಸಂಚಾರಿ ಎನ್.ಆರ್.ನಾರಾಯಣಮೂರ್ತಿಯವರಿಗೆ ಜಪಾನ್ ಅಪರಿಚಿತ ನಾಡಲ್ಲ. ಅವರಾದರೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೊಂದಿರುವ ಜಪಾನೀಯರ ಬಗ್ಗೆ ಒಂದೆರಡು ಅನುಕಂಪದ ನುಡಿಗಳನ್ನಾಡಬಹುದು, ಧೀರ ಜಪಾನಿಯರನ್ನು ಕೊಂಡಾಡಬಹುದು ಎಂದು ನಿರೀಕ್ಷಿಸಿದವರಿಗೂ ನಿರಾಶೆಯೇ ಕಾದಿತ್ತು.
ಉಕ್ಕಿ ಚೆಲ್ಲಾಪಿಲ್ಲಿಯಾಗಿ ಹರಿದ ಕನ್ನಡಾಭಿಮಾನದ ಹುಚ್ಚುಹೊಳೆಯಲ್ಲಿ ಮಾನವೀಯತೆ ಕೂಡಾ ಕೊಚ್ಚಿಹೋಗಿತ್ತು. ಜಪಾನೀಯರಿಗೆ ಖಂಡಿತ ನಮ್ಮ ಅನುಕಂಪದ ನಿರೀಕ್ಷೆ ಇದ್ದಿರಲಾರದು. 1995ರಲ್ಲಿ ಆರುಸಾವಿರ ಜನ ಬಲಿ ತೆಗೆದುಕೊಂಡ ಭೂಕಂಪದ ನಂತರ ಹೊರದೇಶಗಳು ನೆರವಿನ ಹಸ್ತ ಚಾಚಿದಾಗ ನಯವಾಗಿಯೇ ನಿರಾಕರಿಸಿ ಸ್ವಾಭಿಮಾನ ಮೆರೆದ ನಾಡು ಅದು.
ಪ್ರಕೃತಿ ವಿಕೋಪದ ವಿರುದ್ಧದ ಹೋರಾಟದಲ್ಲಿ ಜಪಾನೀಯರು ವಿಶ್ವಕ್ಕೆಲ್ಲ ಮಾದರಿ. ಈ ಕಾರಣಕ್ಕಾಗಿಯಾದರೂ ಕಷ್ಟದಲ್ಲಿರುವ ಜಪಾನ್ ದೇಶವನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ಯಾಕೆಂದರೆ ಇದರಿಂದ ನಾವು ಕಲಿಯುವುದೂ ಇದೆ. ರಿಕ್ಟರ್ ಮಾಪನದಲ್ಲಿ 8.9ರಷ್ಟು ತೀವ್ರತೆಯ ಭೂಕಂಪ ಭಾರತದಲ್ಲಿ ಸಂಭವಿಸಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ಊಹಿಸಲೂ ಭಯವಾಗುತ್ತದೆ.
ಐದು ವರ್ಷಗಳ ಹಿಂದೆ ತಮಿಳುನಾಡಿನ ಕರಾವಳಿಯಲ್ಲಿ ಸಂಭವಿಸಿದ ಹೆಚ್ಚುಕಡಿಮೆ ಇಷ್ಟೇ ತೀವ್ರತೆಯ ಭೂಕಂಪದಿಂದ ಎದ್ದ ಸುನಾಮಿ ದೈತ್ಯಅಲೆಗಳಿಂದಾಗಿ ಆ ರಾಜ್ಯವೊಂದರಲ್ಲೇ ಸುಮಾರು ಎಂಟುಸಾವಿರ ಮಂದಿ ಸಾವಿಗೀಡಾಗಿದ್ದರು.ಇನ್ನೂ ಕಡಿಮೆ ತೀವ್ರತೆಯ (7.6) ಭೂಕಂಪದಿಂದ ಗುಜರಾತ್‌ನಲ್ಲಿ 20,000 ಜನ ಪ್ರಾಣ ಕಳೆದುಕೊಂಡಿದ್ದರು. 1985ರಲ್ಲಿ ಬೀಸಿದ್ದ ಚಂಡಮಾರುತಕ್ಕೆ ಅಮೆರಿಕದಲ್ಲಿ ಐವರು ಬಲಿಯಾಗಿದ್ದರೆ, ಹೆಚ್ಚುಕಡಿಮೆ ಅಷ್ಟೇ ಶಕ್ತಿಶಾಲಿ ಚಂಡಮಾರುತಕ್ಕೆ ಬಾಂಗ್ಲಾದೇಶದಲ್ಲಿ ಐದು ಲಕ್ಷ ಜನ ಸಾವಿಗೀಡಾಗಿದ್ದರು.
1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ನಡೆದಷ್ಟೇ ತೀವ್ರತೆಯ ಭೂಕಂಪ ಹೆಚ್ಚುಕಡಿಮೆ ಅದೇ ಕಾಲದಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದಿತ್ತು. ಇಲ್ಲಿ ಸತ್ತವರು 11,000, ಅಲ್ಲಿ ಸತ್ತಿದ್ದು ಒಬ್ಬನೇ ಒಬ್ಬ. ಪ್ರಕೃತಿ ವಿಕೋಪದಿಂದ ಪೆರುವಿನಲ್ಲಿ ಸಾಯುವವರ ಸರಾಸರಿ ಸಂಖ್ಯೆ 2,900, ಜಪಾನ್‌ನಲ್ಲಿ 63. ಪ್ರಕೃತಿ ವಿಕೋಪದ ವಿಚಾರದಲ್ಲಿ ಅಷ್ಟೊಂದು ಸುಧಾರಿತ ಮುಂಜಾಗ್ರತಾ ಕ್ರಮಗಳನ್ನು ಜಪಾನ್ ಕೈಗೊಂಡಿರುವ ಕಾರಣದಿಂದಾಗಿಯೇ ಅಲ್ಲಿ ಸಾವು-ನೋವು ಕಡಿಮೆ.
ತಮಿಳುನಾಡಿನ ಕರಾವಳಿಗೆ ಸುನಾಮಿ ಅಲೆಗಳು ಬಂದು ಬಡಿದಾಗ ನಮ್ಮಲ್ಲೊಂದು ಸುನಾಮಿ ಮುನ್ಸೂಚನಾ ವ್ಯವಸ್ಥೆ ಇದ್ದಿದ್ದರೆ... ಎಂದು ಅನೇಕರು ಕೈಕೈ ಹಿಸುಕಿಕೊಂಡಿದ್ದರು. ಆಗ ನಮ್ಮಲ್ಲಿ ಸುನಾಮಿ ಮುನ್ಸೂಚನಾ ವ್ಯವಸ್ಥೆಯೇ ಇರಲಿಲ್ಲ ಎನ್ನುವುದು ನಿಜ. ಆದರೆ ಇಂತಹ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೂ ಭೂಕಂಪ ಮಾಪನದ ಮೂಲಕ ಸುನಾಮಿಯ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಸಾಧ್ಯ ಇದೆ.
ಸುನಾಮಿ ಎನ್ನುವುದು ಸಮುದ್ರದೊಳಗಿನ ಭೂಕಂಪದ ಬಾಹ್ಯ ಅವತಾರ ಅಷ್ಟೆ. ಸಮುದ್ರದೊಳಗೆ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಒಮ್ಮೊಮ್ಮೆ ಅವು ಸುನಾಮಿಯಂತಹ ರೌದ್ರ ರೂಪ ಪಡೆಯುತ್ತವೆ. ಸುಮಾತ್ರ ದ್ವೀಪದ ಪಶ್ಚಿಮ ಕಡಲಿನಲ್ಲಿ 2004ರ ಡಿಸೆಂಬರ್ 26ರ ಬೆಳಿಗ್ಗೆ 6.29ಕ್ಕೆ ಸಂಭವಿಸಿದ್ದ ಭೂಕಂಪನದ ಮಾಹಿತಿ ಮರುಗಳಿಗೆಯಲ್ಲಿ ಭಾರತೀಯ ಹವಾಮಾನ ಇಲಾಖೆಗೆ ಗೊತ್ತಾಗಿತ್ತು. ಅಷ್ಟರಲ್ಲಿ ಕೊಲ್ಕೊತ್ತಾ ಮತ್ತು ವಿಶಾಖಪಟ್ಟಣಗಳ ಹವಾಮಾನ ಇಲಾಖೆಗಳಿಗೆ ಕಂಪನ ನಂತರದ ಆಘಾತಗಳ ಸಂದೇಶವೂ ರವಾನೆಯಾಗಿದ್ದವು.
ಆದರೆ ಈ ಭೂಕಂಪನದ ಕೇಂದ್ರ ಎಲ್ಲಿ? ನಮ್ಮ ಕರಾವಳಿಯ ಮೇಲೆ ಪರಿಣಾಮ ಏನು ಎಂಬುದನ್ನು ವಿಶ್ಲೇಷಿಸಲು ಹವಾಮಾನ ಇಲಾಖೆಯ ತಜ್ಞರು ಒಂದು ಗಂಟೆ ಕಾಲ ವ್ಯಯಿಸಿದ್ದರು. ಅಷ್ಟೊತ್ತಿಗೆ ಸುನಾಮಿ ಒಂದು ಸಾವಿರ ಕಿ.ಮೀ.ಕ್ರಮಿಸಿತ್ತು. ಏಳೂವರೆ ಗಂಟೆಗೆ ಭಾರತೀಯ ವಾಯುಸೇನೆಗೆ ಸುದ್ದಿ ತಲುಪಿತ್ತು. ಆಗಲೇ ಅಂಡಮಾನ್ ನಿಕೋಬಾರ್ ನೀರಲ್ಲಿ ಮುಳುಗತೊಡಗಿತ್ತು.
ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಎಚ್ಚರಿಕೆ ನೀಡಲು ಆಗಲೂ ಒಂದೂವರೆ ಗಂಟೆಯ ಸಮಯ ಉಳಿದಿತ್ತು. ಇಂತಹ ಸಂದರ್ಭಗಳಲ್ಲಿ ಪ್ರತಿಕ್ಷಣಕ್ಕೂ ಜೀವದ ಬೆಲೆ ಇರುತ್ತದೆ. ಆದರೆ ಪ್ರಕೃತಿವಿಕೋಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಗೃಹಸಚಿವರ ಕಚೇರಿ ಮತ್ತು ಟೆಕ್ನಾಲಜಿ ಭವನದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಕಚೇರಿಗಳಲ್ಲಿನ ಕೆಂಪುಪಟ್ಟಿ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿಗಳಿಗಿಂತ ಭಿನ್ನವಲ್ಲ.
ಅಲ್ಲಿ ಕೂತಿದ್ದ ಸಚಿವರು ಮತ್ತು ಅವರ ಮಾರ್ಗದರ್ಶಕರಾಗಿರುವ ಸರ್ಕಾರಿ ಬಾಬುಗಳು ವ್ಯಯಮಾಡಿದ್ದು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾದ ಸಬೂಬುಗಳನ್ನು ಹುಡುಕಲು. ಅವರಿಗೆ ಜಪಾನೀಯರು ಮಾದರಿಯಾಗಿದ್ದರೆ ಅಷ್ಟೊಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲವೇನೋ?
ಶಾಂತ ಸಾಗರದಲ್ಲಿ ಸಾಮಾನ್ಯವಾಗಿರುವ ಸುನಾಮಿ ಹಿಂದೂ ಮಹಾಸಾಗರದಲ್ಲಿ ಅಪರೂಪ ಎನ್ನುವ ಅಭಿಪ್ರಾಯ ನಮ್ಮ ತಜ್ಞರಲ್ಲಿ ಈಗಲೂ ಇದೆ. ಅಮೆರಿಕ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಸೇರಿದಂತೆ ಶಾಂತ ಸಾಗರದ ಕರಾವಳಿಯ 26 ದೇಶಗಳು ಕೂಡಿ 1960ರಲ್ಲಿಯೇ ಹವಾಯ್‌ನಲ್ಲಿ ಸುನಾಮಿ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಿದ್ದವು. ವಿಶ್ವಾದ್ಯಂತ ಸುನಾಮಿ ಮುನ್ಸೂಚನಾ ವ್ಯವಸ್ಥೆ ನಿರ್ಮಾಣಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ವಿಜ್ಞಾನಿ ಡಾ.ಟಾಡ್ ಮೂರ್ತಿ ಸುನಾಮಿ ಮುನ್ಸೂಚನಾ ಕೇಂದ್ರ ಸ್ಥಾಪಿಸಲು 1967ರಲ್ಲಿಯೇ ಭಾರತಕ್ಕೆ ಸಲಹೆ ನೀಡಿದ್ದರಂತೆ.
ಅದಕ್ಕೆ ವಿಶಾಖಪಟ್ಟಣವೇ ಸೂಕ್ತ ಸ್ಥಳ ಎಂಬುದನ್ನೂ ಸೂಚಿಸಿದ್ದರಂತೆ. ನಮ್ಮ ಸರ್ಕಾರಗಳು ಆಸಕ್ತಿ ತೋರದಿದ್ದರೂ ಭಾರತಕ್ಕೆ ನೆರವಾಗುವಂತಹ ಮುನ್ಸೂಚನಾ ಕೇಂದ್ರಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ಅವರು ರಚಿಸಿದ್ದರು. ತಮಿಳುನಾಡು ದುರಂತದ ನಂತರ ಕೊನೆಗೂ ಸುನಾಮಿ ಮುನ್ಸೂಚನಾ ಕೇಂದ್ರವೊಂದು ಪ್ರಾರಂಭಗೊಂಡಿದೆ.
ಹೈದರಾಬಾದ್‌ನಲ್ಲಿರುವ ಭಾರತೀಯ ಸುನಾಮಿ ಪೂರ್ವ ಸೂಚನಾ ಕೇಂದ್ರ  ಮಾರ್ಚ್ ಹನ್ನೆರಡರ ಬೆಳಿಗ್ಗೆ 11.24 ಮತ್ತು 12.15ಕ್ಕೆ ಹೊರಡಿಸಿರುವ ಎರಡು ಬುಲೆಟಿನ್‌ಗಳಲ್ಲಿ ಜಪಾನ್‌ನ ಹೊನ್ಷು ಪೂರ್ವ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದ್ದ ಭೂಕಂಪನವನ್ನು ದಾಖಲಿಸಿದೆ. ಎರಡೂ ಬುಲೆಟಿನ್‌ಗಳನ್ನು ಕೇಂದ್ರ ಬಿಡುಗಡೆಗೊಳಿಸಿದ್ದು ಭೂಕಂಪ ನಡೆದ ನಂತರ. ಮತ್ತೆ ಪೂರ್ವ ಸೂಚನೆ ಎಲ್ಲಿದೆ?
ಸುನಾಮಿ ಮುನ್ಸೂಚನಾ ವ್ಯವಸ್ಥೆಯದು ಈ ಸ್ಥಿತಿಯಾದರೆ  ವಿಪತ್ತು ನಿರ್ವಹಣಾ ವ್ಯವಸ್ಥೆಯದು ಇನ್ನೊಂದು ಕತೆ.ಭಾರತದ 25 ರಾಜ್ಯಗಳು ಒಂದಲ್ಲ ಒಂದು ಬಗೆಯ ಪ್ರಕೃತಿ ವಿಕೋಪದ ಭೀತಿಯನ್ನು ಎದುರಿಸುತ್ತಿವೆ. ದೇಶದ ರಾಜಧಾನಿಯೂ ಸೇರಿದಂತೆ ದೇಶದ ಅರ್ಧಭಾಗವನ್ನು ಭೂಕಂಪ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಪ್ರವಾಹ, ಬರ, ಚಂಡಮಾರುತ, ಭೂಕಂಪ ಮಾತ್ರವಲ್ಲ, ಕೈಗಾರಿಕಾ ದುರಂತ (ಭೋಪಾಲ್), ಬಾಂಬುಸ್ಫೋಟ (ಮುಂಬೈ), ಕೋಮುಗಲಭೆ  (ಗುಜರಾತ್), ಸಾಂಕ್ರಾಮಿಕ ರೋಗಗಳು (ಸೂರತ್) ಜನ ತಲ್ಲಣಿಸುವಂತೆ ಮಾಡಿವೆ.ಆದರೆ ಇತ್ತೀಚಿನವರೆಗೂ ‘ವಿಪತ್ತು ನಿರ್ವಹಣಾ ಸಂಸ್ಥೆ’ ಕೃಷಿ ಇಲಾಖೆಯ ಭಾಗವಾಗಿತ್ತು. ಪ್ರಕೃತಿ ವಿಕೋಪ ಎಂದರೆ ಬರ ಮತ್ತು ಪ್ರವಾಹ ಎಂದಷ್ಟೆ ತಿಳಿದುಕೊಂಡಿರುವುದು ಇದಕ್ಕೆ ಕಾರಣ.
ಗುಜರಾತ್‌ನಲ್ಲಿನ ಭೂಕಂಪ ಇಪ್ಪತ್ತು ಸಾವಿರ ಜನರನ್ನು ಬಲಿತೆಗೆದುಕೊಂಡ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ ಅದನ್ನು ತರಾತುರಿಯಲ್ಲಿ ಗೃಹ ಇಲಾಖೆಗೆ ವರ್ಗಾಯಿಸಿತು. ಆ ಕಾಲದಲ್ಲಿ ಭಾರತ-ಪಾಕಿಸ್ತಾನದ ಸಂಬಂಧದಲ್ಲಿ ಕಾಣಿಸಿಕೊಂಡ ಬಿಗುವಿನಿಂದ ಹುಟ್ಟಿದ ಅಣ್ವಸ್ತ್ರ ಬಳಕೆಯ ಭೀತಿ ಕೂಡಾ ಇದಕ್ಕೆ ಕಾರಣ.
ವಿಪತ್ತು ನಿರ್ವಹಣಾ ವ್ಯವಸ್ಥೆ ಅಲ್ಲಿಂದ ಇನ್ನೊಂದು ಹೆಜ್ಜೆ ಮುಂದಿಡಲು ತಮಿಳುನಾಡು ಸುನಾಮಿಗೆ ಬಲಿಯಾಗಬೇಕಾಯಿತು. ಕೊನೆಗೂ 2005ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದರಡಿ ರಚನೆಗೊಂಡ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ಪ್ರಧಾನಮಂತ್ರಿಯೇ ಅಧ್ಯಕ್ಷರು. ಗೃಹ, ಹಣಕಾಸು ಮತ್ತು ಕೃಷಿ ಸಚಿವರು ಸದಸ್ಯರು. ಈ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು.
 ಇದರ ಜತೆಯಲ್ಲಿ ಕೇಂದ್ರ ಗೃಹಖಾತೆಯಲ್ಲಿ ಪ್ರತ್ಯೇಕವಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗ ಇದೆ. ಅದರ ಭಾಗವಾಗಿಯೇ ‘ಬಿಕ್ಕಟ್ಟು ನಿರ್ವಹಣಾ ಸಮಿತಿ’ ಇದೆ. ಇದು ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಡನೆ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಇದು ಮಾಡುವ ಮುಖ್ಯ ಕೆಲಸ ನಷ್ಟದ ಅಂದಾಜು ಮತ್ತು ಪರಿಹಾರ ವಿತರಣೆ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇದು ಇಷ್ಟದ ಕೆಲಸ ಕೂಡಾ ಹೌದು. ಬಿಕ್ಕಟ್ಟು ನಿರ್ವಹಣೆ?
ಅಲ್ಲಿ ಇಲ್ಲಿ ಪ್ರಕೃತಿ ವಿಕೋಪಗಳು ಎದುರಾದಾಗ ಕೇಂದ್ರ ಗೃಹಸಚಿವರು ಎಲ್ಲ ರಾಜ್ಯಗಳಿಗೆ ಪತ್ರ ಬರೆಯುತ್ತಾರೆ. ಶೋಧ ಮತ್ತು ರಕ್ಷಣಾ ವ್ಯವಸ್ಥೆಯ ತಾಲೀಮು, ಅದಕ್ಕೆ ಬೇಕಾದ ಸಲಕರಣೆಗಳ ಖರೀದಿ, ಪರಿಹಾರ ಸಾಮಗ್ರಿಗಳ ದಾಸ್ತಾನು, ಸ್ವಯಂಸೇವಾ ಕಾರ್ಯಕರ್ತರಿಗೆ ತರಬೇತಿ, ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ತಜ್ಞರೊಡನೆ ಸಮಾಲೋಚನೆ ಇತ್ಯಾದಿ ವಿಷಯಗಳ ಬಗ್ಗೆ ಪತ್ರದಲ್ಲಿ ಮಾರ್ಗದರ್ಶನ ಇರುತ್ತದೆ. ಇವುಗಳನ್ನು ರಾಜ್ಯ ಸರ್ಕಾರಗಳು ಪಾಲಿಸುತ್ತಿವೆಯೇ, ಇಲ್ಲವೇ ಎನ್ನುವುದನ್ನು ನೋಡುವ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ.
ರಾಜ್ಯಸರ್ಕಾರಗಳಿಗೆ ಈ ಮಾರ್ಗದರ್ಶನದ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅವುಗಳು ಕೇಂದ್ರ ಸರ್ಕಾರದ ಕಡೆ ನೋಡುವುದು ದುಡ್ಡಿಗಾಗಿ ಮಾತ್ರ. ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ನೆರೆ ನೀರಿನಲ್ಲಿ ಮುಳುಗಿದ್ದಾಗಲೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಜತೆ ಜಗಳಕ್ಕಿಳಿದದ್ದು ದುಡ್ಡಿಗಾಗಿಯೇ.
ದುಡ್ಡೇನೋ ಬಂತು, ಕೆಲಸವಾಯಿತೇ? ಹದಿನಾರು ತಿಂಗಳುಗಳಾದರೂ ನೆರೆಹಾವಳಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆಲ್ಲ 300 ಚದರ ಅಡಿ ವಿಸ್ತೀರ್ಣದ ಮನೆ ಕಟ್ಟಿ ಕೊಡಲಾಗದ ಸರ್ಕಾರ ಸುನಾಮಿ, ಚಂಡಮಾರುತ, ಭೂಕಂಪ ಬಂದರೆ ಜನರನ್ನು ರಕ್ಷಿಸಬಹುದೇ? ಅಂದ ಹಾಗೆ, ಅಲ್ಲೇ ಇದ್ದ ನೆರೆಸಂತ್ರಸ್ತರನ್ನು ಮರೆತಿರುವ ಸರ್ಕಾರ ದೂರದ ಜಪಾನ್‌ನಲ್ಲಿರುವ ನೊಂದ ಜನರನ್ನು ಮರೆತಿದ್ದರಲ್ಲಿ ಆಶ್ಚರ್ಯವೇನಿದೆ!

Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.

Monday, February 28, 2011

ಗೋಧ್ರಾ ಹತ್ಯಾಕಾಂಡದ ತೀರ್ಪು ಹುಟ್ಟಿಸಿರುವ ಪ್ರಶ್ನೆಗಳು

ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಗುಜರಾತ್‌ನ ವಿಶೇಷ ತ್ವರಿತ ನ್ಯಾಯಾಲಯ ನೀಡಿರುವ ತೀರ್ಪನ್ನು ಹೇಗೆಂದು ಅರ್ಥಮಾಡಿಕೊಳ್ಳುವುದು. ಅಪರಾಧಿಗಳಿಗೆ ಶಿಕ್ಷೆಯಾಯಿತೆಂದೇ? ನಿರಪರಾಧಿಗಳು ಬಿಡುಗಡೆಯಾದರೆಂದೇ? ಕೀವು ತುಂಬಿದ ವ್ರಣದಂತೆ ಕಳೆದ ಒಂಬತ್ತು ವರ್ಷಗಳಿಂದ ಒಳಗಿಂದೊಳಗೆ ಹಿಂದೂ- ಮುಸ್ಲಿಂ ಸಮುದಾಯಗಳೆರಡನ್ನೂ ಹಿಂಸಿಸುತ್ತಿದ್ದ  ಒಂದು ಗಾಯವಾದರೂ ಕೊನೆಗೂ ಗುಣವಾಯಿತೆಂದೇ? ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ಪ್ರಕರಣವೊಂದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರದಂತಿರುತ್ತವೆ.
ಆದರೆ ಗುಜರಾತ್ ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ನಂತರವೂ ಬಹಳಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಸುಪ್ರೀಂ ಕೋರ್ಟಿನಿಂದಲೂ ಟೀಕೆಗೊಳಗಾಗಿದ್ದ ಮತ್ತು ‘ಪೂರ್ವಗ್ರಹಪೀಡಿತ, ರಾಜಕೀಯ ಪ್ರೇರಿತ ಮತ್ತು ಅಡ್ಡಕಸುಬಿ’ ಎಂಬ ಆರೋಪ ಹೊತ್ತಿರುವ ಗುಜರಾತ್ ಪೊಲೀಸ್ ಇಲಾಖೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗಿದೆ.
ಕರಸೇವಕರನ್ನೊಳಗೊಂಡಂತೆ 59 ಪ್ರಯಾಣಿಕರ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಗಿಂತಲೂ ಉಗ್ರವಾದ ಶಿಕ್ಷೆಯೇನಾದರೂ ಇದ್ದರೆ ಅದು ಕೂಡಾ ಕಡಿಮೆಯೇ. ಆದರೆ ಈಗ ಅಪರಾಧಿಗಳೆನಿಸಿಕೊಂಡವರೆಲ್ಲರೂ ತಪ್ಪಿತಸ್ಥರೇ? ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆಯೇ? ಬಿಡುಗಡೆಯಾಗಿರುವವರೆಲ್ಲ ನಿರಪರಾಧಿಗಳೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳಿವೆ.
ಮೊದಲನೆಯದಾಗಿ ಗುಜರಾತ್ ಪೊಲೀಸರು ಪ್ರಾರಂಭದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ 135, ಅವರಲ್ಲಿ 22 ಮಂದಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಒಂದಿಬ್ಬರು ಸತ್ತಿದ್ದಾರೆ. ಇನ್ನು ಒಂದಷ್ಟು ಮಂದಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿದೆ.
ಉಳಿದವರಲ್ಲಿ 64 ಮಂದಿ 8-9 ವರ್ಷ ಜೈಲಲ್ಲಿದ್ದು ಈಗ ಖುಲಾಸೆಗೊಂಡಿದ್ದಾರೆ. ಕೊನೆಗೆ ಅಪರಾಧಿ ಸ್ಥಾನದಲ್ಲಿ ಉಳಿದುಕೊಂಡಿದ್ದು ಕೇವಲ 31 ಮಂದಿ. ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ಪ್ರಾರಂಭದಲ್ಲಿ ಪೋಟಾ ಕಾಯಿದೆಯಡಿಯೂ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮೂರು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದ ಕೇಂದ್ರ ಪರಿಶೀಲನಾ ಸಮಿತಿ, ಅದರಲ್ಲಿನ ಯಾವ ಆರೋಪವೂ ಪೋಟಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.
ಸದ್ಯಕ್ಕೆ ಖುಲಾಸೆಗೊಂಡ 64 ಮಂದಿ ತಮಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಭ್ರಮದಲ್ಲಿರುವುದು ನಿಜ (ಎರಡೂ ಕಡೆಯವರೂ ಮೇಲ್ಮನವಿ ಸಲ್ಲಿಸುವುದು ಖಾತರಿಯಾಗಿರುವ ಕಾರಣ ಈ ಸಂತಸ ಕೂಡಾ  ಶಾಶ್ವತವಾದುದೇನಲ್ಲ). ಆದರೆ ಒಬ್ಬ ವ್ಯಕ್ತಿಯ ಅಪರಾಧ- ನಿರಪರಾಧಗಳನ್ನು ಸಾಬೀತುಪಡಿಸಲು ಒಂಬತ್ತು ವರ್ಷಗಳು ಬೇಕೇ? ಅದೂ ತನ್ನ ಉತ್ತಮ ಆಡಳಿತಕ್ಕಾಗಿ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರ ರಾಜ್ಯದಲ್ಲಿ. ಗುಜರಾತ್ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಸಾಕ್ಷಾತ್ ಸುಪ್ರೀಂ ಕೋರ್ಟ್  ಅಪನಂಬಿಕೆ ವ್ಯಕ್ತಪಡಿಸಿದೆ. ನಿವೃತ್ತರಾದ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಮಾನವ ಹಕ್ಕುಗಳ ಸಂಘಟನೆಗಳು ಕೂಡಾ ಅಲ್ಲಿನ ಪೊಲೀಸರ ವಿರುದ್ದ ‘ಆರೋಪಪಟ್ಟಿ’ ಸಲ್ಲಿಸಿವೆ. ಗೋಧ್ರಾ ಹತ್ಯಾಕಾಂಡದ ಆರೋಪಿಗಳಲ್ಲಿ 45 ಮಂದಿ ಈ ತನಿಖೆಯ ಬಗ್ಗೆ ಲಿಖಿತ ಹೇಳಿಕೆಯಲ್ಲಿ  ಸಂಶಯ ವ್ಯಕ್ತಪಡಿಸಿದ್ದರು. ತನಿಖೆಯೇ ಹೀಗಾದರೆ?
ಎರಡನೆಯದಾಗಿ ಪ್ರಮುಖ ಆರೋಪಿಗಳಾದ ಮೌಲ್ವಿ ಸಯೀದ್ ಉಮರ್ಜಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲಾ ಕಲೋಟಾ ಅವರನ್ನು ಖುಲಾಸೆಗೊಳಿಸಲಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿತ 94 ಆರೋಪಿಗಳಲ್ಲಿ ಅಲ್ಲಿನ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಇದ್ದದ್ದು ಇವರಿಬ್ಬರೇ ಎನ್ನುವುದು ಗಮನಾರ್ಹ. ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಹಳೆಯ ಕ್ರಿಮಿನಲ್ ಚಟುವಟಿಕೆಯ ದಾಖಲೆ ಹೊಂದಿದ್ದವರು.
ಸಾಮಾನ್ಯವಾಗಿ ಇಂತಹವರು ವೈಯುಕ್ತಿಕ ಮಟ್ಟದ ದುಷ್ಕೃತ್ಯಗಳನ್ನು ಏಕಾಂಗಿಗಳಾಗಿ ಎಸಗಬಲ್ಲರು. ಆದರೆ ಗೋಧ್ರಾಹತ್ಯಾಕಾಂಡದಂತಹ ದೊಡ್ಡಮಟ್ಟದ ದುಷ್ಕೃತ್ಯವನ್ನು ನಾಯಕನಿಲ್ಲದೆ ಇಂತಹ ಅಡ್ಡಕಸುಬಿ ದುಷ್ಕರ್ಮಿಗಳು ನಡೆಸಲು ಸಾಧ್ಯವೇ? ಹಾಗಿದ್ದರೆ ಅವರಿಗೊಬ್ಬ ಗ್ಯಾಂಗ್ ಲೀಡರ್ ಇರಬೇಕಲ್ಲ? ಅವನು ಯಾರು? ಎಲ್ಲಿದ್ದಾನೆ? ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಗುಜರಾತ್ ಪೊಲೀಸರಿಗೆ ಸಾಧ್ಯವಾಗಿಲ್ಲ.
ಗೋಧ್ರಾ ಘಟನೆಯ ಒಂದು ವರ್ಷದ ನಂತರ ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಬಂಧಿಸಿದಾಗ ಗೋಧ್ರಾ ಮಾತ್ರವಲ್ಲ, ಇಡೀ ಗುಜರಾತ್‌ನ ಮುಸ್ಲಿಮರು ಆಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಮರದ ವ್ಯಾಪಾರಿಯಾಗಿರುವ ಉಮರ್ಜಿ ಗೋಧ್ರಾ ಪ್ರದೇಶದ ದೇವ್‌ಬಂದಿ- ತಬ್ಲೀಗ್ ಜಮಾತ್ ಚಳವಳಿಯ ಪ್ರಮುಖ ನಾಯಕ. ಆರೋಪಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಚಿ ಮುಸ್ಲಿಮರು ಈ ಸಂಘಟನೆಯ ಬೆಂಬಲಿಗರು. ಬಂಧಿತ ಆರೋಪಿಗಳಲ್ಲಿಯೂ ಬಹಳಷ್ಟು ಮಂದಿ ಈ ಸಂಘಟನೆಯ ಜತೆಯಲ್ಲಿ ಸಂಪರ್ಕ ಹೊಂದಿದ್ದವರು. ಈ ಸಂಬಂಧದಿಂದಾಗಿಯೇ ಉಮರ್ಜಿ ದೇಶ- ವಿದೇಶಗಳಿಂದ ಹಣ ಸಂಗ್ರಹಿಸಿ  ಗೋಧ್ರಾ ಘಟನೆಯ ಆರೋಪಿಗಳ ಕುಟುಂಬಕ್ಕೆ ನೀಡುತ್ತಿದ್ದರು. ಗೋಧ್ರಾ ಘಟನೆಯ ನಂತರ ಅಲ್ಲಿ ಶಾಂತಿ ಸ್ಥಾಪನೆಗೆ ಅವರು ಓಡಾಡಿದ್ದರು, ಮುಖ್ಯಮಂತ್ರಿ ನರೇಂದ್ರಮೋದಿ ಗೋಧ್ರಾಕ್ಕೆ ಭೇಟಿ ನೀಡಿದಾಗಲೂ ಜತೆಯಲ್ಲಿದ್ದರು.
ಇಂತಹ ಉಮರ್ಜಿ ಒಂದು ಹೀನಕೃತ್ಯದ ಹಿಂದಿನ ಸಂಚುಕೋರ ಎಂದು ಪೊಲೀಸರು ಹೇಳಿದಾಗ ಗುಜರಾತ್ ಬೆಚ್ಚಿಬಿದ್ದಿತ್ತು. ತನಿಖೆಯ ಕಾಲದಲ್ಲಿ ಪೊಲೀಸರು ಸೋರಿಬಿಡುತ್ತಿದ್ದ ಮಾಹಿತಿ ಆಧರಿಸಿ ಪತ್ರಿಕೆಗಳು ಮಾಡುವ ವರದಿಗಳು ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕನಂತೆ ಚಿತ್ರಿಸಿತ್ತು. ತಾಲಿಬಾನ್ ನಾಯಕ ಉಮರ್ ಅಬ್ದುಲ್ಲಾ ಜತೆ ಉಮರ್ಜಿ ಸಂಪರ್ಕ ಹೊಂದಿದ್ದರೆಂಬ ವದಂತಿಯೂ ಹರಡಿತ್ತು. ಇವರ ಬಂಧನಕ್ಕೆ ಕಾರಣವಾಗಿದ್ದು ಬಂಧಿತ ಜಬೀರ್ ಬಿನಾಯಮಿನ್ ಬೆಹೆರಾ ತಪ್ಪೊಪ್ಪಿಗೆಯಲ್ಲಿ ನೀಡಿದ್ದ ಮಾಹಿತಿ.
‘ಗೋಧ್ರಾ ಹತ್ಯಾಕಾಂಡದ ಹಿಂದಿನ ದಿನ 2002ರ ಫೆಬ್ರುವರಿ 26ರಂದು ರಾತ್ರಿ 9.30 ಗಂಟೆಗೆ ರೈಲ್ವೆನಿಲ್ದಾಣದ ಪಕ್ಕದಲ್ಲಿಯೇ ಇರುವ ಅಮನ್ ಅತಿಥಿಗೃಹದಲ್ಲಿ ಸಂಚಿನ ರೂವಾರಿಗಳು ಸೇರಿದ್ದರು. ಅಲ್ಲಿಗೆ ತಮ್ಮ ಸಹಚರರನ್ನು ಕಳುಹಿಸಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಯನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವಂತೆ ತಿಳಿಸಿದ್ದರು’ ಎಂದು ಆ ಸಭೆಯಲ್ಲಿದ್ದ ಬೆಹೆರಾ ಪೊಲೀಸರಿಗೆ ತಿಳಿಸಿದ್ದೇ ಉಮರ್ಜಿ ಬಂಧನಕ್ಕೆ ಕಾರಣ. ಈಗ ನ್ಯಾಯಾಲಯ ಮುಖ್ಯ ಆರೋಪಿಯಾಗಿದ್ದ ಉಮರ್ಜಿ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ‘ಗೋಧ್ರಾ ಹತ್ಯಾಕಾಂಡ ಅಪಘಾತ ಅಲ್ಲ, ಪೂರ್ವಯೋಜಿತ ಸಂಚು’ ಎಂದು ತೀರ್ಪು ನೀಡಿದೆ. ಮುಖ್ಯ ಸಂಚುಕೋರನೆಂಬ ಆರೋಪ ಹೊತ್ತ ಉಮರ್ಜಿಯ ಖುಲಾಸೆಯಿಂದಾಗಿ ಗೋಧ್ರಾ ಹತ್ಯಾಕಾಂಡ ಸಂಚಿನ ಫಲ ಎನ್ನುವುದಕ್ಕೆ ಇದ್ದ ಪ್ರಬಲ ಸಮರ್ಥನೆಯೊಂದು ದುರ್ಬಲಗೊಂಡಂತಾಗಲಿಲ್ಲವೇ?
ಮೂರನೆಯದಾಗಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ನಡೆದ ಮೂರು ಬಗೆಯ ತನಿಖೆ ಸೃಷ್ಟಿಸಿರುವ ಗೊಂದಲ. ಅಪರಾಧಗಳನ್ನು ಮುಚ್ಚಿಹಾಕಲು ಸ್ವತಂತ್ರ ಭಾರತದ ರಾಜಕಾರಣಿಗಳು ಕಂಡುಕೊಂಡ ಸುಲಭದ ಉಪಾಯ ಎಂದರೆ ಒಂದೇ ಪ್ರಕರಣದ ಬಗ್ಗೆ ಹಲವು ಬಗೆಯ ತನಿಖೆಗಳಿಗೆ ಅವಕಾಶ ಮಾಡಿಕೊಡುವುದು (ಇತ್ತೀಚಿನ ಉದಾಹರಣೆ 2ಜಿ ತರಂಗಾಂತರ ಹಗರಣ). ಈ ತನಿಖಾ ಸಂಸ್ಥೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ವರದಿಗಳನ್ನು ನೀಡಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತದೆ. ಅಷ್ಟರಲ್ಲಿ ಅನ್ಯಾಯಕ್ಕೀಡಾದವರಲ್ಲಿ ದಣಿವು ಕಾಣಿಸಿಕೊಳ್ಳುವುದರಿಂದ ಅವರಲ್ಲಿ ಹೋರಾಟದ ಉತ್ಸಾಹ ಉಳಿದಿರುವುದಿಲ್ಲ, ಸಾಮಾನ್ಯ ಜನತೆಯ ನೆನೆಪಿನ ಶಕ್ತಿಯೂ ಕುಂದಿರುತ್ತದೆ. ‘ಆದದ್ದು ಆಗಿಹೋಯಿತು. ಹಳೆಯದನ್ನು ಕೆದಕುವುದು ಬೇಡ, ಮುಂದಿನ ದಾರಿ ನೋಡುವ’ ಎನ್ನುವ ಬುದ್ಧಿಮಾತುಗಳು ಎಲ್ಲೆಡೆ ಕೇಳತೊಡಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳಲ್ಲೆದರ ನಡುವೆ ಸತ್ಯ ಎಲ್ಲೋ ಮರೆಯಾಗಿ ಬಿಡುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಗೊಂಡ ಸಿಬಿಐ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ವಿಶೇಷ ತನಿಖಾದಳಕ್ಕಿಂತ ಮೊದಲು ಎರಡು ಆಯೋಗಗಳು ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸಿದ್ದವು. ಮೊದಲನೆಯದು ಗುಜರಾತ್ ಸರ್ಕಾರವೇ ನೇಮಿಸಿದ್ದ ನ್ಯಾಯಮೂರ್ತಿಗಳಾದ ಜಿ.ಟಿ. ನಾನಾವತಿ ನೇತೃತ್ವದ ತನಿಖಾ ಆಯೋಗ. 2008ರಲ್ಲಿ ವರದಿ ನೀಡಿದ ಈ ಆಯೋಗ ‘ಗೋಧ್ರಾ ಹತ್ಯಾಕಾಂಡ ಒಂದು ಪೂರ್ವನಿಯೋಜಿತ ಸಂಚು, ಅದು ಅಪಘಾತ ಅಲ್ಲ’ ಎಂದು ಹೇಳಿತ್ತು. ಗೋಧ್ರಾ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ನಿಯಂತ್ರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದ ಕರ್ತವ್ಯ ಚ್ಯುತಿ ನಡೆದಿದೆ ಎಂಬ ಆರೋಪವನ್ನು ಕೂಡಾ ನಾನಾವತಿ ಆಯೋಗ ತಳ್ಳಿಹಾಕಿತ್ತು.
ಆದರೆ ನಾನಾವತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿಯೇ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು  ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿದ್ದರು. 2005ರಲ್ಲಿ ವರದಿ ನೀಡಿದ ಬ್ಯಾನರ್ಜಿ ಅವರು,  ‘ರೈಲಿಗೆ ಹತ್ತಿಕೊಂಡ ಬೆಂಕಿ ಸಂಚಿನ ಫಲ ಅಲ್ಲ, ಅದೊಂದು ಅಪಘಾತ’ ಎಂದು ಹೇಳಿದ್ದರು. ಆದರೆ ಆ ಆಯೋಗವನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲುಪ್ರಸಾದ್ ರಚಿಸಿದ್ದರು ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಬ್ಯಾನರ್ಜಿ ವರದಿಯನ್ನು ಟೀಕಿಸಿದವರೇ ಹೆಚ್ಚು.
ಆದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇಂತಹದ್ದೊಂದು ದೊಡ್ಡ ದುರಂತದ ಬಗ್ಗೆ ಆ ಕಾಲದ ರೈಲ್ವೆ ಸಚಿವ ನಿತೀಶ್‌ಕುಮಾರ್ ಯಾಕೆ ತನಿಖೆಗೆ ಆದೇಶ ನೀಡಿಲ್ಲ ಎನ್ನುವುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಈ ವಿವಾದಗಳಿಂದಾಗಿ ಕೊನೆಗೆ ಗುಜರಾತ್ ಹೈಕೋರ್ಟ್ ಕೂಡಾ ತೀರ್ಪು ನೀಡಿ ‘ಬ್ಯಾನರ್ಜಿ ಆಯೋಗದ ರಚನೆಯೇ ಸಂವಿಧಾನ ವಿರೋಧಿ’ ಎಂದು ಹೇಳಿತ್ತು. ಈ ಕಾರಣದಿಂದಾಗಿ ಬ್ಯಾನರ್ಜಿ ಆಯೋಗದ ತನಿಖಾ ವರದಿಯನ್ನೂ ಯಾರೂ ಚರ್ಚೆಗೆ ಎತ್ತಿಕೊಳ್ಳದಿದ್ದರೂ, ಅದು ಗೋಧ್ರಾ ಹತ್ಯಾಕಾಂಡದ ಕಾರಣಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಗೋಧ್ರಾ ಹತ್ಯಾಕಾಂಡವನ್ನು ಸಂಚು ಎಂದು ಹೇಳಿದ ವಿಶೇಷ ನ್ಯಾಯಾಲಯದ ತೀರ್ಪು ಒಂದು ರೀತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪಾಲಿನ ಗೆಲುವು. ಆಶ್ಚರ್ಯವೆಂದರೆ ಮೋದಿ ಅವರು ಈ ಗೆಲುವನ್ನು ಕುಣಿದಾಡಿ ಆಚರಿಸಿದ ಹಾಗೆ ಕಾಣಲಿಲ್ಲ. ಈ ತೀರ್ಪು ಬಗ್ಗೆ ಕಾಟಾಚಾರದ ಪ್ರತಿಕ್ರಿಯೆ ನೀಡಿ ಅವರು ಮೌನ ತಾಳಿದ್ದಾರೆ. ಯಾಕೆ? ವಿಶೇಷ ತನಿಖಾದಳ ಗೋಧ್ರಾವನ್ನೂ ಒಳಗೊಂಡಂತೆ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದೆ. ಇತ್ತೀಚೆಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮಾಡಿರುವ ‘ಸ್ಕೂಪ್’ ವರದಿ ಪ್ರಕಾರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನರೇಂದ್ರಮೋದಿಯವರು ಅಪರಾಧಿ ಎಂದು  ಎಸ್‌ಐಟಿ ಅಭಿಪ್ರಾಯಪಟ್ಟಿದೆಯಂತೆ.
ದಾಖಲೆಗಳ ನಾಶ, ಕೋಮುದ್ವೇಷ ಪ್ರಚೋದಿಸುವ ಭಾಷಣ, ಗಲಭೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಅಕ್ರಮವಾಗಿ ಸೇರಿಕೊಂಡು ಆದೇಶ ನೀಡುತ್ತಿದ್ದ ಸಚಿವರು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಂಘ ಪರಿವಾರದ ಸದಸ್ಯರ ನೇಮಕ, ನಿಷ್ಪಕ್ಷಪಾತ ನಿಲುವಿನ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ... ಇವು ತನಿಖೆಯಿಂದ ಎಸ್‌ಐಟಿ ಕಂಡುಕೊಂಡ ಮೋದಿಯವರ ‘ಅಪರಾಧ’ಗಳಂತೆ. ಸದ್ಯಕ್ಕೆ ಕಳೆದ ವರ್ಷದ ಮೇ 12 ರಂದು ಎಸ್‌ಐಟಿ ಸಲ್ಲಿಸಿದ್ದ 600 ಪುಟಗಳ ಈ ವರದಿ ಸುಪ್ರೀಂ ಕೋರ್ಟ್‌ನ ಕಪಾಟಿನಲ್ಲಿ ಭದ್ರವಾಗಿದೆ.
ಪತ್ರಿಕೆಯಲ್ಲಿನ ವರದಿ ನಿಜವಾಗಿದ್ದರೆ ಮೋದಿ ಅವರ ಕಷ್ಟದ ದಿನಗಳು ಪ್ರಾರಂಭವಾಗಲಿವೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಸ್‌ಐಟಿ ವರದಿ ಆಧರಿತ ತೀರ್ಪನ್ನು ಒಪ್ಪಿಕೊಂಡ ನಂತರ ಅದೇ ವರದಿ ಆಧರಿತ ಬೇರೆ ತೀರ್ಪನ್ನೂ ಒಪ್ಪಿಕೊಳ್ಳಲೇಬೇಕಲ್ಲಾ? ಈ ವರದಿಯಲ್ಲಿರುವದೇನಾದರೂ ನರೇಂದ್ರ ಮೋದಿಯವರಿಗೂ ಗೊತ್ತಾಗಿ ಅವರು ಮೌನವಾಗಿದ್ದಾರೆಯೇ?

Monday, February 21, 2011

ಮುಂಬೈನಲ್ಲಿ ಕನ್ನಡದ ಕತೆ ಮುಗಿಯುತ್ತಿದೆಯೇ?

ಹುಟ್ಟೂರು ಬಿಟ್ಟು ಬಂದವರು ಮರಳಿ ಹೋದಾಗೆಲ್ಲ ಪ್ರತಿಬಾರಿಯೂ ಊರು ಎಷ್ಟೊಂದು ಬದಲಾಗಿದೆಯಲ್ಲಾ ಎಂದು ಅಚ್ಚರಿ ಪಡುವುದುಂಟು. ಈ ಅಚ್ಚರಿಯೊಳಗೆ ‘ಹೇಗಿದ್ದದ್ದು ಹೇಗಾಗಿ ಹೋಯಿತಲ್ಲಾ’ ಎಂಬ ಒಂದು ಸಣ್ಣ ವಿಷಾದದ ಎಳೆಯೂ ಇರುತ್ತದೆ.ಮುಂಬೈಗೆ ಹೋದಾಗಲೆಲ್ಲ ನನಗೂ ಹೀಗೆ ಅನಿಸುವುದುಂಟು. ನಾನು ಮುಂಬೈಯಲ್ಲಿ ಹುಟ್ಟಿದ್ದು ಮಾತ್ರವಲ್ಲ ಅಲ್ಲಿಯೇ ನಾಲ್ಕನೇ ತರಗತಿ ವರೆಗೆ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ಕಲಿತವನು. ಹಾಗಾಗಿ ಅದು ನನಗೆ ಅಪರಿಚಿತ ಲೋಕವೇನಲ್ಲ. ಕಳೆದ ವಾರ ಮುಂಬೈಗೆ ಹೋಗಿದ್ದಾಗ ಭೇಟಿಯಾದ ಅನೇಕ ಹಿರಿಯ ಕನ್ನಡಿಗರು ‘ ಈ ಮುಂಬೈನಲ್ಲಿ ಕನ್ನಡದ ಕತೆ ಮುಗಿಯಿತು’ ಎಂದು ಕಳವಳ ವ್ಯಕ್ತಪಡಿಸುತ್ತಿದ್ದರು.ಇದೇನು ಮೊದಲ ಸಲವಲ್ಲ, ನಿರ್ಗತಿಕ ಸ್ಥಿತಿಯಿಂದ ಯಶಸ್ಸಿನ ಶಿಖರವನ್ನೇರಿದ ಸಾಧಕ ಕನ್ನಡಿಗರನ್ನು ಹುಡುಕಾಡಿ ವರದಿ ಮಾಡಲು ಇಪ್ಪತ್ತಮೂರು ವರ್ಷಗಳ ಹಿಂದೆ ತಿಂಗಳ ಕಾಲ ಮುಂಬೈ ಸುತ್ತಿದ್ದೆ. ಆಗಲೂ ಭೇಟಿಯಾದವರೆಲ್ಲರೂ ಇದೇ ರೀತಿ ಕಳವಳ ವ್ಯಕ್ತಪಡಿಸಿದ್ದರು. ಆದರೆ ಮುಂಬೈನಲ್ಲಿ ಕನ್ನಡದ ಕತೆ ಮುಗಿಯುತ್ತಿದೆ ಎಂಬ ಭೀತಿ ಎಷ್ಟು ನಿಜವೋ, ಅದು ಇನ್ನೂ ಮುಗಿದಿಲ್ಲ ಎನ್ನುವ ವಾಸ್ತವವೂ ಅಷ್ಟೇ ನಿಜ. ಈ ಎರಡು ಬೆಳವಣಿಗೆಗಳಿಗೆ ರೂಪಕದಂತಿತ್ತು ಕಳೆದ ವಾರ ಗೋರೆಗಾಂವ್ ಕನ್ನಡ ಸಂಘ ನಡೆಸಿದ್ದ ಹದಿಮೂರನೇ ವಿಚಾರಭಾರತಿ ಸಮ್ಮೇಳನ.
ಮೊದಲ ಬಾರಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡದ ಲೇಖಕರಿಗೆ, ಬೆಳಿಗ್ಗೆಯಿಂದ ಸಂಜೆ ವರೆಗೆ ಕೂತಲ್ಲಿಂದ ಕದಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಸುಮಾರು 300-350 ಕನ್ನಡಾಭಿಮಾನಿಗಳನ್ನು ಕಂಡು ಅಚ್ಚರಿಯಾಗಿದೆ. ಆದರೆ ಹದಿಮೂರು ವರ್ಷಗಳ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಮೊದಲನೇ ವಿಚಾರಭಾರತಿ ಸಮ್ಮೇಳನಕ್ಕೆ ಸಾಕ್ಷಿಯಾದವರಿಗೆ ಸ್ವಲ್ಪ ನಿರಾಶೆಯಾಗಿದೆ. ಆ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಸಭಿಕರ ಸಾಮರ್ಥ್ಯದ  ಸಭಾಂಗಣ ತುಂಬಿ ತುಳುಕಾಡಿತ್ತು. ಮುಂಬೈನಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಒಂದೆಡೆ ಸಭಿಕರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಈ ಸಭಿಕರ ಸರಾಸರಿ ವಯಸ್ಸು ಹೆಚ್ಚುತ್ತಿದೆ.
ಯುವ ತಲೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗುತ್ತಿದೆ. ಮೊದಲನೆಯದಕ್ಕಿಂತಲೂ ಎರಡನೆಯದು ಹೆಚ್ಚು ಕಳವಳಕಾರಿ ಬೆಳವಣಿಗೆ. ಇದರಲ್ಲೇನು ವಿಶೇಷ, ಯಾವುದೇ ರಾಜ್ಯದಲ್ಲಿ ಬೇರೆ ರಾಜ್ಯದ ಭಾಷೆಯ ಚಟುವಟಿಕೆಗಳಿಗೆ ಈ ರೀತಿಯ ಪ್ರತಿಕ್ರಿಯೆ ಸಾಮಾನ್ಯವಲ್ಲವೇ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ಮುಂಬೈನಲ್ಲಿ ಈಗಲೂ ಕನ್ನಡದ ಚಟುವಟಿಕೆಗಳು ನಡೆಯುವ ಪ್ರಮಾಣದಲ್ಲಿ  ದೇಶದ ಯಾವುದಾದರೂ ಮತ್ತೊಂದು ಭಾಷೆಯ ಚಟುವಟಿಕೆ ಅದರ ತವರು ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯದಲ್ಲಿ ನಡೆಯುತ್ತಿರುವ ಉದಾಹರಣೆ ಸಿಗಲಾರದು. ಮುಂಬೈ ಮತ್ತು ಕನ್ನಡದ ಈ ಸಂಬಂಧಕ್ಕೆ ಐತಿಹಾಸಿಕ ಪರಂಪರೆ ಇದೆ.
ಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಮಧ್ಯಭಾಗದ ವರೆಗೂ ಮುಂಬೈ ಆಡಳಿತ ಕನ್ನಡಿಗರ ಕೈಯ್ಯಲ್ಲಿಯೇ ಇತ್ತೆಂಬುದನ್ನು ಇತಿಹಾಸಕಾರರು ಸಂಶೋಧನೆಯ ಮೂಲಕ ದಾಖಲಿಸಿದ್ದಾರೆ. ಕನ್ನಡವೇ ಮಾತೃಭಾಷೆಯಾಗಿದ್ದ ಶಿಲಾಹಾರರು ಹದಿಮೂರನೇ ಶತಮಾನದ ವರೆಗೂ ಆಗಿನ ಮುಂಬಯಿ ರಾಜ್ಯವನ್ನಾಳಿದ್ದನ್ನು ಇತಿಹಾಸಕಾರರು ಉಲ್ಲೇಖಿಸುತ್ತಾರೆ.ಈ ರಾಜವಂಶಕ್ಕೆ ಸೇರಿದ ಮುಮ್ಮಣ್ಣಿ ಎಂಬ ಅರಸನಿಂದಲೇ ‘ಮುಂಬಯಿ’ ಎಂಬ ಹೆಸರು ಬಂತು ಎನ್ನುವ ವಾದವೂ ಇದೆ.ಇಲ್ಲಿನ ಸ್ಥಳನಾಮಗಳಲ್ಲಿ ಕನ್ನಡದ ಪ್ರಭಾವ ಇರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಉದಾಹರಣೆಗೆ -ದೊಂಬಿವಿಲಿ  (ಡೊಂಬನಹಳ್ಳಿ) ಕಾಂದಿವಿಲಿ (ಕಂದನಹಳ್ಳಿ),ಬೋರಿವಿಲಿ (ಬೋರನಹಳ್ಳಿ) ಇತ್ಯಾದಿ. ಅಲ್ಲಿನ ಎಲಿಫೆಂಟಾ ಗುಹೆಯಲ್ಲಿರುವ ಮೂರುತಲೆಯ ಮಹೇಶನ ಮೂರ್ತಿ ಕೂಡಾ ಕನ್ನಡಿಗರ ಕೊಡುಗೆ.
ಏಕೀಕರಣಕ್ಕಿಂತ ಮೊದಲು ಕರ್ನಾಟಕದ ಧಾರವಾಡ, ಉತ್ತರ ಕನ್ನಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳು ಮುಂಬಯಿ ಸಂಸ್ಥಾನಕ್ಕೆ ಸೇರಿದ್ದವು. ಈ ಜಿಲ್ಲೆಗಳ ಜನರು ಕೋರ್ಟು-ಕಚೇರಿ ವ್ಯವಹಾರಕ್ಕಾಗಿ ಮುಂಬೈಯನ್ನೇ ಅವಲಂಬಿಸಿದ್ದರು. ಆ ಕಾಲದಲ್ಲಿ ಮರಾಠಿ, ಗುಜರಾತಿ ಜತೆ  ಕನ್ನಡವೂ ರಾಜ್ಯಭಾಷೆಯಾಗಿತ್ತು. ಮುಂಬೈ ವಿಶ್ವವಿದ್ಯಾಲಯದಲ್ಲಿ 1901ರಿಂದಲೇ ಸ್ನಾತಕೋತ್ತರ ಪದವಿಗೆ ಕನ್ನಡ ಭಾಷೆಯನ್ನು ಆರಿಸುವ ಅವಕಾಶ ಇತ್ತು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಲು ಮುಂಬೈ ಮಹಾನಗರಪಾಲಿಕೆ ಮೊದಲಿನಿಂದಲೂ ಅವಕಾಶ ನೀಡುತ್ತಾ ಬಂದಿದೆ. ಹೀಗಾಗಿ 40 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿದ್ದಲ್ಲೆಲ್ಲ ಮುಂಬೈ ಮಹಾನಗರಪಾಲಿಕೆ ಕನ್ನಡ ಶಾಲೆಗಳನ್ನು ತೆರೆಯುತ್ತಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಮಹಾನಗರಪಾಲಿಕೆಯ ಆಡಳಿತದ 50ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳು ಮತ್ತು ಹನ್ನೆರಡು ಕನ್ನಡ ಮಾಧ್ಯಮಿಕ ಶಾಲೆಗಳಿದ್ದವು. ರಾತ್ರಿಶಾಲೆಗಳು ಮುಂಬೈನಲ್ಲಿ ನಡೆಸಿರುವ ಶೈಕ್ಷಣಿಕ ಕ್ರಾಂತಿ ಯಾವುದೇ ರಾಜ್ಯಕ್ಕೆ ಮಾದರಿಯಾದುದು. ಒಂದು ಕಾಲದಲ್ಲಿ ಮುಂಬೈನಲ್ಲಿ ಹನ್ನೆರಡು ಕನ್ನಡ ರಾತ್ರಿ ಶಾಲೆಗಳಿದ್ದವು. ಇದರ ಜತೆಗೆ ಕನ್ನಡಿಗರೇ ಕಟ್ಟಿ ಬೆಳೆಸಿದ ಹಲವಾರು ಯಕ್ಷಗಾನ ತಂಡಗಳು, ಭಜನಾಮಂಡಳಿಗಳು, ಜಾತಿ ಸಂಘಟನೆಗಳು, ಕ್ರೀಡಾತಂಡಗಳಿದ್ದವು. ಮುಂಬೈ ಮತ್ತು ಕನ್ನಡದ ಸಂಬಂಧ ಹುಟ್ಟಿಬೆಳೆದು ಗಟ್ಟಿಗೊಳ್ಳುತ್ತಾ ಸಾಗಿದ್ದು ಹೀಗೆ.
ಆದರೆ ಪರಿಸ್ಥಿತಿ ಬದಲಾಗಿದೆ. ಮುನ್ಸಿಪಾಲಿಟಿ ಕನ್ನಡ ಶಾಲೆಗಳ ಸಂಖ್ಯೆ ಅರ್ಧಕ್ಕೆ ಇಳಿದಿದೆ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕನ್ನಡ ರಾತ್ರಿಶಾಲೆಗಳು ಕೂಡಾ ಒಂದೊಂದಾಗಿ ಮುಚ್ಚುತ್ತಿವೆ. ಮುಂಬೈನಲ್ಲಿರುವ ಯಾವ ಕನ್ನಡಿಗನೂ ತಮ್ಮ ಮಕ್ಕಳನ್ನು ಈ ಕನ್ನಡ ಶಾಲೆಗಳಿಗೆ ಕಳುಹಿಸುತ್ತಿಲ್ಲ. (ಹಾಗೆಂದು ನಿರೀಕ್ಷಿಸುವುದೂ ಮೂರ್ಖತನ) ಮುಂಬೈನ ರಾತ್ರಿ ಶಾಲೆಗಳಿಗೆ ಹೋಗುತ್ತಿದ್ದವರಲ್ಲಿ ಹೆಚ್ಚಿನವರು ಹೋಟೆಲ್ ಕಾರ್ಮಿಕರು. ಆದರೆ ರಾತ್ರಿ ಮುಚ್ಚುವ ಉಡುಪಿ ಹೊಟೇಲ್‌ಗಳಿಗಿಂತ, ರಾತ್ರಿ ತೆರೆಯುವ ಪರ್ಮಿಟ್ ರೂಮ್, ಲೇಡೀಸ್‌ಬಾರ್‌ಗಳೇ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕಾರ್ಮಿಕರು ಯಾವ ಕನ್ನಡ ಶಾಲೆಗಳ ಕಡೆಯೂ ಸುಳಿಯುತ್ತಿಲ್ಲ.  ಇದರ ಜತೆಗೆ ಒಂದು ಕಾಲದಲ್ಲಿ ಕನ್ನಡದ ಕಾರ್ಯಕ್ರಮಗಳ ಕೇಂದ್ರವಾಗಿದ್ದ ಮುಂಬೈನ ಕೋಟೆ ಪ್ರದೇಶದಲ್ಲಿ ಕನ್ನಡದ ಕುಟುಂಬಗಳೇ ಇಲ್ಲ. ಅವರೆಲ್ಲ ಮುಂಬೈನ ಉಪನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ.  ಮುಂಬೈನ ಕನ್ನಡದ ಕಾರ್ಯಕ್ರಮಗಳಿಗೆ ಸಭಿಕರಾಗುತ್ತಿದ್ದ ಒಂದು ದೊಡ್ಡ ವರ್ಗ ಈ ಎಲ್ಲ ಕಾರಣಗಳಿಂದಾಗಿ ದೂರವಾಗಿದೆ.
ಭಾಷೆಯೊಂದು ಅನ್ನ ನೀಡದೆ ಹೋದರೆ ಅದು ಬೆಳೆಯಲಾರದು, ಉಳಿಯಲಾರದು ಎನ್ನುತ್ತಾರೆ. ಆದರೆ ಮುಂಬೈನಲ್ಲಿ ಕನ್ನಡ ಎನ್ನುವುದು ಎಂದೂ ಅನ್ನ ನೀಡುವ ಭಾಷೆಯಾಗಿರಲೇ ಇಲ್ಲ. ಅಲ್ಲಿ ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಹುಸಂಖ್ಯಾತ ಮಂದಿಯ ಮಾತೃಭಾಷೆ ಕನ್ನಡ ಅಲ್ಲ, ಅದು ತುಳು. ಮುಂಬೈ ಕನ್ನಡಿಗರಲ್ಲಿ ಬಹುಸಂಖ್ಯೆಯಲ್ಲಿ ಈಗಲೂ ಇರುವುದು ದಕ್ಷಿಣ ಕನ್ನಡಿಗರೇ. ಹವ್ಯಾಸ ರೂಪದಲ್ಲಿ ಕನ್ನಡವನ್ನು ಬೆಳೆಸಿದ ಈ ತುಳುವ ಕನ್ನಡಿಗರಲ್ಲಿದ್ದದ್ದು ಕನ್ನಡದ ಮೇಲಿನ ನಿಸ್ವಾರ್ಥ ಪ್ರೀತಿ ಅಷ್ಟೇ. ಮುಂಬೈನಲ್ಲಿ ಕನ್ನಡ ಸಂಘಟನೆಯ ಮೂಲಪುರುಷನೆನಿಸಿಕೊಂಡ ಕಣ್ಣಂಗಾರು ರಾಮ ಪಂಜಿ ಅವರ ಜೀವನವೇ ಇದಕ್ಕೆ ಸಾಕ್ಷಿ.
ಉಡುಪಿ ಜಿಲ್ಲೆಯ ಹೆಜಮಾಡಿಯಿಂದ 1858ರಲ್ಲಿ ಮುಂಬೈಗೆ ಓಡಿಹೋದ ಅನಕ್ಷರಸ್ಥನಾದ ಹದಿನಾಲ್ಕರ ಮೊಗವೀರ ಬಾಲಕ ರಾಮ ಪಂಜಿ ಮುಂದೆ ಕನ್ನಡವನ್ನು ಕಲಿತು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಿದವರು. ಇದಕ್ಕೆ ಮೇಲ್ಜಾತಿ ಜನರಿಂದ ವಿರೋಧ ಬಂದಾಗ ಈ ಮಹಾಕಾವ್ಯಗಳ ಅಧ್ಯಯನಕ್ಕೆಂದೇ ಶ್ರಿಮದ್ಭಾರತ ಮಂಡಳಿ ಸ್ಥಾಪಿಸಿದ್ದರು. ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಈ ಮಂಡಳಿ ಮುಂಬೈನ ಮೊದಲ ಕನ್ನಡ ಸಂಸ್ಥೆ. ನಂತರದ ದಿನಗಳಲ್ಲಿ ರಾಮಪಂಜಿ ಅವರು ‘ಶ್ರಿ ಶಂಕರ ಸಂಹಿತೆ’ ಮತ್ತು ‘ತುರಂಗ ಭಾರತ’ ಎಂಬ ಎರಡು ಗ್ರಂಥಗಳನ್ನು ಹಳೆಗನ್ನಡದಲ್ಲಿಯೇ ರಚಿಸಿದರು. ಇಂತಹ ಕನ್ನಡದ ಕಟ್ಟಾಳುಗಳನ್ನು ಈಗಿನ ಮುಂಬೈನಲ್ಲಿ ಕಾಣುವುದು ಕಷ್ಟ. ಹಳೆತಲೆಮಾರಿನ ದಕ್ಷಿಣ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಪ್ರೀತಿ ಇದೆ. ಆದರೆ ಅವರ ಕುಟುಂಬದಲ್ಲಿನ ಹೊಸ ತಲೆಮಾರಿಗೆ ಕನ್ನಡ ಬಾರದು. ಮನೆಯೊಳಗೆ ತುಳು, ಹೊರಗೆ ಹಿಂದಿ, ಇಂಗ್ಲಿಷ್, ಮರಾಠಿ.
ಮುಂಬೈನಲ್ಲಿ ಕನ್ನಡಿಗರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ.

ಈಗಲೂ ಮುಂಬೈನಲ್ಲಿ ಕನ್ನಡಿಗರ ಜೈತ್ರಯಾತ್ರೆ ಮುಂದುವರಿದಿದೆ. ಅಲ್ಲಿರುವ ಸುಮಾರು 20 ಸಾವಿರ ಹೋಟೆಲ್‌ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕನ್ನಡಿಗರ ಒಡೆತನದಲ್ಲಿವೆ. ಬ್ಯಾಂಕ್ ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿಯೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಖ್ಯಾತ ನಟ, ನಿರ್ದೇಶಕ ಗುರುದತ್ ಅವರಿಂದ ಹಿಡಿದು ಇತ್ತೀಚಿನ ಐಶ್ಚರ್ಯ ರೈ ವರೆಗೆ ಬಾಲಿವುಡ್‌ನಲ್ಲಿ ಮಿಂಚಿಹೋದ ಮತ್ತು ಈಗಲೂ ಮಿಂಚುತ್ತಿರುವ ತಾರೆಗಳ ಪಟ್ಟಿ ಬೆಳೆಯುತ್ತಲೇ ಇದೆ. ರಾಜಕೀಯ ಕ್ಷೇತ್ರದಲ್ಲಿಯೂ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇವರೆಲ್ಲ ಕರ್ನಾಟಕದವರು ನಿಜ, ಆದರೆ ಕನ್ನಡಿಗರಲ್ಲ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಕನ್ನಡಿಗರೆಂದು ಹೇಳಿಕೊಂಡು ನಾವು ಮೆರೆದಾಡಿದರೂ ಮುಂಬೈನಲ್ಲಿ ಹುಟ್ಟಿಬೆಳೆದ ಅವರಿಗೆ ಕನ್ನಡ ಬರುವುದಿಲ್ಲ, ತುಳು ಗೊತ್ತು ಅಷ್ಟೇ. ಕನ್ನಡದ ಕಾರ್ಯಕ್ರಮಗಳಿಗೆ ಕೈಯೆತ್ತಿ ದೇಣಿಗೆ ಕೊಡುತ್ತಿರುವ ಕನ್ನಡಿಗ ಹೋಟೆಲ್ ಸೇಟ್‌ಗಳ ಮಕ್ಕಳ ಕತೆಯೂ ಇದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಿಧಾನವಾಗಿ ಮುಂಬೈ ಮತ್ತು ಕನ್ನಡದ ಕೊಂಡಿ ಕಳಚುತ್ತಿದೆ. ಮುಂಬೈನಲ್ಲಿರುವ ಸುಮಾರು 200 ಕನ್ನಡ ಸಂಸ್ಥೆಗಳಲ್ಲಿರುವ ಯಾರನ್ನೂ ಕೇಳಿದರೂ ಇದೇ ವಿಷಾದದ ರಾಗ ಹೊರಡಿಸುತ್ತಾರೆ. 
ಹಾಗಿದ್ದರೆ ಮುಂಬೈ ಕನ್ನಡಿಗರು ಏನು ಮಾಡುತ್ತಿದ್ದಾರೆ? ಹೊಟ್ಟೆಪಾಡಿನ ಕೆಲಸದ ಹೊರತಾಗಿಯೂ ಬೇರೆ ಯಾವ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರ ಅಲ್ಲಿನ ಸ್ಥಳೀಯ ಕನ್ನಡ ದಿನಪತ್ರಿಕೆಗಳಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಅಂಕಣದಲ್ಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಬಾಂದ್ರಾದಲ್ಲಿ ನಡೆಯುತ್ತಿದ್ದ ಜುಮಾದಿ ಭೂತದ ಕೋಲ ನೋಡಿ ಮೂಕವಿಸ್ಮಿತನಾಗಿದ್ದೆ. ಅಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ.ಬಿ. ಕೋಟ್ಯಾನ್ ತಮ್ಮ ಕುಟುಂಬದ ದೈವ, ಜುಮಾದಿಯನ್ನು ಮುಂಬೈಗೆ ಎಳೆದುಕೊಂಡು ಬಂದು ತಮ್ಮ ಮನೆಯಲ್ಲಿಯೇ ‘ಸಾನ’ ನಿರ್ಮಿಸಿ ಕೋಲ ನಡೆಸುತ್ತಿದ್ದರು. ಅದೇ ಕಾಲದಲ್ಲಿ ಬೊರಿವಿಲಿಯಲ್ಲಿಯೂ ಬೈದರ್ಕಳ ನೇಮ ನಡೆಯುತ್ತಿತ್ತು. ಆದರೆ ಈಗ ನೇಮ, ಕೋಲ, ಬಲಿ, ಅಗೆಲ್, ಯಾವುದಕ್ಕೂ ದಕ್ಷಿಣಕನ್ನಡಿಗರು  ಊರಿಗೆ ಹೋಗಬೇಕಾಗಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚುಕಡಿಮೆ ಎಲ್ಲ ಜನಪ್ರಿಯ ಭೂತಗಳನ್ನು ಅವರು ಮುಂಬೈಗೆ ಹೊತ್ತುಕೊಂಡು ಬಂದಿದ್ದಾರೆ. ಜುಮಾದಿ,ಜಾರಂದಾಯ, ಬೈದರ್ಕಳ, ಪಂಜುರ್ಲಿ, ಕಲ್ರುಟ್ಟಿ,ವರ್ತೆ... ಹೀಗೆ ಸಾಲುಸಾಲು ಭೂತಗಳ ಕೋಲ ಮುಂಬೈನಲ್ಲಿ ನಡೆಯುತ್ತಿದೆ. ಇದರ ಜತೆಗೆ ಗಲ್ಲಿಗಲ್ಲಿಯಲ್ಲಿ ಹುಟ್ಟಿಕೊಂಡಿರುವ ದರ್ಶನದ ಪಾತ್ರಿಗಳ ಮನೆಯಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಶನೀಶ್ವರ, ಸತ್ಯನಾರಾಯಣ, ಕಾಳಿ, ದುರ್ಗೆ ಪೂಜೆಗಳು, ಅಯ್ಯಪ್ಪ ಆರಾಧನೆಗಳು ನಿತ್ಯದ ಕಾರ್ಯಕ್ರಮಗಳಾಗಿವೆ.
ಎಲ್ಲ ವ್ಯಾಪಾರಿಗಳಂತೆ ದೈವಭೀರುಗಳಾಗಿರುವ ಇಲ್ಲಿನ ಹೋಟೆಲ್ ಸೇಟ್‌ಗಳು ಈ ಕಾರ್ಯಕ್ರಮಗಳಿಗೆ ನೀರಿನಂತೆ ಹಣ ಚೆಲ್ಲಿ ಪುಣ್ಯಸಂಪಾದನೆ ಮಾಡುತ್ತಿದ್ದಾರೆ. ಕನ್ನಡದಿಂದ ದೂರವಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ಕನ್ನಡಿಗರೆಲ್ಲ ಈ ಭೂತ, ದೈವ, ದೇವರ ಪದತಲದಲ್ಲಿದ್ದಾರೆ. ಮುಂಬೈನಿಂದ ಕಾಲು ಕೀಳುತ್ತಿರುವ ಕನ್ನಡವನ್ನು ಉಳಿಸಲು ದೇವರಿಗಾದರೂ ಮೊರೆ ಇಡೋಣವೆಂದರೆ ಮುಂಬೈ ಮಟ್ಟಿಗೆ ಆತನೂ ಕನ್ನಡ ವಿರೋಧಿ.